Asianet Suvarna News Asianet Suvarna News

ಜೆಡಿಎಸ್‌ಗೆ ಅಧಿಕಾರ ಸಿಕ್ಕರೆ ಕರ್ನಾಟಕದ ಚಿತ್ರಣವೇ ಬದಲು: ಕುಮಾರಸ್ವಾಮಿ

*  ಪಂಚರತ್ನ ಯೋಜನೆ ಜಾರಿಗೆ ತಂದು ಅಭಿವೃದ್ಧಿ
*  ಜನತಾ ಜಲಧಾರೆ ಸಾರ್ವಜನಿಕ ಸಮಾವೇಶ 
*  ಸಮಗ್ರ ನೀರಾವರಿಗೆ ಜಲಧಾರೆ ಯೋಜನೆ ತರುವುದು ನಮ್ಮ ಕನಸು

Former CM HD Kumaraswamy Talks Over Karnataka Development grg
Author
Bengaluru, First Published May 13, 2022, 6:05 AM IST

ಬೆಂಗಳೂರು(ಮೇ.13):  ಇಪ್ಪತ್ತೈದು ಮೂವತ್ತು ವರ್ಷ ಅಧಿಕಾರ ಬೇಡ, ಜೆಡಿಎಸ್‌ಗೆ(JDS) ಸ್ವತಂತ್ರವಾಗಿ 5 ವರ್ಷ ಸಂಪೂರ್ಣ ಅವಧಿಯ ಅಧಿಕಾರವನ್ನು ಒಂದು ಸಲ ಕೊಟ್ಟು ನೋಡಿ, ಪಂಚರತ್ನ ಯೋಜನೆಗಳ ಮೂಲಕ ರಾಜ್ಯದ ಚಿತ್ರಣವನ್ನೇ ಬದಲಿಸಿ ತೋರಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ರಾಜ್ಯದ ಜನತೆಯಲ್ಲಿ ವಿನಮ್ರ ಮನವಿ ಮಾಡಿದ್ದಾರೆ.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಪೀಣ್ಯ ಎರಡನೇ ಹಂತದ ಜಿಕೆಡಬ್ಲುಯು ಮೈದಾನದಲ್ಲಿ ಜಾತ್ಯತೀತ ಜನತಾದಳ ಹಮ್ಮಿಕೊಂಡಿದ್ದ ಜನತಾ ಜಲಧಾರೆ(Janata Jaladhare) ಸಾರ್ವಜನಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಪಂಚರತ್ನ ಯೋಜನೆಯಲ್ಲಿ ಖಾಸಗಿ ಶಾಲೆಗಳಿಗೆ ಮಿಗಿಲಾದ ಶಾಲೆಗಳನ್ನು ಆರಂಭಿಸಿ ಉಚಿತ ಶಿಕ್ಷಣ, ಉಚಿತ ಆರೋಗ್ಯ ಚಿಕಿತ್ಸೆ, ಪ್ರತಿಭಾವಂತರ ಮನೆ ಬಾಗಿಲಿಗೆ ಉದ್ಯೋಗ, ಮಹಿಳೆಯರ ಸಬಲೀಕರಣ, ತಲೆಗೊಂದು ಸೂರು, ಸಮಗ್ರ ನೀರಾವರಿಗೆ ಜಲಧಾರೆ ಯೋಜನೆ ತರುವುದು ನಮ್ಮ ಕನಸಾಗಿದೆ ಎಂದು ವಿವರಿಸಿದರು.

janata jaladhare ಇಂದು ಜೆಡಿಎಸ್‌ ‘ಜನತಾ ಜಲಧಾರೆ’ ಸಮಾರೋಪ, 5 ಲಕ್ಷ ಜನರು ಭಾಗಿ ನಿರೀಕ್ಷೆ!

ಶಾಸಕ ಆರ್‌. ಮಂಜುನಾಥ್‌ ಮಾತನಾಡಿ, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕೆಲಸ ಮಾಡಲು ಚಿತ್ರಹಿಂಸೆ ಆಗುತ್ತಿದೆ, ಎಲ್ಲದಕ್ಕೂ ಅಡ್ಡಗಾಲು ಹಾಕುತ್ತಾರೆ. ಈ ಕ್ಷೇತ್ರ ಸಂಪೂರ್ಣ ರೆವಿನ್ಯೂ ಬಡಾವಣೆಗಳನ್ನು ಒಳಗೊಂಡ ಪ್ರದೇಶವಾಗಿದ್ದು ಅಭಿವೃದ್ಧಿ ಸಾಹಸ ಎಂಬಂತಾಗಿದೆ. ಆದರೂ ಎದೆಗುಂದದೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇನೆ ಎಂದು ಹೇಳಿದರು.

ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಉಪಾಧ್ಯಕ್ಷ ಅಂದಾನಪ್ಪ, ಸಕಲೇಶಪುರ ಶಾಸಕ ಎಚ್‌.ಕೆ.ಕುಮಾರಸ್ವಾಮಿ, ಮುಖಂಡರಾದ ಬೋಜೇಗೌಡ, ಬಂಡೆಪ್ಪ ಕಾಶೆಂಪೂರ, ಪಾಲಿಕೆ ಮಾಜಿ ಸದಸ್ಯ ಎಚ್‌.ಎನ್‌.ಗಂಗಾಧರ್‌, ನಗರ ಅಧ್ಯಕ್ಷ ಆರ್‌.ಪ್ರಕಾಶ್‌, ಹೆಗ್ಗನಹಳ್ಳಿ ವಾರ್ಡ್‌ ಅಧ್ಯಕ್ಷ ಎಚ್‌.ಆರ್‌.ಪ್ರಕಾಶ್‌, ದಾಸರಹಳ್ಳಿ ಬ್ಲಾಕ್‌ ಅಧ್ಯಕ್ಷ ಕೆ.ಸಿ.ವೆಂಕಟೇಶ್‌, ಬಿ.ಎನ್‌.ಜಗದೀಶ್‌, ಎಂ.ಮುನೇಗೌಡ ಮೊದಲಾದವರು ಉಪಸ್ಥಿತರಿದ್ದರು.

