Wrestlers Protest ಪೊಲೀಸರ ಜೊತೆ ಕುಸ್ತಿಪಟುಗಳ ‘ಕುಸ್ತಿ’! ಪದಕ ವಾಪಸ್ ಬೆದರಿಕೆ!
ಹಾಸಿಗೆ ವಿಚಾರದಲ್ಲಿ ವಾಗ್ವಾದ, ಪೊಲೀಸರಿಂದ ಹಲ್ಲೆ ಕುಸ್ತಿಪಟುಗಳ ಆರೋಪ
ಕುಸ್ತಿಪಟುಗಳ ಮೇಲೆ ಹಲ್ಲೆ ನಡೆದಿಲ್ಲವೆಂದ ಡೆಲ್ಲಿ ಪೊಲೀಸರು
ಕುಸ್ತಿಪಟುಗಳಿಂದ ಪದಕ ವಾಪಸ್ ಬೆದರಿಕೆ!
ನವದೆಹಲಿ(ಮೇ.05): ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್ಭೂಷಣ್ ವಿರುದ್ಧ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿರುವ ಜಂತರ್ ಮಂತರ್ನಲ್ಲಿ ಬುಧವಾರ ರಾತ್ರಿ ಭಾರೀ ಹೈಡ್ರಾಮಾ ಸೃಷ್ಟಿಯಾಗಿದೆ. ಹಾಸಿಗೆ ವಿಚಾರದಲ್ಲಿ ಪೊಲೀಸರು ಹಲ್ಲೆ ನಡೆಸಿದ್ದಾಗಿ ಕುಸ್ತಿಪಟುಗಳು ಆರೋಪಿಸಿದ್ದು, ಅದನ್ನು ದೆಹಲಿ ಪೊಲೀಸರು ನಿರಾಕರಿಸಿದ್ದಾರೆ. ಕುಸ್ತಿಪಟುಗಳು ಹಾಗೂ ಪೊಲೀಸರು ಹಲ್ಲೆ ವಿಚಾರದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿದ್ದು, ಪ್ರಕರಣ ಮತ್ತಷ್ಟು ಬಿಗಡಾಯಿಸಿದೆ.
‘ರಾತ್ರಿ ವೇಳೆ ಬಂದ ಪೊಲೀಸರು ನಮ್ಮ ಜನರೇಟರ್ ಸೆಟ್, ಹಾಸಿಗೆಗಳನ್ನು ಕೊಂಡೊಯ್ದಿದ್ದಾರೆ ಎಂದು’ ಕುಸ್ತಿಪಟು ಭಜರಂಗ್ ಪೂನಿಯಾ ಆರೋಪಿಸಿದ್ದಾರೆ. ವಿನೇಶ್ ಫೋಗಾಟ್ ಕೂಡಾ ಪ್ರತಿಕ್ರಿಯಿಸಿದ್ದು, ‘ನಿಮಗೆ ಕೊಲ್ಲಬೇಕಿದ್ದರೆ ನಮ್ಮನ್ನು ಕೊಲ್ಲಬಹುದು. ನಮಗೆ ಆಹಾರ ಕೂಡಾ ಸೇವಿಸಲಾಗುತ್ತಿಲ್ಲ. ಪೊಲೀಸರು ಗನ್ಗಳನ್ನು ಹಿಡಿದಿದ್ದಾರೆ. ಅವರು ನಮ್ಮನ್ನು ಕೊಲ್ಲಬಹುದು’ ಎಂದು ಕಣ್ಣೀರಿಟ್ಟಿದ್ದಾರೆ. ಸಂಗೀತಾ ಫೋಗಾಟ್, ಸಾಕ್ಷಿ ಮಲಿಕ್ ಕೂಡಾ ಮಾಧ್ಯಮಗಳ ಜೊತೆ ಅಳಲು ತೋಡಿಕೊಂಡಿದ್ದಾರೆ.
