ಭಾನುವಾರ ಸ್ಮ್ಯಾಕ್‌ಡೌನ್‌ನಲ್ಲಿ 13 ಬಾರಿ ಚಾಂಪಿಯನ್ ರಾಂಡಿ ಆರ್ಟನ್ ಬಗ್ಗುಬಡಿದು ಮಹಲ್, ಪ್ರಶಸ್ತಿ ಗೆದ್ದ ಭಾರತದ 2ನೇ ವೃತ್ತಿಪರ ಕುಸ್ತಿಪಟು ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಮಹಲ್ ತಮಗೆ 15 ವರ್ಷ ವಯಸ್ಸಿದ್ದಾಗ ಪ್ರತಿ ದಿನ ಒಂದೂವರೆ ಗಂಟೆಗಳ ಕಾಲ ಬಸ್ ಪ್ರಯಾಣ ಮಾಡಿ ಕುಸ್ತಿ ಅಖಾಡಕ್ಕೆ ತೆರಳುತ್ತಿದ್ದರಂತೆ.

ನವದೆಹಲಿ(ಮೇ.25): ಡಬ್ಲ್ಯೂಡಬ್ಲ್ಯೂಇನ ನೂತನ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ ಭಾರತದ ಜಿಂದರ್ ಮಹಲ್, ಈ ಫಲಿತಾಂಶಕ್ಕಾಗಿ ಸತತ 15 ವರ್ಷಗಳ ಪರಿಶ್ರಮ ವಹಿಸಿದ್ದು, ಕೊನೆಗೂ ತಮ್ಮ ಕನಸು ನನಸಾಗಿದೆ ಎಂದು ಹೇಳಿಕೊಂಡಿದ್ದಾರೆ.

