Asianet Suvarna News Asianet Suvarna News

ಸಾಧನೆಗೆ ಯಾವುದೂ ಅಡ್ಡಿಯಲ್ಲ: 3 ಸರ್ಕಾರಿ ನೌಕರಿ ಪಡೆದ ಗುಳೇದಗುಡ್ಡದ ಅಂಧ ಯುವತಿ..!

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ಯುವತಿಯೊಬ್ಬಳು ತಾನು ಕಾಲೇಜು ಕಲಿಯುವಾಗಲೇ ಕಣ್ಣು ಕಳೆದುಕೊಂಡರೂ ನಿರಂತರ ಪ್ರಯತ್ನದಿಂದ ಮೂರು ಸರ್ಕಾರಿ ನೌಕರಿಗೆ ಆಯ್ಕೆಯಾಗಿ ಮಾದರಿಯಾಗಿದ್ದಾಳೆ.

Blind Woman Who Got Three Government Jobs at Guledagudda in Bagalkot grg
Author
First Published Mar 2, 2023, 2:29 PM IST

ಗುಳೇದಗುಡ್ಡ(ಮಾ.02): ಸಾಧನೆಗೆ ಯಾವುದೂ ಅಡ್ಡಿಯಲ್ಲ. ಮನಸಿದ್ದರೆ ಮಾರ್ಗ ಎಂಬಂತೆ ಸಾಧಿಸುವ ಛಲ ಇದ್ದರೆ ಜೀವನದಲ್ಲಿ ಯಶಸ್ಸು ಕಾಣಬಹುದು. ಗುಳೇದಗುಡ್ಡದ ಯುವತಿಯೊಬ್ಬಳು ತಾನು ಕಾಲೇಜು ಕಲಿಯುವಾಗಲೇ ಕಣ್ಣು ಕಳೆದುಕೊಂಡರೂ ನಿರಂತರ ಪ್ರಯತ್ನದಿಂದ ಮೂರು ಸರ್ಕಾರಿ ನೌಕರಿಗೆ ಆಯ್ಕೆಯಾಗಿ ಮಾದರಿಯಾಗಿದ್ದಾಳೆ.

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ಪ್ರೀತಿ ಜಗದೀಶ ಕಾರುಡಗಿಮಠ ಅವರ ಬದುಕಿನಲ್ಲಿ ಅಂಧತ್ವ ಬರಸಿಡಿಲಿನಂತೆ ಬಂದು ಬಡಿಯಿತು. ಚಿಕ್ಕಂದಿನಿಂದಲೂ ಸಹಜ ದೃಷ್ಟಿಹೊಂದಿದ್ದ ಪ್ರೀತಿ ಯೌವನಾವಸ್ಥೆಗೆ ಬಂದಾಗ ಆಕಸ್ಮಿಕವಾಗಿ ದೃಷ್ಟಿಹೀನಳಾಗಿದ್ದಾಳೆ. ಬದುಕು ಅಂಧಕಾರವಾದಾಗ ಮುಂದೇನು ಎಂಬ ಪ್ರಶ್ನೆ ಅವಳನ್ನು ಕಾಡಿದೆ. ಆದರೆ, ದೃಷ್ಟಿದೋಷ ಮೆಟ್ಟಿನಿಂತ ಪ್ರೀತಿ ಅದ್ಭುತ್‌ ಸಾಧನೆ ಮಾಡಿದ್ದಾಳೆ. ಜೊತೆಗೆ ಮೂರು ಸರ್ಕಾರಿ ನೌಕರಿಗಳು ಅವಳತ್ತ ಒಲಿದು ಬಂದಿವೆ.

UAS BENGALURU RECRUITMENT 2023: ಕೃಷಿ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಂಡರೂ ಛಲ ಬಿಡದ ಪ್ರೀತಿ ಸಹೋದರಿ ದೀಪಾಳ ಸಹಾಯದಿಂದ ತನ್ನ ಅಧ್ಯಯನ ಮುಂದುವರೆಸಿದಳು. ಪುಸ್ತಕದ ವಿಷಯವನ್ನು 10 ಬಾರಿ ಸಹೋದರಿಯ ಬಾಯಿಂದ ಆಲಿಸಿ ಮನನ ಮಾಡಿಕೊಳ್ಳುತ್ತ ಬಂದಳು. ಯುಟ್ಯೂಬ್‌ ಮೂಲಕ ಪಠ್ಯವನ್ನು ಕೇಳಿಕೊಂಡು ಮೊದಲ ಅವಕಾಶದಲ್ಲೇ ಎಫ್‌ಡಿಎ ಪಾಸ್‌ ಆದಳು. ಇನ್ನೊಬ್ಬ ಸಹೋದರಿ ಜ್ಯೋತಿ ಇವಳ ಪರವಾಗಿ ಪರೀಕ್ಷೆ ಬರೆದಿದ್ದಾಳೆ. ಹೀಗೆ ಸಹೋದರಿಯರ ಸಹಕಾರದಿಂದ ತನ್ನ ವಿದ್ಯಾಭ್ಯಾಸ ಪೂರ್ಣಗೊಳಿಸಿ ಮೂರು ಸರ್ಕಾರಿ ನೌಕರಿ ಬಾಚಿಕೊಂಡಿದ್ದಾಳೆ. 2020ರಲ್ಲಿ 10ನೇ ತರಗತಿ ಮೇಲೆ ಕೋರ್ಚ್‌ನಲ್ಲಿ ಪ್ರೊಸೆಸಿಂಗ್‌ ಸರ್ವರ್‌ ಹುದ್ದೆ, ನಂತರ 2021ರಲ್ಲಿ ಫಸ್ಟ್‌ ಗ್ರೇಡ್‌ ರೆವಿನ್ಯೂ ಇನ್‌ಸ್ಪೆಕ್ಟರ್‌, 2021ರಲ್ಲೇ ಎಫ್‌ಡಿಎ ಹುದ್ದೆ ಹೀಗೆ ಮೂರು ಹುದ್ದೆಗಳಿಗೆ ಆಯ್ಕೆಯಾಗಿದ್ದಾಳೆ. ಆದರೆ, ಸದ್ಯ ಎಫ್‌ಡಿಎ ಹುದ್ದೆಯನ್ನು ಆಯ್ಕೆ ಮಾಡಿಕೊಂಡು ಬಾಗಲಕೋಟೆಯಲ್ಲಿರುವ ಕರ್ನಾಟಕ ಬಯಲಾಟ ಅಕಾಡೆಮಿಯಲ್ಲಿ ಎಫ್‌ಡಿಎ ಆಗಿ ಮೂರು ತಿಂಗಳಿಂದ ಸೇವೆ ಸಲ್ಲಿಸುತ್ತ ಇತರರಿಗೆ ಮಾದರಿಯಾಗಿದ್ದಾಳೆ.