ಆರೋಪ ಸುಳ್ಳು: ಕುಸ್ತಿಪಟುಗಳ ಎಲ್ಲಾ ಆರೋಪಗಳನ್ನು ದೆಹಲಿ ಪೊಲೀಸರು ನಿರಾಕರಿಸಿದ್ದು, ಘಟನೆಯಲ್ಲಿ 5 ಪೊಲೀಸರೇ ಗಾಯಗೊಂಡಿದ್ದಾರೆ ಎಂದಿದ್ದಾರೆ. ‘ಯಾವುದೇ ಹಲ್ಲೆ ನಡೆಸಿಲ್ಲ. ಪ್ರತಿಭಟನಾ ನಿರತರ ಮೇಲೆ ಬಲಪ್ರಯೋಗ ಮಾಡಿಲ್ಲ. ಸ್ಥಳಕ್ಕೆ ಮಡಚಬಹುದಾದ ಹಾಸಿಗೆಗಳನ್ನು ತರಲು ಅನುಮತಿ ಇಲ್ಲ. ಹೀಗಾಗಿ ಕುಸ್ತಿಪಟುಗಳಿಂದ ನಿಯಮ ಉಲ್ಲಂಘನೆಯಾಗಿದ್ದನ್ನು ಪ್ರಶ್ನಿಸಿದ್ದೇವೆ ಅಷ್ಟೇ. ಪೊಲೀಸರು ಕುಡಿದು ಬಂದಿರಲಿಲ್ಲ. ಸಾಕಷ್ಟು ಪ್ರಮಾಣದಲ್ಲಿ ಮಹಿಳಾ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ’ ಎಂದಿದ್ದಾರೆ.
ಕುಸ್ತಿಪಟುಗಳಿಂದ ಪದಕ ವಾಪಸ್ ಬೆದರಿಕೆ!
ಪೊಲೀಸರ ಜೊತೆಗಿನ ಸಂಘರ್ಷದ ಬಳಿಕ ಕುಸ್ತಿಪಟುಗಳು ಪದಕ, ಪ್ರಶಸ್ತಿ, ಪುರಸ್ಕಾರಗಳನ್ನು ಹಿಂದಿರುಗಿಸುವುದಾಗಿ ಬೆದರಿಕೆ ಹಾಕಿದ್ದಾರೆ. ‘ನಾವು ನಮ್ಮ ಗೌರವಕ್ಕಾಗಿ ಹೋರಾಡುತ್ತಿದ್ದೇವೆ. ಆದರೆ ನಮ್ಮನ್ನು ತುಳಿಯಲಾಗುತ್ತಿದೆ. ನಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ. ದೇಶಕ್ಕೆ ಹೆಮ್ಮೆ ತಂದ ಕುಸ್ತಿಪಟುಗಳ ಜೊತೆ ಈ ರೀತಿ ವರ್ತಿಸುವುದಾದರೆ ಪದಕಗಳಿಂದ ಏನು ಪ್ರಯೋಜನ?. ನಾವು ಬೇಕಿದ್ದರೆ ಪದಕಗಳನ್ನು ಹಿಂದಿರುಗಿಸುತ್ತೇವೆ. ಜೀವ ಕೊಡಲೂ ನಾವು ಸಿದ್ಧ. ಆದರೆ ನಮಗೆ ನ್ಯಾಯ ಕೊಡಿ’ ಎಂದು ವಿನೇಶ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಸಾಕ್ಷಿ, ಭಜರಂಗ್, ವಿನೇಶ್ ಖೇಲ್ ರತ್ನ ಪ್ರಶಶ್ತಿಗೆ ಭಾಜನರಾಗಿದ್ದು, ಭಜರಂಗ್, ಸಾಕ್ಷಿ ಪದ್ಮಶ್ರೀ ಪ್ರಶಸ್ತಿಯನ್ನೂ ಪಡೆದಿದ್ದಾರೆ.
Wrestlers Protest: ಕುಸ್ತಿಪಟುಗಳ ಭೇಟಿಯಾದ ಪಿ.ಟಿ. ಉಷಾ!
