Asianet Suvarna News Asianet Suvarna News

Karnataka Admin Reforms Panel: ನಾನ್‌ ಗೆಜೆಟೆಡ್‌ ಹುದ್ದೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವಂತೆ ಶಿಫಾರಸು

ಪೊಲೀಸ್‌ ಇಲಾಖೆಯ ಕಾನ್‌ಸ್ಟೆಬಲ್‌, ಸಬ್‌ ಇನ್‌ಸ್ಪೆಕ್ಟರ್‌ವರೆಗಿನ ನಾನ್ ಗೆಜೆಟೆಡ್‌  ಹುದ್ದೆಗಳ ನೇರ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಆಡಳಿತ ಸುಧಾರಣಾ ಆಯೋಗ ಶಿಫಾರಸು ಮಾಡಿದೆ. 

Karnataka Administrative Reforms Commission panel suggests 33 per cent horizontal reservation for women in Home Department gow
Author
Bengaluru, First Published Feb 20, 2022, 9:32 PM IST

ಬೆಂಗಳೂರು (ಫೆ.20): ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಪೊಲೀಸ್‌ ಇಲಾಖೆಯ ಕಾನ್‌ಸ್ಟೆಬಲ್‌, ಸಬ್‌ ಇನ್‌ಸ್ಪೆಕ್ಟರ್‌ವರೆಗಿನ ಗೆಜೆಟೆಡ್‌ ಅಲ್ಲದ (non-gazetted) ಹುದ್ದೆಗಳ ನೇರ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ (reservation) ನೀಡುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಆಯೋಗದ ಅಧ್ಯಕ್ಷ ಟಿ.ಎಂ.ವಿಜಯಭಾಸ್ಕರ್ (TM Vijay Bhaskar) ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಕರ್ನಾಟಕದ ಆಡಳಿತ ಸುಧಾರಣಾ ಆಯೋಗ-2ರ (Karnataka Administrative Reforms Commission) ಎರಡು ಮತ್ತು 3ನೇ ವರದಿಯನ್ನು ಸಲ್ಲಿಸಿದರು. 

ಕರ್ನಾಟಕದಲ್ಲಿ ಗೆಜೆಟೆಡ್ ಅಲ್ಲದ ಪೊಲೀಸ್ ಸಿಬ್ಬಂದಿಗಳಲ್ಲಿ ಶೇಕಡಾವಾರು ಮಹಿಳಾ ಪ್ರಾತಿನಿಧ್ಯವು 8.3% ಆಗಿದೆ (2020 ರಲ್ಲಿ). ಕಾನ್‌ಸ್ಟೆಬಲ್‌ಗಳು ಇತ್ಯಾದಿ ಹುದ್ದೆಗಳ ನೇಮಕಾತಿಯಲ್ಲಿ ಮಹಿಳೆಯರಿಗೆ 25% ಹುದ್ದೆಗಳನ್ನು ಮೀಸಲಿಡಲು ರಾಜ್ಯವು ಆದೇಶಿಸಿದೆ. 

ಆದರೆ ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು ದಿನಾಂಕ:12.05.2015 ರಂದು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪೊಲೀಸ್ ಪಡೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸಲು ಮಹಿಳೆಯರಿಗೆ 33% ಮೀಸಲಾತಿಯನ್ನು ನೀಡಲು ಸಲಹೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸಹ ಪೊಲೀಸ್ ಪಡೆಗಳಲ್ಲಿ ಕಾನ್ಸ್‌ಟೇಬಲ್‌ನಿಂದ ಸಬ್-ಇನ್‌ಸ್ಪೆಕ್ಟರ್‌ವರೆಗಿನ ಗೆಜೆಟೆಡ್ ಅಲ್ಲದ ಹುದ್ದೆಗಳಲ್ಲಿ ನೇರ ನೇಮಕಾತಿಯಲ್ಲಿ ಮಹಿಳೆಯರಿಗೆ, ಸಮತಳವಾಗಿ ಮತ್ತು ಪ್ರತಿ ವರ್ಗದಲ್ಲಿ (ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಇತರರು) 33% ಮೀಸಲಾತಿಯನ್ನು ಅನುಮೋದಿಸಬಹುದು ಎಂದು ತಿಳಿಸಿದೆ. 

