ಅಧಿಕಾರ ಬಳಸಿ ತಂಡದಿಂದ ಹೊರದಬ್ಬಲಾಗಿದೆ-ಬಿಸಿಸಿಐಗೆ ಮಿಥಾಲಿ ಪತ್ರ!
ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಿಂದ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಅವರನ್ನ ಹೊರಗಿಟ್ಟ ವಿವಾದ ಇದೀಗ ಬಿಸಿಸಿಐ ಅಂಗಳಕ್ಕೆ ತಲುಪಿದೆ. ತನ್ನನ್ನ ತಂಡದಿಂದ ಕೈಬಿಟ್ಟ ಹಿಂದಿನ ರಹಸ್ಯವನ್ನ ಪತ್ರದ ಮೂಲಕ ಮಿಥಾಲಿ ಬಹಿರಂಗ ಪಡಿಸಿದ್ದಾರೆ.
ಮುಂಬೈ(ನ.27): ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸಿ ಹೋರಾಟ ಅಂತ್ಯಗೊಳಿಸಿತ್ತು. ಈ ಪಂದ್ಯದಲ್ಲಿ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಕೈಬಿಟ್ಟಿರೋದು ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಬಿಸಿಸಿಐ ಮಿಥಾಲಿ ಹಾಗೂ ನಾಯಕಿ ಹರ್ಮನ್ಪ್ರೀತ್ ಕೌರ್ಗೆ ಬಿಸಿಸಿಐ ಮುಂದೆ ಹಾಜರಾಗುವಂತೆ ಸೂಚಿಸಿತ್ತು.
ವಿವಾದ ಬಳಿಕ ಮಿಥಾಲಿ ರಾಜ್ ಇದೀಗ ಬಿಸಿಸಿಐಗೆ ಸುದೀರ್ಘ ಪತ್ರ ಬರೆದಿದ್ದಾರೆ. ಕೋಚ್ ರಮೇಶ್ ಪವಾರ್ ಹಾಗೂ ಬಿಸಿಸಿಐ ಆಡಳಿತ ಸಮಿತಿ ಸದಸ್ಯೆ ಡಯಾನಾ ಇಡುಜಿ ಅಧಿಕಾರ ಬಳಸಿ ನನ್ನನ್ನ ತಂಡದಿಂದ ಹೊರಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಇದರಲ್ಲಿ ನಾಯಕಿ ಹರ್ಮನ್ಪ್ರೀತ್ ಪಾತ್ರ ಏನೂ ಇಲ್ಲ ಎಂದು ಕ್ಲೀನ್ ಚಿಟ್ ನೀಡಿದ್ದಾರೆ.
ಬಿಸಿಸಿಐ ಆಡಳಿತ ಸಮಿತಿ ಹಾಗೂ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿಗೆ ಮಿಥಾಲಿ ಪತ್ರ ಬರೆದಿದ್ದಾರೆ. ಇದೀಗ ಚೆಂಡು ಬಿಸಿಸಿಐ ಅಂಗಳದಲ್ಲಿ. ಶೀಘ್ರದಲ್ಲೇ ಬಿಸಿಸಿಐ ಈ ಕುರಿತು ನಿರ್ಧಾರ ಪ್ರಕಟಸಲಿದೆ.