Asianet Suvarna News Asianet Suvarna News

ನೌಕರಿ ತಪ್ಪುವ ಭೀತಿಯಲ್ಲಿ ಅತಿಥಿ ಶಿಕ್ಷಕರು..!

ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದ ಮೇರೆಗೆ ಈ ಶೈಕ್ಷಣಿಕ ವರ್ಷಾರಂಭದ ಮೊದಲೇ ಜೂನ್ ತಿಂಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿತ್ತು. ಆದರೆ ಈಗ ನೇಮಗೊಂಡಿರುವ ಕಾಯಂ ಶಿಕ್ಷಕರು ಶಾಲೆಗಳಿಗೆ ನಿಯೋಜನೆಯಾದ ಕೂಡಲೆ ಅಲ್ಲಿರುವ ಅತಿಥಿ ಶಿಕ್ಷಕರು ಕೆಲಸ ಕಳೆದುಕೊಳ್ಳಲಿದ್ದಾರೆ.

13352 Guest Teachers are at risk of Job Loss in Karnataka grg
Author
First Published Oct 28, 2023, 6:11 AM IST

ಸಂದೀಪ್‌ ವಾಗ್ಲೆ

ಮಂಗಳೂರು(ಅ.28):  ರಾಜ್ಯದಲ್ಲಿ 6-8ನೇ ತರಗತಿಗೆ 13,352 ಪದವೀಧರ ಶಿಕ್ಷಕರ ನೇಮಕಾತಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್‌ ನೀಡಿದ ಬೆನ್ನಲ್ಲೇ ನೇಮಕಾತಿ ಆದೇಶ ನೀಡಲು ಸರ್ಕಾರ ಪ್ರಕ್ರಿಯೆ ಆರಂಭಿಸಿದೆ. ಇದರೊಂದಿಗೆ, ಈವರೆಗೆ ಈ ಕಾಯಂ ಶಿಕ್ಷಕರ ಸ್ಥಾನದಲ್ಲಿದ್ದು ಸರ್ಕಾರಿ ಶಾಲೆ ಮಕ್ಕಳಿಗೆ ಶಿಕ್ಷಣ ಕಲಿಸುತ್ತ ಅವರ ಭವಿಷ್ಯ ರೂಪಿಸುತ್ತಿರುವ 13,352 ಅತಿಥಿ ಶಿಕ್ಷಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

15 ಸಾವಿರ ಪದವೀಧರ ಶಿಕ್ಷಕರ ಹುದ್ದೆ ಭರ್ತಿಗೆ 2022ರ ಆರಂಭದಲ್ಲಿ ಪ್ರಕ್ರಿಯೆ ಆರಂಭವಾಗಿತ್ತು. ಅದರಲ್ಲಿ 13,352 ಶಿಕ್ಷಕರ ಆಯ್ಕೆ ನಡೆದಿತ್ತು. ಆದರೆ ಕೆಲ ಕಾನೂನು ತೊಡಕುಗಳ ಹಿನ್ನೆಲೆಯಲ್ಲಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ, ಹೈಕೋರ್ಟ್‌ನ ಏಕಸದಸ್ಯ ಪೀಠವು ನೇಮಕಾತಿಗೆ ತಡೆಯೊಡ್ಡಿತ್ತು. ಕೆಲ ದಿನಗಳ ಹಿಂದಷ್ಟೇ ಹೈಕೋರ್ಟ್‌ನ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶ ರದ್ದುಗೊಳಿಸಿ, ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ನೀಡಲು ಹಸಿರು ನಿಶಾನೆ ನೀಡಿದೆ. ಈ ಅಭ್ಯರ್ಥಿಗಳು ಇನ್ನು ಕೆಲವೇ ದಿನಗಳಲ್ಲಿ ಸೂಚಿಸಿದ ಶಾಲೆಗಳಿಗೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

ಇಂದಿನಿಂದ 13,500 ಪದವೀಧರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪುನಾರಂಭ: ದೈಹಿಕ ಶಿಕ್ಷಕರ ನೇಮಕಾತಿ ಶೀಘ್ರ ಆರಂಭ

ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದ ಮೇರೆಗೆ ಈ ಶೈಕ್ಷಣಿಕ ವರ್ಷಾರಂಭದ ಮೊದಲೇ ಜೂನ್ ತಿಂಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿತ್ತು. ಆದರೆ ಈಗ ನೇಮಗೊಂಡಿರುವ ಕಾಯಂ ಶಿಕ್ಷಕರು ಶಾಲೆಗಳಿಗೆ ನಿಯೋಜನೆಯಾದ ಕೂಡಲೆ ಅಲ್ಲಿರುವ ಅತಿಥಿ ಶಿಕ್ಷಕರು ಕೆಲಸ ಕಳೆದುಕೊಳ್ಳಲಿದ್ದಾರೆ.

5 ತಿಂಗಳಾದರೂ ಮುಂದುವರಿಸಿ:

ಏಕಾಏಕಿ ನಮ್ಮನ್ನು ಕೆಲಸದಿಂದ ತೆಗೆದರೆ ಕನಿಷ್ಠ ಜೀವನ ನಿರ್ವಹಣೆಗೂ ತೊಂದರೆಯಾಗಲಿದೆ. ಸರ್ಕಾರ ಮಾನವೀಯತೆಯ ನೆಲೆಯಲ್ಲಿ ಈ ಶೈಕ್ಷಣಿಕ ವರ್ಷಾಂತ್ಯದವರೆಗೆ ಆದರೂ ಅತಿಥಿ ಶಿಕ್ಷಕರ ಸೇವೆ ಮುಂದುವರಿಸಬೇಕು ಎಂದು ಹೆಸರು ಹೇಳಲಿಚ್ಛಿಸದ ಮೂಡುಬಿದಿರೆಯ ಅತಿಥಿ ಶಿಕ್ಷಕರೊಬ್ಬರು ಅಳಲು ತೋಡಿಕೊಂಡರು.

ನಿರುದ್ಯೋಗಿಗಳಿಗೆ ಸಂತಸ ಸುದ್ದಿ ನೀಡಿದ ಸಚಿವ ಚೆಲುವರಾಯಸ್ವಾಮಿ

ಆತ್ಮಹತ್ಯೆಯೇ ದಾರಿ: ನಾನು ಏಳು ವರ್ಷಗಳಿಂದ ಅತಿಥಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈಗ ನೇಮಕಾತಿಯಾದ ಕಾಯಂ ಶಿಕ್ಷಕರು ಕೆಲಸಕ್ಕೆ ಹಾಜರಾದ ಬಳಿಕ ನಮ್ಮನ್ನು ಕೈಬಿಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈಗ ಕೆಲಸ ಬಿಟ್ಟರೆ ಅರ್ಧದಲ್ಲಿ ಬೇರೆ ಯಾವ ಶಾಲೆಯಲ್ಲೂ ಕೆಲಸ ಸಿಗಲ್ಲ. ಬೇರೆ ಕಂಪೆನಿಗಳಲ್ಲಿ ಕೆಲಸ ಮಾಡಬೇಕೆಂದರೆ ಅದಕ್ಕೆ ಹಲವು ಸಮಯ ಹಿಡಿಯುತ್ತದೆ, ಅಲ್ಲಿಯವರೆಗೆ ನಿತ್ಯ ಜೀವನ ಸಾಗಿಸುವುದು ಹೇಗೆ? ಹೆಂಡತಿ, ಮಕ್ಕಳನ್ನು ಸಾಕುವುದು ಹೇಗೆ? ನಮ್ಮನ್ನು ಅರ್ಧದಲ್ಲೇ ಕೈಬಿಟ್ಟರೆ ಆತ್ಮಹತ್ಯೆಯೇ ಗತಿ ಎಂದು ಮತ್ತೊಬ್ಬ ಅತಿಥಿ ಶಿಕ್ಷಕರು ನೋವಿನಿಂದ ನುಡಿದರು.

ಕನಿಷ್ಠ ವೇತನವೂ ಇಲ್ಲ!

ಪ್ರಸ್ತುತ ಪ್ರಾಥಮಿಕ ಶಾಲೆಗಳ ಅತಿಥಿ ಶಿಕ್ಷಕರಿಗೆ 10 ಸಾವಿರ ರು, ಪ್ರೌಢಶಾಲೆ ಅತಿಥಿ ಶಿಕ್ಷಕರಿಗೆ 11 ಸಾವಿರ ರು. ಗೌರವಧನ ನೀಡಲಾಗುತ್ತಿದೆ. ಇದನ್ನು ಕನಿಷ್ಠ 20 ಸಾವಿರ ರು.ಗೆ ಏರಿಕೆ ಮಾಡಬೇಕು ಎಂದು ಅತಿಥಿ ಶಿಕ್ಷಕರ ಸಂಘಟನೆ ಸರ್ಕಾರಕ್ಕೆ ಮನವಿ ನೀಡುತ್ತಲೇ ಬಂದರೂ ಕಾರ್ಯಗತಗೊಂಡಿಲ್ಲ. ದಿನಕ್ಕೆ ಕನಿಷ್ಠ 500 ರು.ನಂತೆ ತಿಂಗಳಿಗೆ 15 ಸಾವಿರ ರು. ಆದರೂ ವೇತನ ಹೆಚ್ಚಿಸಿದರೆ ಅನುಕೂಲವಾಗಲಿದೆ ಎನ್ನುತ್ತಾರೆ ಅತಿಥಿ ಶಿಕ್ಷಕರು.

Follow Us:
Download App:
  • android
  • ios