ನಾಯಕನಾಗಿ ಟೀಂ ಇಂಡಿಯಾ ಆಲ್ರೌಂಡರ್ ಸುರೇಶ್ ರೈನಾ ಎಂಟ್ರಿ!
2018ರ ಜುಲೈನಲ್ಲಿ ಇಂಗ್ಲೆಂಡ್ ವಿರುದ್ದದ ಏಕದಿನ ಪಂದ್ಯದಲ್ಲಿ ಕಾಣಿಸಿಕೊಂಡ ಟೀಂ ಇಂಡಿಯಾ ಆಲ್ರೌಂಡರ್ ಸುರೇಶ್ ರೈನಾ ಇದೀಗ ಮತ್ತೆ ಕಮ್ಬ್ಯಾಕ್ ಮಾಡುತ್ತಿದ್ದಾರೆ. ಇಂಗ್ಲೆಂಡ್ ಸರಣಿ ಬಳಿಕ ವಿಶ್ರಾಂತಿಗೆ ಜಾರಿದ್ದ ರೈನಾ ಮತ್ತೆ ಕ್ರೀಡಾಂಗಣಕ್ಕೆ ಇಳಿಯಲು ಸಜ್ಜಾಗಿದ್ದಾರೆ.
ಉತ್ತರಪ್ರದೇಶ(ಸೆ.16): ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅವಕಾಶ ಪಡೆದು ಮತ್ತೆ ಟೀಂ ಇಂಡಿಯಾದಿದ ದೂರ ಸರಿದಿರುವ ಆಲ್ರೌಂಡರ್ ಸುರೇಶ್ ರೈನಾ ಮತ್ತೆ ಕಮ್ಬ್ಯಾಕ್ ಮಾಡುತ್ತಿದ್ದಾರೆ.
ಬರೋಬ್ಬರಿ 1 ವರ್ಷಗಳ ಬಳಿಕ ಸುರೇಶ್ ರೈನಾ ಉತ್ತರ ಪ್ರದೇಶ ತಂಡ ಸೇರಿಕೊಂಡಿದ್ದಾರೆ. 2018-19ರ ಸಾಲಿನ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಸುರೇಶ್ ರೈನಾ ಉತ್ತರ ಪ್ರದೇಶ ತಂಡವನ್ನ ಮುನ್ನಡೆಸಲಿದ್ದಾರೆ.
3 ವರ್ಷಗಳ ಬಳಿಕ ಟೀಂ ಇಂಡಿಯಾಗೆ ಕಮ್ಬ್ಯಾಕ್ ಮಾಡಿದ್ದ ಸುರೇಶ್ ರೈನಾ, ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸರಿಯಾಗಿ ಅವಕಾಶವೇ ಸಿಗಲಿಲ್ಲ. ಇನ್ನು ಏಷ್ಯಾಕಪ್ ಟೂರ್ನಿಯಿಂದಲೂ ರೈನಾ ಹೊರಗುಳಿಯಬೇಕಾಯಿತು. ಇದೀಗ ವಿಜಯ್ ಹಜಾರೆ ಟೂರ್ನಿ ಮೂಲಕ ಮತ್ತೆ ಟೀಂ ಇಂಡಿಯಾಗೆ ಮರಳೋ ವಿಶ್ವಾಸದಲ್ಲಿದ್ದಾರೆ.
ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ 16 ಸದಸ್ಯರ ತಂಡ ಪ್ರಕಟಿಸಿದೆ. ಸುರೇಶ್ ರೈನಾ ನಾಯಕತ್ವ ವಹಿಸಿಕೊಂಡರೆ ಹಿರಿಯ ಸ್ಪಿನ್ನರ್ ಅಮಿತ್ ಮಿಶ್ರಾ ಕೂಡ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.