ಭಾನುವಾರ ಸ್ಮ್ಯಾಕ್‌ಡೌನ್‌ನಲ್ಲಿ 13 ಬಾರಿ ಚಾಂಪಿಯನ್ ರಾಂಡಿ ಆರ್ಟನ್ ಬಗ್ಗುಬಡಿದು ಮಹಲ್, ಪ್ರಶಸ್ತಿ ಗೆದ್ದ ಭಾರತದ 2ನೇ ವೃತ್ತಿಪರ ಕುಸ್ತಿಪಟು ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಮಹಲ್ ತಮಗೆ 15 ವರ್ಷ ವಯಸ್ಸಿದ್ದಾಗ ಪ್ರತಿ ದಿನ ಒಂದೂವರೆ ಗಂಟೆಗಳ ಕಾಲ ಬಸ್ ಪ್ರಯಾಣ ಮಾಡಿ ಕುಸ್ತಿ ಅಖಾಡಕ್ಕೆ ತೆರಳುತ್ತಿದ್ದರಂತೆ. ಅಲ್ಲಿ 20-30 ವರ್ಷ ವಯಸ್ಸಿನ ಹಿರಿಯ ಕುಸ್ತಿ ಪಟುಗಳ ಜತೆ ಅಭ್ಯಾಸ ನಡೆಸುತ್ತಿದ್ದಿದ್ದಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಭ್ಯಾಸದ ವೇಳೆ ಎಷ್ಟೇ ಏಟಾದರೂ, ಗಾಯಗೊಂಡರೂ ಒಂದು ದಿನವೂ ಅಭ್ಯಾಸ ತಪ್ಪಿಸಿಕೊಳ್ಳುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಡಬ್ಲ್ಯೂಡಬ್ಲ್ಯೂಇನ ಆರಂಭದ ದಿನಗಳಲ್ಲಿ ಯಶಸ್ಸು ಸಾಸಿದ್ದ ಅವರನ್ನು ಆನಂತರ ದಿಢೀರನೆ ಕೈಬಿಡಲಾಗಿತ್ತು. ಆದರೆ ಕಳೆದ ವರ್ಷವಷ್ಟೇ ಅವರು ಮತ್ತೊಮ್ಮೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಕೇವಲ ಒಂದು ವರ್ಷ ಅವಯಲ್ಲಿ ಮಹಲ್ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ‘‘ಮೊದಲ ಅವಕಾಶದಲ್ಲಿ ಆದ ಗೊಂದಲಗಳು, ಅವಮಾನಗಳಿಂದ ಕುಗ್ಗಿ ಹೋಗಿದ್ದೆ, ಆದರೆ 2ನೇ ಅವಕಾಶವನ್ನು ಕೈಚೆಲ್ಲಲು ನಾನು ಸಿದ್ಧನಿರಲಿಲ್ಲ. ಛಲ ಬಿಡದೆ ಹೋರಾಡಿದೆ. ಪರಿಶ್ರಮ ನನ್ನ ಕೈಹಿಡಿಯಿತು’’ ಎಂದು ಮಹಲ್ ತಮ್ಮ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ದಿ ಗ್ರೇಟ್ ಖಲಿ ನಂತರ ವಿಶ್ವ ಮನರಂಜನಾ ಕುಸ್ತಿ ಚಾಂಪಿಯನ್‌ಶಿಪ್ ಗೆದ್ದ ಭಾರತೀಯ ಎನ್ನುವ ದಾಖಲೆ ಬರೆದಿರುವ ಮಹಲ್, ‘‘ಭಾರತದಲ್ಲಿ ಈ ಕ್ರೀಡೆಗೆ ಅಪಾರ ಜನಪ್ರಿಯತೆ ಇದೆ. ಹೀಗಾಗಿ, ಇದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕುಸ್ತಿ ನಮ್ಮ ದೇಶದ ಆಟ. ಅದನ್ನು ಸ್ವಲ್ಪ ಬದಲಾವಣೆಗಳೊಂದಿಗೆ ಡಬ್ಲ್ಯೂಡಬ್ಲ್ಯೂಇನಲ್ಲಿ ಆಡಲಾಗುತ್ತೆ. ನಮ್ಮ ಯುವ ಕುಸ್ತಿಪಟುಗಳು ಈ ವೃತ್ತಿಯನ್ನ ಆರಿಸಿಕೊಳ್ಳಬೇಕಿದೆ. ಕೇವಲ ಜನಪ್ರಿಯತೆ ಮಾತ್ರವಲ್ಲ, ಉತ್ತಮ ಸಂಪಾದನೆಯೂ ಇದೆ’’ ಎಂದು ಮಹಲ್ ದೇಶದಲ್ಲಿ ಕ್ರೀಡೆಯ ಬೆಳವಣಿಗೆ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಡಬ್ಲ್ಯೂಡಬ್ಲ್ಯೂಇನಲ್ಲೂ ಕುಸ್ತಿಪಟುಗಳ ಉದ್ದೀಪನ ಮದ್ದು ಪರೀಕ್ಷೆ ನಡೆಸಲಾಗುತ್ತದೆ. ಡ್ರಗ್ಸ್ ಪಡೆದು ಆಟಗಾರರು ಆಡುತ್ತಾರೆ ಎನ್ನುವ ಆರೋಪಗಳನ್ನು ಮಹಲ್ ತಳ್ಳಿಹಾಕಿದ್ದಾರೆ. ‘‘ಪ್ರತಿ ಬಾರಿಯೂ ಮದ್ದು ಪರೀಕ್ಷೆ ನಡೆಯುತ್ತದೆ. ಅದೂ ಈ ವೃತ್ತಿಗೆ ಸಂಬಂಸದ ಸಂಸ್ಥೆಯೊಂದು ನಡೆಸುವ ಪರೀಕ್ಷೆಯಾಗಿರುವುದರಿಂದ ಮೋಸ ಮಾಡುವ ಪ್ರಶ್ನೆಯೇ ಬರುವುದಿಲ್ಲ. ನಾವು ಹೆಚ್ಚು ಆಹಾರ ಸೇವಿಸಿದರೂ, ಪ್ರತಿಯೊಂದರ ಬಗ್ಗೆಯೂ ಎಚ್ಚರಿಕೆ ಹೊಂದಿರಬೇಕು’’ ಎಂದು ಮಹಲ್ ಹೇಳಿದ್ದಾರೆ.

ಇದೇ ವೇಳೆ ತಮಗೆ ಬೆಂಬಲಿಸಿದ ಪ್ರತಿಯೊಬ್ಬ ಭಾರತೀಯ ಅಭಿಮಾನಿಗೂ ಧನ್ಯವಾದ ಹೇಳಿರುವ ಮಹಲ್, ಬೆಂಬಲವನ್ನು ಇದೇ ರೀತಿ ಮುಂದುವರಿಸುವಂತೆ ಮನವಿ ಮಾಡಿದ್ದಾರೆ. ಹಾಗೂ ಹೆಚ್ಚೆಚ್ಚು ಭಾರತೀಯರನ್ನು ವೃತ್ತಿಪರ ಕುಸ್ತಿಯಲ್ಲಿ ನೋಡುವ ಆಸೆ ವ್ಯಕ್ತಪಡಿಸಿದ್ದಾರೆ.