ರಾಜ್ಯದಲ್ಲಿ ಎಸ್.ಸಿ./ಎಸ್.ಟಿ. ಸರ್ಕಾರಿ ನೌಕರರಿಗೆ ಮುಂಬಡ್ತಿಯಲ್ಲಿ ರೋಸ್ಟರ್ ಬಿಂದುಗಳ ಅನುಸರಣೆ ಇಲ್ಲದಿರುವ ಬಗ್ಗೆ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಕೆಲವು ಇಲಾಖೆಗಳಲ್ಲಿ ರೋಸ್ಟರ್ ಅನುಸರಣೆ ಇಲ್ಲದಿರುವುದನ್ನು ಖರ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಬೆಂಗಳೂರು (ಜು.15): ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್.ಸಿ./ಎಸ್.ಟಿ.) ವರ್ಗದ ಸರ್ಕಾರಿ ನೌಕರರಿಗೆ ಮುಂಬಡ್ತಿ ನೀಡುವ ಬಗ್ಗೆ ಸರ್ಕಾರವೇ ನಿಗದಿಪಡಿಸಿರುವ ರೋಸ್ಟರ್ ಬಿಂದುಗಳ ಅನುಸರಣೆ ಇಲ್ಲದಿರುವ ಬಗ್ಗೆ ಸರ್ಕಾರಿ ನೌಕರರು ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.

ಎಸ್ಸಿ-ಎಸ್ಟಿ ನೌಕರರ ಸಂಘದವರು ಖರ್ಗೆ ಅವರಿಗೆ ಈ ಬಗ್ಗೆ ದೂರು ಸಲ್ಲಿಸಿದ್ದು, ಸಂಘದ ಮನವಿಯ ಪ್ರತಿಯನ್ನು ಖರ್ಗೆ ಅವರು ಪತ್ರದೊಂದಿಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಲಗತ್ತಿಸಿದ್ದಾರೆ. ಕೆಲವು ಇಲಾಖೆಗಳಲ್ಲಿ ರೋಸ್ಟರ್ ಅನುಸರಣೆ ಇಲ್ಲದಿರುವುದು ಖಾತರಿ ಆಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ರೋಸ್ಟರ್ ಬಿಂದುಗಳನ್ನು ಸರ್ಕಾರ ನಿಗದಿಪಡಿಸಿದ್ದು, ಆದೇಶದ ಜೊತೆಗೆ ಸ್ಪಷ್ಟ ಸೂಚನೆಗಳನ್ನೂ ನೀಡಲಾಗಿದೆ. ಆದರೂ ಕೆಲವು ಇಲಾಖೆಗಳಲ್ಲಿ ಅಧಿಕಾರಿಗಳು ಈ ನಿಯಮ ಪಾಲನೆ ಮಾಡುತ್ತಿಲ್ಲ. ಇದು ಸಮಾಜದ ಸಮಾನತೆಯ ತತ್ವವನ್ನೇ ಕೆಡಿಸುತ್ತಿದೆ.

ಎಸ್ಸಿ, ಎಸ್ಟಿ ವರ್ಗದ ನೌಕರರ ಮುಂಬಡ್ತಿ ಸ್ಥಗಿತದ ವಿಚಾರದಿಂದ ಅಧಿಕಾರಿಗಳ ಮಟ್ಟದಲ್ಲಿ ಅಸಮಾಧಾನ ಉಂಟಾಗಿ ಸರ್ಕಾರದ ಕೆಲಸ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತದೆ. 'ಈ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸರಕಾರವೇ ಹೊರಡಿಸಿರುವ ಆದೇಶಗಳು ಮತ್ತು ಸುತ್ತೋಲೆಗಳ ಅನುಷ್ಠಾನಕ್ಕಾಗಿ ಸ್ಪಷ್ಟ ನಿರ್ದೇಶನ ನೀಡಬೇಕು. ಇಲ್ಲವಾದರೆ, ಸರ್ಕಾರದ ವಿಶ್ವಾಸಾರ್ಹತೆಗೂ ಧಕ್ಕೆ ತರುವಂತಹ ಪರಿಸ್ಥಿತಿ ಉಂಟಾಗಬಹುದು' ಎಂದು ಖರ್ಗೆ ಹೇಳಿದ್ದಾರೆ.

ತಕ್ಷಣ ಗಮನಹರಿಸಿ - ಖರ್ಗೆಯ ಒತ್ತಾಯ

ಪತ್ರದ ಕೊನೆಯಲ್ಲಿ, ಈ ತೊಂದರೆಗಳನ್ನು ನಿವಾರಿಸಿ ನಿಗದಿತ ನಿಯಮಾನುಸಾರ ಮುಂಬಡ್ತಿ ನೀಡುವ ವ್ಯವಸ್ಥೆ ಜಾರಿಗೆ ತರುವಂತೆ, ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಿಎಂ ಸಿದ್ದರಾಮಯ್ಯನವರಲ್ಲಿ ಖರ್ಗೆ ಅವರು ಒತ್ತಾಯಿಸಿದ್ದಾರೆ. ಈ ವಿಚಾರದಲ್ಲಿ ಸರ್ಕಾರದಿಂದ ಅಧಿಕೃತ ಪ್ರತಿಕ್ರಿಯೆ ಇನ್ನೂ ಬರಲೇಬೇಕಿದೆ. ಆದರೆ ಎಐಸಿಸಿ ಮಟ್ಟದಿಂದಲೇ ತೀವ್ರ ಗಮನ ಸೆಳೆಯಲಾಗಿರುವುದು, ರಾಜ್ಯ ಸರ್ಕಾರಿ ಆಡಳಿತವು ಎಲ್ಲ ಇಲಾಖೆಗಳಲ್ಲಿ ಮುಂಬಡ್ತಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಿದೆ ಎಂಬುದು ಸ್ಪಷ್ಟವಾಗಿದೆ.