ನಗರದ ಜಲಮೂಲ ರಕ್ಷಣೆಗೆ ಜೆಡಿಎಸ್‌ ಬದ್ಧ: ಮಾಜಿ ಸಿಎಂ

ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ಗೆ ಪೂರ್ಣ ಬಹುಮತ ಬಂದರೆ ಬೆಂಗಳೂರಿನ(Bengaluru) ಎಲ್ಲ ಕೆರೆಗಳ(Lake) ಅಭಿವೃದ್ಧಿಯ ಜತೆಗೆ ಕೆರೆಗಳ ಒತ್ತುವರಿ ತೆರವುಗೊಳಿಸಿ ಜಲಮೂಲಗಳನ್ನು ಸಂರಕ್ಷಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ನಗರದ ಗಾಂಧಿನಗರದಲ್ಲಿ ಗುರುವಾರ ನಡೆದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೆಡಿಎಸ್‌ ಪಕ್ಷಕ್ಕೆ ಪೂರ್ಣ ಬಹುಮತ ಕೊಟ್ಟು ಐದು ವರ್ಷಗಳ ಸರ್ಕಾರ ರಚನೆಗೆ ಜನ ಬೆಂಬಲ ನೀಡಿದರೆ, ನೀರಿನ ವಿಷಯದಲ್ಲಿ ಬೆಂಗಳೂರು ಜನರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.

ಆರ್‌ಎಸ್‌ಎಸ್‌, ಭಜರಂಗದಳ ಇವೆ, ನಾವು ಬಿಜೆಪಿ ಅಲ್ಲ ಎಂದ ಪ್ರಮೋದ್ ಮುತಾಲಿಕ್

ಜಲ ಮೂಲಗಳನ್ನು(Water Source) ರಕ್ಷಿಸಿ ಅದನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಜಲಧಾರೆ ಕಾರ್ಯಕ್ರಮ ರೂಪಿಸಲಾಗಿದೆ. ಕೆರೆಗಳನ್ನು ಉತ್ತಮಪಡಿಸಿ ಅವುಗಳಿಗೆ ನದಿ ನೀರು ತುಂಬಿಸುವ ಕೆಲಸ ಮಾಡಲಾಗುವುದು. ಎಚ್‌.ಡಿ.ದೇವೇಗೌಡರ ಅಧಿಕಾರದಲ್ಲಿ ಇದ್ದಾಗ ರಾಜ್ಯಕ್ಕೆ ಅನೇಕ ನೀರಾವರಿ ಯೋಜನೆ ಕೊಟ್ಟಿದ್ದಾರೆ. ಅದರಲ್ಲೂ ಬೆಂಗಳೂರಿಗೆ ಅನೇಕ ಕಾರ್ಯಕ್ರಮ ಕೊಟ್ಟಿದ್ದಾರೆ. ದೇವೇಗೌಡರು(HD Devegowda) ಮಾಡಿದ ಒಂದು ಆದೇಶದಿಂದ ನಗರಕ್ಕೆ ಕಾವೇರಿ ನದಿಯಿಂದ 9 ಟಿಎಂಸಿ ನೀರು ಸಿಕ್ಕಿದೆ. ಇಂದು ನಗರದ ಜನ ಕಾವೇರಿ ನೀರು ಕುಡಿಯುತ್ತಿದ್ದರೆ, ಅದಕ್ಕೆ ಕಾರಣ ದೇವೇಗೌಡರು ಎಂದು ಹೇಳಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿಗೆ ಅಡಿಗಲ್ಲು ಹಾಕಿ ಮೊದಲ ಹಂತಕ್ಕೆ ಚಾಲನೆ ನೀಡಿದ್ದೆ. ನಗರದ ಐಟಿ ಕ್ರಾಂತಿಗೆ ಮುನ್ನುಡಿ ಬರೆದವರು ದೇವೇಗೌಡರು. ನಗರಕ್ಕೆ ಐಟಿ ಪಾರ್ಕ್ ಬರಲು ಕೂಡ ಅವರೇ ಕಾರಣ. ವರ್ತುಲ ರಸ್ತೆ ಇತ್ಯಾದಿ ಮೂಲಸೌಕರ್ಯವನ್ನು ಕಲ್ಪಿಸಿದವರು ದೇವೇಗೌಡರು. ಇದನ್ನು ಬೆಂಗಳೂರಿನ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಕುಮಾರಸ್ವಾಮಿ ಹೇಳಿದರು. ಗಾಂಧಿನಗರದ ಜೆಡಿಎಸ್‌ ಮುಖಂಡ ನಾರಾಯಣ ಸ್ವಾಮಿ, ಪಕ್ಷದ ನಗರ ಅಧ್ಯಕ್ಷ ಪ್ರಕಾಶ್‌ ಸೇರಿದಂತೆ ಪಕ್ಷದ ನಾಯಕರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
 

Follow Us:
Download App:
  • android
  • ios