ಒಂದು ಟೆಸ್ಟ್ ಪಂದ್ಯ ಸೋತಾಕ್ಷಣ ಎಲ್ಲವೂ ಹೋದಂತಿಲ್ಲ. ಭಾರತ ತಂಡ ಪ್ರಬಲವಾಗಿ ತಿರುಗಿಬೀಳಲಿದೆ ಎಂದೂ ಕೊಹ್ಲಿ ಈ ವೇಳೆ ಎದುರಾಳಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.

ಪುಣೆ(ಫೆ. 25): ಆಸ್ಟ್ರೇಲಿಯಾ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 333 ರನ್'ಗಳಿಂದ ಹೀನಾಯ ಸೋಲನುಭವಿಸಿ ಅಭಿಮಾನಿಗಳಿಗೆ ಅತೀವ ನಿರಾಶೆ ಉಂಟುಮಾಡಿದೆ. ಒತ್ತಡದ ಸ್ಥಿತಿಯಲ್ಲಿ ಸದಾ ಪುಟಿದೆದ್ದು ಆಡುವ ವಿರಾಟ್ ಕೊಹ್ಲಿ ಈ ಪಂದ್ಯದ ಎರಡೂ ಇನ್ನಿಂಗ್ಸಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ನಾಯಕನಂತೆ ಇಡೀ ಭಾರತ ತಂಡವೇ ಬ್ಯಾಟಿಂಗ್'ನಲ್ಲಿ ಹಳಿತಪ್ಪಿತು. ಇದು ಕಳೆದೆರಡು ವರ್ಷದಲ್ಲಿ ಟೀಮ್ ಇಂಡಿಯಾ ಆಡಿದ ಅತ್ಯಂತ ಕಳಪೆ ಪ್ರದರ್ಶನ ಎಂಬುದನ್ನು ನಾಯಕ ವಿರಾಟ್ ಕೊಹ್ಲಿ ಒಪ್ಪಿಕೊಂಡರು.

Add Asianetnews Kannada as a Preferred SourcegooglePreferred

ಪಂದ್ಯದ ಬಳಿಕ ಮಾತನಾಡುತ್ತಿದ್ದ ಕೊಹ್ಲಿ, ಆಸ್ಟ್ರೇಲಿಯಾದವರು ಪಿಚ್'ನ್ನು ಸಮರ್ಥವಾಗಿ ಉಪಯೋಗಿಸಿ ಎಲ್ಲಾ ವಿಭಾಗಗಳಲ್ಲೂ ತಮ್ಮ ತಂಡವನ್ನು ಪರಾಭವಗೊಳಿಸಿದರು ಎಂದು ಅಭಿಪ್ರಾಯಪಟ್ಟರು.

"ಈ ಪಂದ್ಯದಲ್ಲಿ ನಾವು ಎಲ್ಲಾ ರೀತಿಯಲ್ಲೂ ಸೋತಿದ್ದೇವೆ. ಇದನ್ನು ನಾವು ಒಪ್ಪಿಕೊಳ್ಳಬೇಕು. ಕಳೆದೆರಡು ವರ್ಷದಲ್ಲಿ ಇದು ನಮ್ಮ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶನವಾಗಿದೆ. ಈ ಮೂರು ದಿನದಲ್ಲಿ ಒಂದು ದಿನವೂ ನಮ್ಮಿಂದ ಒಳ್ಳೆಯ ಪ್ರದರ್ಶನ ಬರಲಿಲ್ಲ. ನಾವು ಎಲ್ಲಿ ಹಳಿತಪ್ಪಿದೆವು ಎಂಬುದನ್ನು ಅವಲೋಕಿಸಬೇಕಿದೆ" ಎಂದು ಕೊಹ್ಲಿ ತಿಳಿಸಿದರು.

"ಎರಡು ಸೆಷೆನ್'ನಲ್ಲಿ ನಾವು ತೀರಾ ಹೀನಾಯ ಪ್ರದರ್ಶನ ನೀಡಿದೆವು. ಆಸ್ಟ್ರೇಲಿಯಾದಂಥ ಉತ್ಕೃಷ್ಟ ತಂಡದೊಂದಿಗಿನ ಪಂದ್ಯದಲ್ಲಿ ಹೀಗಾದರೆ ಕಂಬ್ಯಾಕ್ ಮಾಡುವುದು ಕಷ್ಟಕರವೇ ಸರಿ. ಪಂದ್ಯಾದ್ಯಂತ ಹಿಡಿತ ಬಿಟ್ಟುಕೊಡ ಆಸ್ಟ್ರೇಲಿಯಾದ ಆಟಗಾರರ ಪ್ರದರ್ಶನವನ್ನು ಮೆಚ್ಚಿಕೊಳ್ಳದೇ ಬೇರೆ ದಾರಿ ಇಲ್ಲ" ಎಂದು ಟೀಮ್ ಇಂಡಿಯಾ ನಾಯಕ ಕೊಹ್ಲಿ ತಮ್ಮ ಎದುರಾಳಿಗಳನ್ನು ಪ್ರಶಂಸಿಸಿದರು.

ಆದರೆ, ಒಂದು ಟೆಸ್ಟ್ ಪಂದ್ಯ ಸೋತಾಕ್ಷಣ ಎಲ್ಲವೂ ಹೋದಂತಿಲ್ಲ. ಭಾರತ ತಂಡ ಪ್ರಬಲವಾಗಿ ತಿರುಗಿಬೀಳಲಿದೆ ಎಂದೂ ಕೊಹ್ಲಿ ಈ ವೇಳೆ ಎದುರಾಳಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.

"ನಾವು ಭರ್ಜರಿಯಾಗಿ ಕಂಬ್ಯಾಕ್ ಮಾಡುವ ವಿಶ್ವಾಸ ಹೊಂದಿದ್ದೇವೆ. ಸತತ 19 ಪಂದ್ಯ ಸೋಲನ್ನೇ ಕಾಣದೇ ಆಡಿದ್ದೆವು. ಅದೇ ಹುಮ್ಮಸ್ಸಿನಲ್ಲಿ ಮುಂದೆಯೂ ಆಡುತ್ತೇವೆ. ಈ ಪಂದ್ಯ ಸೋತರೂ ಪ್ರೇಕ್ಷಕರು ಇನ್ನೂ ಬೆಂಬಲ ಕೊಡುತ್ತಿರುವುದು ನಮಗೆ ಸಮಾಧಾನ ತಂದಿದೆ" ಎಂದವರು ಹೇಳಿದರು.