ಚಿಕ್ಕಂದಿನಿಂದಲೇ ಪ್ರತಿಭಾವಂತೆ:

ಹುಟ್ಟುತ್ತಲೇ ಅಂಧಳಲ್ಲದ ಪ್ರೀತಿ, ಎಲ್ಲರಂತೆ ತನ್ನ ಎರಡೂ ಕಣ್ಣುಗಳಿಂದ ನಿಸರ್ಗದ ಸೊಬಗನ್ನು ಆನಂದಿಸಿದವಳು. ಭವಿಷ್ಯದಲ್ಲಿ ಹಲವಾರು ಹೊಸ ಕನಸುಗಳನ್ನು ಕಂಡವಳು. ಚಿಕ್ಕಂದಿನಿಂದಲೇ ಪ್ರತಿಭಾವಂತಳಾಗಿದ್ದ ಈಕೆ ಶಾಲಾ, ಕಾಲೇಜುಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಸಾಧನೆ ಮಾಡಿದವಳು. ಬಿಎಸ್‌ಸಿ ಪರೀಕ್ಷೆಯಲ್ಲಿ ಶೇ.88 ಅಂಕಗಳನ್ನು ಪಡೆದು ಪಾಸಾಗಿದ್ದಾಳೆ.

ಹೈಕೋರ್ಟ್ ಆದೇಶ, ವಾರದಲ್ಲಿ 15 ಸಾವಿರ ಶಿಕ್ಷಕರ ಹೊಸ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಕ್ಕೆ ನಿರ್ಧಾರ

ಕೈಕೊಟ್ಟ ದೃಷ್ಟಿ:

ಚಿಕ್ಕಂದಿನಿಂದಲೂ ದೂರದೃಷ್ಟಿದೋಷ ಇವಳಿಗಿತ್ತು. ಹೀಗಾಗಿ ಕನ್ನಡಕ ಹಾಕಿಕೊಂಡೆ ಓದು-ಬರಹ ಮಾಡುತ್ತಿದ್ದಳು. ಬಿಎಸ್‌ಸಿ ಮುಗಿಸಿ ಎಂಎಸ್‌ಸಿ ಎರಡನೇ ಸೆಮಿಸ್ಟರ್‌ ಓದುವಾಗ ಪ್ರೀತಿ ರೆಟಿನ್ಸ್‌ ಫಿಗ್ರೆಂಟಿಸಿಸ್‌ ಕಾಯಿಲೆಯಿಂದ ಸಂಪೂರ್ಣವಾಗಿ ದೃಷ್ಟಿಕಳೆದುಕೊಂಡಳು. ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ ತಪಾಸಣೆ ನಡೆಸಿದರೂ ಯಾವುದೇ ಉಪಯೋಗವಾಗಲಿಲ್ಲ. ಈಕೆಯ ತಂದೆ-ತಾಯಿ ಮಗಳಿಗೆ ನೇತ್ರದಾನ ಮಾಡಲು ಮುಂದೆ ಬಂದರೂ ದೃಷ್ಟಿದೋಷ ಸರಿಪಡಿಸುವುದು ಅಸಾಧ್ಯ ಎಂದು ವೈದ್ಯರಿಂದ ತಿಳಿದು ಬಂತು.

ನನಗೆ ದೃಷ್ಟಿಬರುವುದಿಲ್ಲ ಎಂದು ಗೊತ್ತಾದ ಕೂಡಲೇ ಭಯವಾಯಿತು. ಆದರೂ ಧೈರ್ಯ ತಂದುಕೊಂಡು ಏನಾದರೂ ಸಾಧನೆ ಮಾಡಲೇಬೇಕೆಂದು ಪಣತೊಟ್ಟೆ. ಸಹೋದರಿಯರ ಸಹಾಯದಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಪಾಸಾದೆ. ನನ್ನ ಸಾಧನೆಗೆ ತಂದೆಯ ಸಹಕಾರ ಬಹಳ ಇದೆ. ಮುಂದೆ ಕೆಎಎಸ್‌, ಐಎಎಸ್‌ ಮಾಡುವ ಗುರಿ ಇದೆ ಅಂತ ಗುಳೇದಗುಡ್ಡದ ಪ್ರೀತಿ ಜಗದೀಶ ಕಾರುಡಗಿಮಠ ತಿಳಿಸಿದ್ದಾರೆ. 

Follow Us:
Download App:
  • android
  • ios