ರೈಲ್ವೇಸ್ ಮಣಿಸಿ ಕ್ವಾರ್ಟರ್ಸ್'ಗೆ ಲಗ್ಗೆಯಿಟ್ಟ ಕರ್ನಾಟಕ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಮಯಾಂಕ್ ಅಗರ್'ವಾಲ್(89) ಹಾಗೂ ಪವನ್ ದೇಶ್'ಪಾಂಡೆ(65) ಆಕರ್ಷಕ ಬ್ಯಾಟಿಂಗ್ ನೆರವಿನಿಂದ 257 ರನ್'ಗಳ ಸವಾಲಿನ ಮೊತ್ತ ಕಲೆಹಾಕಿತ್ತು.
ಬೆಂಗಳೂರು(ಫೆ.16): ಪ್ರಸಿದ್ಧ್ ಕೃಷ್ಣ ಹಾಗೂ ಪ್ರದೀಪ್ ಟಿ ಮಾರಕ ದಾಳಿಯ ನೆರವಿನಿಂದ ರೈಲ್ವೇಸ್ ತಂಡವನ್ನು 16 ರನ್'ಗಳಿಂದ ರೋಚಕವಾಗಿ ಮಣಿಸಿದ ಕರ್ನಾಟಕ ಕ್ವಾರ್ಟರ್'ಫೈನಲ್ಸ್'ಗೆ ಲಗ್ಗೆಯಿಟ್ಟಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಮಯಾಂಕ್ ಅಗರ್'ವಾಲ್(89) ಹಾಗೂ ಪವನ್ ದೇಶ್'ಪಾಂಡೆ(65) ಆಕರ್ಷಕ ಬ್ಯಾಟಿಂಗ್ ನೆರವಿನಿಂದ 257 ರನ್'ಗಳ ಸವಾಲಿನ ಮೊತ್ತ ಕಲೆಹಾಕಿತ್ತು. ಕರ್ನಾಟಕ ನೀಡಿದ ಗುರಿ ಬೆನ್ನತ್ತಿದ ರೈಲ್ವೇಸ್ ತಂಡ ಆರಂಭದಲ್ಲೇ ಮುಗ್ಗರಿಸಿ ಆಘಾತ ಅನುಭವಿಸಿತು. ಪ್ರಸಿದ್ಧ್ ಮೊದಲ ಓವರ್'ನ ಮೂರನೇ ಎಸೆತದಲ್ಲಿ ಸೌರಬ್ ವಾಕ್ಸರ್'ರನ್ನು ಪೆವಿಲಿಯನ್'ಗೆ ಅಟ್ಟಿದರೆ, ಎರಡನೇ ಓವರ್'ನ ಮೊದಲ ಎಸೆತದಲ್ಲಿ ಅಸದ್ ಪಠಾಣ್ ಅವರನ್ನು ಪ್ರದೀಪ್ ಕ್ಲೀನ್ ಬೌಲ್ಡ್ ಮಾಡಿದರು. ಆ ಬಳಿಕವೂ ಶಿಸ್ತುಬದ್ಧ ದಾಳಿ ನಡೆಸಿದ ಕರ್ನಾಟಕ 13 ಓವರ್ ವೇಳೆಗೆ ರೈಲ್ವೇಸ್ 54 ರನ್'ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ 7ನೇ ವಿಕೆಟ್'ಗೆ ಜತೆಯಾದ ಅಂಕಿತ್ ಯಾದವ್(51) ಹಾಗೂ ಅನುರೀತ್ ಸಿಂಗ್(59) ಜೋಡಿ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಒಂದು ಹಂತದಲ್ಲಿ ಜಯದತ್ತ ಕೊಂಡೊಯ್ಯುತ್ತಿದ್ದ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ರೋನಿತ್ ಮೋರೆ ಯಶಸ್ವಿಯಾದರು. ಅನುರೀತ್ ಸಿಂಗ್(59) ಕ್ಲೀನ್ ಬೌಲ್ಡ್ ಮಾಡಿದ ಮೋರೆ ತಂಡಕ್ಕೆ ಮತ್ತೆ ಮೇಲುಗೈ ಒದಗಿಸಿಕೊಟ್ಟರು. ