ಬಾಂಗ್ಲಾ ಸರಣಿಗೆ ಪಟೇಲ್ ಹಾಗೂ ಸಾಹಾ ನಡುವೆ ಬಿಸಿಸಿಐ ಆಯ್ಕೆ ಯಾರಾಗಬಹುದು..?
ಪಾರ್ಥೀವ್ ಪಟೇಲ್ ಅಗತ್ಯಬಿದ್ದರೆ ಆರಂಭಿಕನಾಗಿ ಇಲ್ಲವೇ ಕೆಳಕ್ರಮಾಂಕದಲ್ಲೂ ಬ್ಯಾಟ್ ಬೀಸಲು ಶಕ್ತರಾಗಿದ್ದಾರೆ.
ಬೆಂಗಳೂರು(ಜ.31): ಮುಂದಿನ ತಿಂಗಳಿನಿಂದ ತವರಿನಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಇಂದು ಆಯ್ಕೆ ಪ್ರಕ್ರಿಯೆ ನಡೆಯಲಿದ್ದು ಆಯ್ಕೆ ಸಮಿತಿಗೆ ಕೀಪರ್ ನೇಮಕ ಮಾಡುವುದು ಸವಾಲಾಗಿ ಪರಿಣಮಿಸಿದೆ.
ಒಂದು ಎಂಟು ವರ್ಷಗಳ ಬಳಿಕ ರಾಷ್ಟ್ರೀಯ ತಂಡಕ್ಕೆ ಮರಳಿದ ಪಾರ್ಥೀವ್ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸಿಕ್ಕ ಅವಕಾಶವನ್ನು ಭರಪೂರವಾಗಿ ಬಳಸಿಕೊಂಡಿದ್ದೂ ಅಲ್ಲದೆ ರಣಜಿ ಟ್ರೋಫಿ ಫೈನಲ್'ನಲ್ಲಿ ಭರ್ಜರಿ ಶತಕ ಸಿಡಿಸಿ ಗುಜರಾಥ್'ಗೆ ಚೊಚ್ಚಲ ರಣಜಿ ಟ್ರೋಫಿ ತಂದುಕೊಡುವಲ್ಲೂ ಯಶಸ್ವಿಯಾಗಿದ್ದಾರೆ.
ಇನ್ನು ವೃದ್ದಿಮಾನ್ ಸಾಹ ಕೂಡ ಪ್ರತಿಭಾನ್ವಿತ ವಿಕೆಟ್ ಕೀಪರ್ ಆಗಿದ್ದು ಇರಾನಿ ಟ್ರೋಫಿಯಲ್ಲಿ ದ್ವಿಶತಕ ಬಾರಿಸುವ ಮೂಲಕ ನಾನು ತಂಡಕ್ಕೆ ಮರಳಲು ಫಿಟ್ ಆಗಿದ್ದೇನೆಂದು ಆಯ್ಕೆದಾರರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ವೃದ್ದಿಮಾನ್ ಸಾಹ ಕೂಡ ನಿರಂತರವಾಗಿ ಉತ್ತಮ ರನ್ ಕಲೆಹಾಕುತ್ತಿದ್ದು ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಂದ್ಯಪುರುಷೋತ್ತಮ ಪ್ರಶಸ್ತಿಗೂ ಭಾಜನರಾಗಿದ್ದರು.
ಪಾರ್ಥೀವ್ ಪಟೇಲ್ ಅಗತ್ಯಬಿದ್ದರೆ ಆರಂಭಿಕನಾಗಿ ಇಲ್ಲವೇ ಕೆಳಕ್ರಮಾಂಕದಲ್ಲೂ ಬ್ಯಾಟ್ ಬೀಸಲು ಶಕ್ತರಾಗಿದ್ದಾರೆ. ಆದರೆ ಕೆಲದಿನಗಳ ಹಿಂದಷ್ಟೆ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್'ಕೆ ಪ್ರಸಾದ್, ವಿಕೆಟ್ ಕೀಪಿಂಗ್'ನಲ್ಲಿ ನಮ್ಮ ಮೊದಲ ಆಯ್ಕೆ ವೃದ್ದಿಮಾನ್ ಸಾಹ ಎಂದು ಹೇಳಿದ್ದರು. ಬಾಂಗ್ಲಾ ಸರಣಿಯ ನಂತರ ಆಸ್ಟ್ರೇಲಿಯಾ ತಂಡ ಕೂಡಾ ಭಾರತ ಪ್ರವಾಸ ಕೈಗೊಳ್ಳಲಿದ್ದು ಆ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡುವ ಸಾಧ್ಯತೆಯಿದೆ.
ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಮಾದರಿಯ ಕ್ರಿಕೆಟ್'ಗೆ ರಾಜಿನಾಮೆ ಸಲ್ಲಿಸಿದ ಬಳಿಕ ಆ ಸ್ಥಾನಕ್ಕೆ ಭಾರೀ ಪೈಪೋಟಿ ವ್ಯಕ್ತವಾಗಿದ್ದು ಪಟೇಲ್ ಹಾಗೂ ಸಾಹ ನಡುವೆ ಆಯ್ಕೆ ಸಮಿತಿ ಯಾರಿಗೆ ಮಣೆ ಹಾಕಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಒಂದೊಮ್ಮೆ ನೀವು ಆಯ್ಕೆ ಸಮಿತಿಯ ಅಧ್ಯಕ್ಷರಾದರೆ ಪಟೇಲ್ ಹಾಗೂ ಸಾಹರಲ್ಲಿ ಯಾರನ್ನು ಆಯ್ಕೆ ಮಾಡುತ್ತೀರಾ..?
ನೀವೂ ಓಟ್ ಮಾ