ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಸೋಲು ಭಾರತದ ಅಜೇಯ ಓಟಕ್ಕೆ ಬ್ರೇಕ್ ಹಾಕಿದೆ. ಹೀಗಾಗಿ ಸಹಜವಾಗಿ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ. ಇದೀಗ ಭಾರತದ ಸೋಲಿಗೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕಾರಣ ಹೇಳಿದ್ದಾರೆ. ವೀರೂ ಹೇಳಿದ ಕಾರಣ ಇಲ್ಲಿದೆ.

ದೆಹಲಿ(ಜು.18): ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯ ಸೋಲೋ ಮೂಲಕ ಭಾರತ ಸರಣಿ ಸೋತಿದೆ. 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿಗೆ ಹಲವು ಕಾರಣಗಳಿವೆ. ಮಾಜಿ ಕ್ರಿಕೆಟಿಗ ವಿರೇಂದ್ರೆ ಸೆಹ್ವಾಗ್ ತಂಡದ ಸೋಲಿಗೆ ಯಾರು ಕಾರಣ ಅನ್ನೋದನ್ನ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತ ಬ್ಯಾಟಿಂಗ್ ಮುಗಿಸಿದ ತಕ್ಷಣವೇ ಸೆಹ್ವಾಗ್ ಟೀಂ ಇಂಡಿಯಾಗೆ ಎಚ್ಚರಿಕೆ ನೀಡಿದ್ದರು. ಭಾರತದ ಗೆಲುವಿಗೆ 290 ಅಥವಾ 300 ರನ್ ಅವಶ್ಯಕ ಎಂದಿದ್ದರು. ಇದೀಗ ಸೋಲಿನ ಬಳಿಕ, ಭಾರತ ತಂಡ ಎಡವಿದ್ದೆಲ್ಲಿ ಅನ್ನೋದನ್ನ ಹೇಳಿದ್ದಾರೆ.

ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿಗೆ ಬ್ಯಾಟ್ಸ್‌ಮನ್‌ಗಳೇ ಪ್ರಮುಖ ಕಾರಣ ಎಂದು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ, ಎಂ ಎಸ್ ಧೋನಿ ಹಾಗೂ ದಿನೇಶ್ ಕಾರ್ತಿಕ್ ಜವಾಬ್ದಾರಿ ನಿರ್ವಹಿಸಬೇಕಿತ್ತು. ಇವರಲ್ಲಿ ಯಾರಾದರೊಬ್ಬರು ರನ್ ವೇಗ ಹೆಚ್ಚಿಸಬೇಕಿತ್ತು. ಆದರೆ ಎಲ್ಲರೂ ಪೆವಿಲಿಯನ್ ಸೇರಿಕೊಂಡರು ಎಂದು ವೀರೂ ಹೇಳಿದ್ದಾರೆ.

ಧೋನಿ ಔಟಾಗಿದ್ದು 46ನೇ ಓವರ್‌ನಲ್ಲಿ. ಧೋನಿ ಕ್ರೀಸ್‌ನಲ್ಲಿರುವಾಗ ಭಾರತದ ರನ್ ವೇಗ ಹೆಚ್ಚಲಿಲ್ಲ. ಸಾಮಾನ್ಯವಾಗಿ ಧೋನಿ ಕ್ರೀಸ್‌ನಲ್ಲಿದ್ದರೆ, ಎದುರಾಳಿಗಳ ಆತ್ಮವಿಶ್ವಾಸ ಕಡಿಮೆಯಾಗುತ್ತೆ. ಆದರೆ ಧೋನಿ ಬ್ಯಾಟಿಂಗ್‌ ಎದುರಾಳಿಗಳಿಗೆ ಮೇಲುಗೈ ತಂದುಕೊಟ್ಟಿತು ಎಂದಿದ್ದಾರೆ.

ಭಾರತ ಬ್ಯಾಟಿಂಗ್ ವೈಫಲ್ಯವೇ ಸೋಲಿಗೆ ಕಾರಣ. 2ನೇ ಏಕದಿನ ಪಂದ್ಯದಿಂದ ಟೀಂ ಇಂಡಿಯಾ ಎಚ್ಚೆತ್ತುಕೊಳ್ಳಲಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ. ಮುಂಬರುವ ವಿಶ್ವಕಪ್ ಟೂರ್ನಿಯ ದೃಷ್ಟಿಯಿಂದ ಟೀಂ ಇಂಡಿಯಾ ಈ ಅಂಶಗಳನ್ನ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಸೂಚಿಸಿದ್ದಾರೆ.