KNNL RECRUITMENT 2022: ಕರ್ನಾಟಕ ನೀರಾವರಿ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ನಾಗರಿಕರು ಪೊಲೀಸ್ ಠಾಣೆಗಳಿಗೆ ಬರಲು ತುಂಬಾ ಸಂಕೋಚ ಪಡುತ್ತಾರೆ ಎಂಬುದು ಸಾಮಾನ್ಯ ಸಂಗತಿಯಾಗಿದೆ. ಇಲಾಖೆಯು 32 ಕ್ಕೂ ಹೆಚ್ಚು ನಾಗರಿಕ ಕೇಂದ್ರಿತ ಸೇವೆಗಳನ್ನು ಒದಗಿಸುತ್ತಿದೆ ಹಾಗಾಗಿ ಎಲ್ಲಾ ಪೊಲೀಸ್‌ ಠಾಣೆಗಳಲ್ಲಿ ನಾಗರಿಕ ಸೇವೆಗಳ ಸಹಾಯ ಕೇಂದ್ರ ಸ್ಥಾಪಿಸುವುದು ಹಾಗೂ ಪೋಲೀಸ್‌ ಕೈಪಿಡಿಯಲ್ಲಿ ಇದನ್ನು ಸೇರಿಸಬಹುದು ಎಂದು ಆಯೋಗ ಹೇಳಿದೆ.

ಎಲ್ಲ ಇಲಾಖೆಗಳ ಸೂಚಿಸಿದ ಗ್ರೂಪ್-ಸಿ ಮತ್ತು ಡಿ ನೌಕರರ ವರ್ಗಾವಣೆಯನ್ನು ಗಣಕೀಕೃತ ಕೌನ್ಸಿಲಿಂಗ್ ಮೂಲಕ ಮಾಡಲು ಕಾಯ್ದೆ ಜಾರಿಗೆ ತರಬಹುದು. ಎಲ್ಲ ಇಲಾಖೆಗಳು ಸಿಬ್ಬಂದಿಗಳನ್ನು ಹೊರಗುತ್ತಿಗೆಯ ಆಧಾರದ ಮೇಲೆ ನಿಯೋಜಿಸಿಕೊಳ್ಳುತ್ತಿದ್ದು, ನಿಯೋಜಿಸಿಕೊಳ್ಳುವಾಗ ಯಾವುದೇ ರೀತಿಯ ಮೀಸಲಾತಿ ಪದ್ದತಿಯನ್ನು ಅಳವಡಿಸಿಕೊಳ್ಳದೆ ಇರುವುದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಅನಾನುಕೂಲವಾಗುತ್ತಿರುವುದು ಕಂಡುಬಂದಿರುತ್ತದೆ.   ಸರ್ಕಾರವು ಹೊರ ಗುತ್ತಿಗೆ ಮೇಲೆ ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳುವಾಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಅಗತ್ಯ ಪ್ರಾತಿನಿಧ್ಯ ನೀಡಿ ನಿಯೋಜಿಸುವಂತೆ ಸೂಕ್ತ ಆದೇಶವನ್ನು ಹೊರಡಿಸಬಹುದು.

BBMP Recruitment 2022: ಕಾನೂನಿನ ಅರಿವಿದ್ದರೆ ಬಿಬಿಎಂಪಿಯಲ್ಲಿ ಉದ್ಯೋಗವಕಾಶ

ಬಿಡಿಎ, ನಗರಾಭಿವೃದ್ಧಿ ಪ್ರಾಧಿಕಾರಗಳು, ಕೆಹೆಚ್‌ಬಿ ಮತ್ತು ಕೆಐಎಡಿಬಿಯಂತಹ ಸಂಸ್ಥೆಗಳು ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಸದರಿ ಪ್ರಾಧಿಕಾರಗಳು ಮಂಜೂರು ಮಾಡಿದ ನಿವೇಶನಗಳಿಗೆ ಖಾತೆ ನೀಡುವುದು ಮತ್ತು ಆಸ್ತಿ ತೆರಿಗೆಯನ್ನು ಸಂಗ್ರಹಿಸುವದು ಗ್ರಾಮ ಪಂಚಾಯತ್‌ಗಳ ಬದಲಾಗಿ ಸದರಿ ಪ್ರಾಧಿಕಾರಗಳು ಮಾಡುತ್ತಿದ್ದು ಇದರಿಂದ ಗ್ರಾ ಪಂ ಗಳು ಆಸ್ತಿ ತೆರಿಗೆ ಆದಾಯದಿಂದ ವಂಚಿತರಾಗುತ್ತಿವೆ ಆದುದರಿಂದ ಖಾತಾ ನಿರ್ವಹಣೆ, ತೆರಿಗೆ ಸಂಗ್ರಹವನ್ನು ಆಯಾ ಗ್ರಾಮ ಪಂಚಾಯತ್‌ ಗಳು ಮಾಡಬಹುದು ಎಂದು ಆಯೋಗ ತಿಳಿಸಿದೆ. 

