ಕಿವೀಸ್ ಎದುರಿನ ಏಕದಿನ ಸರಣಿಗೆ 15 ಮಂದಿ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದ ಯುವರಾಜ್ ಸಿಂಗ್ ಕೊನೆಗೂ ರನ್'ಗಳ ಬರವನ್ನು ನೀಗಿಸಿಕೊಂಡಿದ್ದಾರೆ.

ನವದೆಹಲಿ(ಅ.13): ಕಿವೀಸ್ ಎದುರಿನ ಏಕದಿನ ಸರಣಿಗೆ 15 ಮಂದಿ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದ ಯುವರಾಜ್ ಸಿಂಗ್ ಕೊನೆಗೂ ರನ್'ಗಳ ಬರವನ್ನು ನೀಗಿಸಿಕೊಂಡಿದ್ದಾರೆ.

ಮಧ್ಯಪ್ರದೇಶದ ಎದುರು ರಣಜಿ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್'ನಲ್ಲಿ 25 ನೇ ಶತಕ ಪೂರೈಸಿರುವ ಯುವಿ ಫಾರ್ಮ್ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ನಡುವೆ ತಂಡದಲ್ಲಿ ಸ್ಥಾನ ಪಡೆದಿದ್ದ ಸುರೇಶ್ ರೈನಾ ಜ್ವರದಿಂದ ಬಳಲುತ್ತಿದ್ದು, ಅವರ ಸ್ಥಾನವನ್ನು ಯುವಿ ತುಂಬುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಪ್ರಥಮ ದರ್ಜೆ ಕ್ರಿಕೆಟ್'ನಲ್ಲಿ ರನ್'ಗಳಿಸಲು ಪರದಾಡುತ್ತಿದ್ದ ಯುವಿಗೆ ಮಧ್ಯಪ್ರದೇಶ ತಂಡದ ಎದುರಿನ ಪ್ರದರ್ಶನ ಸಾಕಷ್ಟು ನಿರಾಳರನ್ನಾಗಿಸಿದೆ. ಪ್ರಸಕ್ತ ಋತುವಿನ ರೈಲ್ವೇಸ್ ಎದುರಿನ ಮೊದಲ ಪಂದ್ಯದಲ್ಲಿ ಯುವಿ ಕೇವಲ 26 ರನ್ ಮಾತ್ರ ಗಳಿಸಿದ್ದರು. ಮೊದಲ ಇನ್ನಿಂಗ್ಸ್'ನಲ್ಲಿ 9 ರನ್ ಗಳಿಸಿದ್ದರೆ, ಎರಡನೇ ಇನ್ನಿಂಗ್ಸ್'ನಲ್ಲಿ ಯುವಿ ಆಟ 17 ರನ್'ಗಳಿಗೆ ಮುಕ್ತಾಯವಾಯಿತು.

ಇತ್ತೀಚೆಗಷ್ಟೇ ಮುಕ್ತಾಯವಾದ ದುಲೀಪ್ ಟ್ರೋಫಿಯಲ್ಲೂ ಯುವಿ ನೀರಸ ಪ್ರದರ್ಶನ ನೀಡಿದ್ದರು. ಇಂಡಿಯಾ ರೆಡ್ ಪರ ತಾವಾಡಿದ ಐದು ಪಂದ್ಯಗಳಲ್ಲಿ ಕೇವಲ 52 ರನ್ ಮಾತ್ರ ಗಳಿಸಿದ್ದರು. ಯುವಿಯ ಒಂದು ಶತಕ ಟೀಂ ಇಂಡಿಯಾದಲ್ಲಿ ಮತ್ತೆ ಸ್ಥಾನ ಪಡೆಯಲು ಸಹಾಯಕವಾಗಬಹುದೇ ಎನ್ನುವುದನ್ನು ಕಾದುನೋಡಬೇಕಿದೆ.