Asianet Suvarna News Asianet Suvarna News

ಮಹತ್ವದ ಎರಡು ಆದೇಶ: ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್

* ಕರ್ನಾಟಕ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್
* ಎರಡು ಮಹತ್ವದ ಆದೇಶ ಹೊರಡಿಸಿದ ಕರ್ನಾಟಕ ಸರ್ಕಾರ
 * ನೌಕರರ ಸಾರ್ವತ್ರಿಕ ವರ್ಗಾವಣೆಗೆ ಸಂಬಂಧಿಸಿ ಮಾರ್ಗಸೂಚಿ ಪ್ರಕಟ

transfer of Karnataka government employees-from May 31 to June 15th rbj
Author
Bengaluru, First Published May 1, 2022, 12:28 PM IST

ಬೆಂಗಳೂರು, (ಮೇ.01): ಕಾರ್ಮಿಕ ದಿನಾಚರಣೆಯಂದೇ ವರ್ಗಾವಣೆ ನಿರೀಕ್ಷೆಯಲ್ಲಿರುವ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದೆ.  2022-23ನೇ ಸಾಲಿನಲ್ಲಿ ಮಾಡಲಾಗುವ ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ಸಂಬಂಧಿಸಿ ಮಾರ್ಗಸೂಚಿಗಳನ್ನು ಹೊರಡಿಸಿರುವ ಸರಕಾರ, ಆಯಾ ಇಲಾಖಾ ಸಚಿವರಿಗೆ ವರ್ಗಾವಣೆ ಅಧಿಕಾರ ನೀಡಿದೆ.

ಸಿಬಂದಿ ಮತ್ತು ಆಡಳಿತ ಸುಧಾರಣ ಇಲಾಖೆ ಶನಿವಾರ ಈ ಆದೇಶ ಹೊರಡಿಸಿದ್ದು, ಮಾರ್ಗಸೂಚಿ ಪ್ರಕಾರ, ಪ್ರತಿ ವರ್ಷ ಮೇ ಮತ್ತು ಜೂನ್‌ ತಿಂಗಳಲ್ಲಿ ಮಾತ್ರ ವರ್ಗಾವಣೆಗಳನ್ನು ಮಾಡಬಹುದು.

ಈ ಹಿನ್ನೆಲೆಯಲ್ಲಿ 2022-23ನೇ ಸಾಲಿಗೆ ಎ, ಬಿ, ಸಿ ಮತ್ತು ಡಿ ಗ್ರೂಪ್‌ ಅಧಿಕಾರಿ/ನೌಕರರಿಗೆ ಅನ್ವಯವಾಗುವಂತೆ ಒಂದು ಜ್ಯೇಷ್ಠತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇ.6ನ್ನು ಮೀರದಂತೆ 2022ರ ಮೇ 1ರಿಂದ ಜೂ.15ರ ವರೆಗೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖಾ ಸಚಿವರಿಗೆ ಅಧಿಕಾರ ನೀಡಿದೆ. ಇದರಿಂದ ವರ್ಗಾವಣೆ ನಿರೀಕ್ಷೆಯಲ್ಲಿದ್ದ ನೌಕರರಿಗೆ ಅನುಕೂಲವಾಗಲಿದೆ. ತಮಗೆ ಬೇಕಾದ ಸ್ಥಳಗಳಿಗೆ ನೀತಿ-ನಿಯಮಗಳ ಮೂಲಕ ವರ್ಗಾವಣೆ ತೆಗೆದುಕೊಳ್ಳಬಹುದಾಗಿದೆ.

ಪಿಎಸ್‌ಐ ನೇಮಕಾತಿ ರದ್ದುಗೊಳಿಸಿ ಸರಕಾರ ಮಹತ್ವದ ಆದೇಶ

ಸರ್ಕಾರಿ ನೌಕರನ 2ನೇ ಪತ್ನಿ ಮಕ್ಕಳಿಗೂ `ಅನುಕಂಪ ನೌಕರಿ'
 ಸರ್ಕಾರಿ ನೌಕರನ 2ನೇ ಪತ್ನಿ ಅಥವಾ ನಂತರದ ಪತ್ನಿಯಿಂದ ಜನಿಸಿದ ಮಕ್ಕಳನ್ನು ಸಹ ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಪರಿಗಣಿಸುವಂತೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.

ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996 ಅನ್ವಯ ಸರ್ಕಾರಿ ನೌಕರರು ಸೇವೆಯಲ್ಲಿ ಇರುವಾಗ ಮೃತಪಟ್ಟಲ್ಲಿ ಅವರ ಅವಲಂಬಿತರಲ್ಲಿ ಅರ್ಹರಾದ ಒಬ್ಬರಿಗೆ ನಿಯಮಗಳಲ್ಲಿ ನಿಗದಿಪಡಿಸಿರುವ ಷರತ್ತು ಮತ್ತು ನಿಬಂಧನೆಗಳನ್ನು ಪೂರೈಸುವ ಷರತ್ತಿಗೆ ಒಳಪಟ್ಟು ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡಬಹುದಾಗಿತ್ತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹೊರಡಿಸಿದ್ದ ಸರ್ಕಾರದ ಸುತ್ತೋಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ.

2022 ರ ಫೆ.24 ರಂದು ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್ ಸರ್ಕಾರಿ ನೌಕರನ ಎರಡನೇ ಪತ್ನಿಯಿಂದ ಜನಿಸಿದ ಮಕ್ಕಳು ಎನ್ನುವ ಕಾರಣಕ್ಕೆ ಮಕ್ಕಳಲ್ಲಿ ತಾರತಮ್ಯ ಮಾಡುವುದು ಭಾರತದ ಸಂವಿಧಾನದ ಅನುಚ್ಛೇದ 16(2) ರ ಉಲ್ಲಂಘನೆಯಾಗುತ್ತದೆ. ಹಾಗಾಗಿ ಇಂತಹ ಮಕ್ಕಳನ್ನು ಅನುಕಂಪದ ಆಧಾರದ ಮೇಲೆ ಪರಿಗಣಿಸದೇ ಇರುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ನೌಕರನ 2ನೇ ಪತ್ನಿ ಅಥವಾ ನಂತರದ ಪತ್ನಿಯಿಂದ ಜನಿಸಿದ ಮಕ್ಕಳನ್ನು ಸಹ ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಪರಿಗಣಿಸುವಂತೆ  ಆದೇಶ ಹೊರಡಿಸಿದೆ.

Follow Us:
Download App:
  • android
  • ios