ಆಯೋಗದ ಮೊದಲ ವರದಿಯು ಈ ಹಿಂದೆ ಜುಲೈ 2021 ರಲ್ಲಿ ಕಂದಾಯ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಸಾರಿಗೆ ಸೇರಿದಂತೆ ಮೂರು ಇಲಾಖೆಗಳಿಗೆ ಶಿಫಾರಸುಗಳೊಂದಿಗೆ ಸಲ್ಲಿಸಲಾಗಿತ್ತು. 

ಈ ಬಾರಿ ಗೃಹ, ಇಂಧನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಮಾಜ ಕಲ್ಯಾಣ, ಎಸ್ಟಿ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಎಂಟು ಇಲಾಖೆಗಳಿಗೆ ಶಿಫಾರಸು ಮಾಡಲಾಗಿದೆ.

ಆಯೋಗದ ಪ್ರಮುಖ ಶಿಫಾರಸುಗಳು ಇಂತಿವೆ...

  • ಭಾರತ ಸರ್ಕಾರವು ತನ್ನ ಸಚಿವಾಲಯಗಳಲ್ಲಿ ಯಾವುದೇ ಕಡತವು ನಾಲ್ಕು ಹಂತಗಳಿಗಿಂತ ಹೆಚ್ಚು ಚಲನವಲನವಾಗಬಾರದು ಎಂದು ನಿರ್ಧರಿಸಿರುವಂತೆ ರಾಜ್ಯ ಸರ್ಕಾರವು ಸಹ ಸಚಿವಾಲಯದಲ್ಲಿ ಯಾವುದೇ ಇಲಾಖೆಯ ಕಡತಗಳು ಮೂರು ಅಥವಾ ನಾಲ್ಕು ಹಂತಗಳಿಗಿಂತ ಹೆಚ್ಚು ಚಲನವಲನವಾಗಬಾರದೆಂದು ನಿರ್ಧಾರ ತೆಗೆದುಕೊಳ್ಳಬಹುದು. ಪ್ರಸ್ತುತ ರಾಜ್ಯದಲ್ಲಿ ಕಡತಗಳು 5-10 ಹಂತಗಳಲ್ಲಿ ಚಲಾವಣೆಯಾಗುತ್ತಿವೆ.
  • ರಾಜ್ಯ ಸರ್ಕಾರವು ರಾಜ್ಯದಲ್ಲಿರುವ ಎಲ್ಲ ಅಂಚೆ ಕಛೇರಿಗಳಲ್ಲಿ ರಾಜ್ಯ ಸರ್ಕಾರದ ಸೇವೆಗಳನ್ನು  ಒದಗಿಸಲು ಬಳಸಿಕೊಳ್ಳಬಹುದು. ಪ್ರಸ್ತುತ ಅಂಚೆ ಕಛೇರಿಗಳು ಭಾರತ ಸರ್ಕಾರದ ಸೇವೆಗಳನ್ನು ಒದಗಿಸುತ್ತಿವೆ.
  • ಬಿಡಿಎ, ನಗರಾಭಿವೃದ್ಧಿ ಪ್ರಾಧಿಕಾರಗಳು, ಕೆಹೆಚ್‌ಬಿ ಮತ್ತು ಕೆಐಎಡಿಬಿಯಂತಹ ಸಂಸ್ಥೆಗಳು ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಸದರಿ ಪ್ರಾಧಿಕಾರಗಳು ಮಂಜೂರು ಮಾಡಿದ ನಿವೇಶನಗಳಿಗೆ ಖಾತೆ ನೀಡುವುದು ಮತ್ತು ಆಸ್ತಿ ತೆರಿಗೆಯನ್ನು ಸಂಗ್ರಹಿಸುವದು ಗ್ರಾಮ ಪಂಚಾಯತ್‌ಗಳ ಬದಲಾಗಿ ಸದರಿ ಪ್ರಾಧಿಕಾರಗಳು ಮಾಡುತ್ತಿದ್ದು ಇದರಿಂದ ಗ್ರಾ ಪಂ ಗಳು ಆಸ್ತಿ ತೆರಿಗೆ ಆದಾಯದಿಂದ ವಂಚಿತರಾಗುತ್ತಿವೆ ಆದುದರಿಂದ ಖಾತಾ ನಿರ್ವಹಣೆ, ತೆರಿಗೆ ಸಂಗ್ರಹವನ್ನು ಆಯಾ ಗ್ರಾಮ ಪಂಚಾಯತ್‌ ಗಳು ಮಾಡಬಹುದು.
  • ಬಿಬಿಎಂಪಿ ವ್ಯಾಪ್ತಿಯಲ್ಲಿ, ವಲಯಗಳಲ್ಲಿ ವಲಯ ಆಯುಕ್ತರ ಅಧ್ಯಕ್ಷತೆಯಲ್ಲಿ, ಸಿಟಿ ಕಾರ್ಪೋರೇಷನ್‌ಗಳಲ್ಲಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚನೆ ಮಾಡಬಹುದು.
  • ಬಿಬಿಎಂಪಿಯ ಮುಖ್ಯ ಆಯುಕ್ತರ ಮೇಲಿನ ಕೆಲಸದ ಒತ್ತಡವನ್ನು ಕಡಿಮೆ ಮಾಡಲು  ಮುಖ್ಯ ಆಯುಕ್ತರ ಕೆಲವು ಅಧಿಕಾರಗಳನ್ನು ಉದಾ: 2 ಕೋಟಿವರೆಗಿನ ಬಜೆಟ್‌ ಕಾಮಗಾರಿಗಳ ಅನುಮೋದನೆ, ವಲಯ ವ್ಯಾಪ್ತಿಯಲ್ಲಿ ಅಭಿಯಂತರರುಗಳ, ಸಿಬ್ಬಂದಿಗಳ ಹಾಗೂ ಗ್ರೂಪ್-ಸಿ ನೌಕರರ ವರ್ಗಾವಣೆ ಮುಂತಾದ ಅಧಿಕಾರಗಳನ್ನು ಪ್ರತ್ಯಾಯೋಜಿಸಿ ವಲಯ ಆಯುಕ್ತರುಗಳಿಗೆ ನೀಡಬಹುದು.
  • ಅದೇ ರೀತಿಯಾಗಿ, ಆಯುಕ್ತರು ಬಿಡಿಎ ರವರ ಭೂ ಸ್ವಾಧೀನದ ಅಧಿಕಾರಗಳನ್ನು ಡೆಪ್ಯೂಟಿ ಕಮಿಷನರ್‌ರವರಿಗೆ, ನಿವೇಶನ ಸಂಬಂಧಿತ ಅಧಿಕಾರಗಳನ್ನು ಕಾರ್ಯದರ್ಶಿ, ಉಪಕಾರ್ಯದರ್ಶಿಗಳಿಗೆ, ರಜೆ ನಗದೀಕರಣ, ರಜೆ ಮಂಜೂರಾತಿ, ವೈದ್ಯಕೀಯ ಬಿಲ್‌ ಮಂಜೂರಾತಿ ಇತ್ಯಾದಿಗಳನ್ನು ಕಾರ್ಯದರ್ಶಿಗೆ, 1 ಲಕ್ಷದವರೆಗಿನ ಯುಟಿಲಿಟಿ ಬಿಲ್‌, ಆಕಸ್ಮಿಕ, ಜಾಹೀರಾತು ಬಿಲ್‌ಗಳ ಪಾವತಿಯನ್ನು ವಿಭಾಗ ಮುಖ್ಯಸ್ಥರಿಗೆ ಮುಂತಾದ ಅಧಿಕಾರಗಳ ಪ್ರತ್ಯಾಯೋಜನೆ ಮಾಡಬಹುದು.
Follow Us:
Download App:
  • android
  • ios