ದಕ್ಷಿಣ ಕೊರಿಯಾದಲ್ಲಿ ಆ.1ರಿಂದ 12ರ ವರೆಗೆ ನಡೆಯುತ್ತಿರುವ 25ನೇ ವಿಶ್ವ ಜಾಂಬೂರಿಗೆ ಚಂಡಮಾರುತ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕರ್ನಾಟಕದ 124 ಮಂದಿ ಸೇರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಎಲ್ಲ 60 ಸಾವಿರ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಮಂಗಳೂರು (ಆ.10) :  ದಕ್ಷಿಣ ಕೊರಿಯಾದಲ್ಲಿ ಆ.1ರಿಂದ 12ರ ವರೆಗೆ ನಡೆಯುತ್ತಿರುವ 25ನೇ ವಿಶ್ವ ಜಾಂಬೂರಿಗೆ ಚಂಡಮಾರುತ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕರ್ನಾಟಕದ 124 ಮಂದಿ ಸೇರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಎಲ್ಲ 60 ಸಾವಿರ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಕೊರಿಯಾದ ಸಮುದ್ರ ತೀರದ ಸೆಮಾಂಗಮ್‌ ಎಂಬ ಪ್ರದೇಶದಲ್ಲಿ ವಿಶ್ವ ಜಾಂಬೂರಿ ಆಯೋಜಿಸಲಾಗಿತ್ತು. ಸುಮಾರು 153 ದೇಶಗಳಿಂದ ಸ್ಕೌಟ್‌, ಗೈಡ್‌್ಸ ಶಿಬಿರಾರ್ಥಿಗಳು, ಶಿಕ್ಷಕರು ಸೇರಿ 60 ಸಾವಿರ ಮಂದಿ ಭಾಗವಹಿಸಿದ್ದರು. ಭಾರತದಿಂದ 380 ಮಂದಿ, ಕರ್ನಾಟಕದಿಂದ 124(ದಕ್ಷಿಣ ಕನ್ನಡದ 58 ಮಂದಿ ಸೇರಿ)ಮಂದಿ ಪಾಲ್ಗೊಂಡಿದ್ದರು. ಆ.1ರಿಂದ 7ರ ವರೆಗೆ ಜಾಂಬೂರಿ ನಿರಾತಂಕವಾಗಿ ನಡೆದಿದೆ. ಆದರೆ ಟೈಪೋನ್‌ ಚಂಡಮಾರುತ ಕೊರಿಯಾ ಕರಾವಳಿ ತೀರಕ್ಕೆ ಅಪ್ಪಳಿಸುವ ಭೀತಿ ಎದುರಾಗಿದೆ. ಈ ಬಗ್ಗೆ ಆ ದೇಶದ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಮುದ್ರ ಸನಿಹದ 5-6 ಕಿ.ಮೀ. ದೂರದ ಪ್ರದೇಶದಲ್ಲಿ ಆಯೋಜಿಸಿದ್ದ ವಿಶ್ವ ಜಾಂಬೂರಿಯನ್ನು ಸುಮಾರು 100 ಕಿ.ಮೀ. ದೂರದ ವನ್‌ವಾಂಗ್‌ ವಿಶ್ವವಿದ್ಯಾಲಯ ಕ್ಯಾಂಪಸ್‌ಗೆ ಸ್ಥಳಾಂತರಿಸಲಾಯಿತು.

ಜಾಗತಿಕ ತಾಪಮಾನ ಏರಿಕೆ ಎಫೆಕ್ಟ್: ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಹೆಚ್ಚಳ!

ಒಂದು ದಿನ ಜಾಂಬೂರಿ ಸ್ಥಗಿತ: ಚಂಡಮಾರುತದ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಎಲ್ಲರನ್ನೂ ಸ್ಥಳಾಂತರಿಸಬೇಕಾಗಿ ಬಂದಿದ್ದರಿಂದ ಮಂಗಳವಾರ ಜಾಂಬೂರಿ ಚಟುವಟಿಕೆಯನ್ನು ದಿನದ ಮಟ್ಟಿಗೆ ಸ್ಥಗಿತಗೊಳಿಸಬೇಕಾಯಿತು.

ಕೇವಲ ಎರಡು ದಿನಗಳಲ್ಲಿ ಬಸ್‌ ಮೂಲಕ ಎಲ್ಲರನ್ನೂ ಸ್ಥಳಾಂತರಿಸಲು ಕೊರಿಯಾ ಸ್ಕೌಟ್‌ ಅಸೋಸಿಯೇಷನ್‌(Korea Scout Association) ಸೂಕ್ತ ಕ್ರಮ ಕೈಗೊಂಡಿತ್ತು. ಸೋಮವಾರ ಬಹುತೇಕ ಮಂದಿಯನ್ನು ಬೇರೆ ಕ್ಯಾಂಪ್‌ಗೆ ಸ್ಥಳಾಂತರಿಸಲಾಗಿದೆ. ಉಳಿದರನ್ನು ಮಂಗಳವಾರ ಸ್ಥಳಾಂತರಿಸಲಾಗಿದೆ.

ಕೊರಿಯಾದಲ್ಲಿ ವಿಶ್ವ ಜಾಂಬೂರಿ ಬಹಳ ಶಿಸ್ತು ಹಾಗೂ ಅಚ್ಚುಕಟ್ಟಿನಿಂದ ನಡೆಯುತ್ತಿದೆ. ಚಂಡಮಾರುತ ಅಪಾಯದ ಮುನ್ಸೂಚನೆ ಇದ್ದಾಗ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಕೂಡ ಗೊಂದಲ ಇಲ್ಲದೆ ಅಲ್ಲಿನ ಸ್ಕೌಟ್‌ ಅಸೋಸಿಯೇಷನ್‌ ನಿರ್ವಹಿಸಿದೆ. ಈ ಜಾಂಬೂರಿ ಆ.11ರಂದು ಸಿಯೋಲ್‌ನಲ್ಲಿ ಸಮಾರೋಪಗೊಳ್ಳಲಿದೆ. ಕರ್ನಾಟಕ ಸೇರಿ ದೇಶ, ವಿದೇಶಗಳ ಎಲ್ಲರೂ ಕ್ಷೇಮದಿಂದಿದ್ದಾರೆ. ಹಾಗಾಗಿ ಯಾರೂ ಭೀತಿ, ಭಯಪಡುವ ಅಗತ್ಯವಿಲ್ಲ ಎಂದು ದ.ಕ. ಸ್ಕೌಟ್‌, ಗೈಡ್‌್ಸ ತಂಡದ ಮುಖ್ಯಸ್ಥ, ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಸಂಸ್ಥೆ ಅಧ್ಯಾಪಕ ಪ್ರಕಾಶ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಇನ್ನು 2 ವರ್ಷದಲ್ಲಿ ಇಂಟರ್ನೆಟ್‌ ಅಂತ್ಯ, ಆರ್ಥಿಕತೆ ಮೇಲೆ ತೀವ್ರ ಪರಿಣಾಮ: ಇದರ ಹಿಂದಿದೆ ಅಚ್ಚರಿಯ ಕಾರಣ!