ಸಾಕ್ಷ್ಯವಿಲ್ಲದೆ ಬಂಧನ ಸಾಧ್ಯವಿಲ್ಲ: ಪೊಲೀಸ್
ಈ ನಡುವೆ ಎಫ್ಐಆರ್ ದಾಖಲಾದರೂ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್ರನ್ನು ಬಂಧಿಸದೆ ಇರಲು ಕಾರಣವೇನು ಎನ್ನುವುದನ್ನು ದೆಹಲಿ ಪೊಲೀಸ್ ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ‘ಬ್ರಿಜ್ಭೂಷಣ್ ವಿರುದ್ಧದ ಆರೋಪ ಸಾಬೀತುಪಡಿಸುವ ಯಾವುದೇ ಸಾಕ್ಷ್ಯಾಧಾರ ಈವರೆಗೂ ಲಭ್ಯವಾಗಿಲ್ಲ. 4 ಅಪ್ರಾಪ್ತ ಅಥ್ಲೀಟ್ಗಳ ಹೇಳಿಕೆ ಪಡೆದುಕೊಂಡಿದ್ದೇವೆ. ಫೋನ್ ಕರೆ ಮಾಹಿತಿ, ಸಿಸಿಟೀವಿ ದೃಶ್ಯಗಳನ್ನು ಪರಿಶೀಲಿಸಿದ್ದೇವೆ. ಆದರೆ ಸಾಕ್ಷ್ಯಗಳು ಲಭ್ಯವಾಗಿಲ್ಲ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಸುಪ್ರೀಂ ವಿಚಾರಣೆ ಅಂತ್ಯ
ನವದೆಹಲಿ: ಬ್ರಿಜ್ಭೂಷಣ್ ವಿರುದ್ಧ ಕುಸ್ತಿಪಟುಗಳ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಚ್ ಮುಕ್ತಾಯಗೊಳಿಸಿದ್ದು, ಮ್ಯಾಜಿಸ್ಪ್ರೇಟ್ ಅಥವಾ ಹೈಕೋರ್ಚ್ಗೆ ಹೋಗುವಂತೆ ಸೂಚಿಸಿದೆ. ಗುರುವಾರ ನ್ಯಾ.ಡಿ.ವೈ.ಚಂದ್ರಚೂಡ್, ಪಿ.ಎಸ್.ನರಸಿಂಹ ಹಾಗೂ ಜೆ.ಬಿ.ಪರ್ಡಿವಾಲಾ ಅವರಿದ್ದ ಪೀಠ, ‘ಕುಸ್ತಿಪಟುಗಳ ಬೇಡಿಕೆಯಂತೆ ಬ್ರಿಜ್ ವಿರುದ್ಧ ಎಫ್ಐಆರ್ ದಾಖಲಾಗಿದೆ ಮತ್ತು ದೂರುದಾರರಿಗೆ ಪೊಲೀಸ್ ರಕ್ಷಣೆ ಒದಗಿಸಲಾಗಿದೆ. ಹೀಗಾಗಿ ಅರ್ಜಿ ವಿಚಾರಣೆ ಇಲ್ಲಿಗೆ ಕೊನೆಗೊಳಿಸುತ್ತಿದ್ದೇವೆ. ಅಗತ್ಯವಿದ್ದರೆ ಕೆಳ ನ್ಯಾಯಾಲಯದ ಮೊರೆ ಹೋಗಬಹುದು’ ಎಂದಿದೆ.
ಈ ಬಗ್ಗೆ ಕುಸ್ತಿಪಟುಗಳು ಪ್ರತಿಕ್ರಿಯಿಸಿದ್ದು, ಸುಪ್ರೀಂ ಆದೇಶದಿಂದ ಹಿನ್ನಡೆಯಾಗಿಲ್ಲ. ನಮ್ಮ ಮುಂದೆ ಈಗ ಹಲವು ಆಯ್ಕೆಗಳಿವೆ. ಹಿರಿಯರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ. ಪ್ರತಿಭಟನೆಯೂ ಮುಂದುವರಿಯಲಿದೆ’ ಎಂದಿದ್ದಾರೆ.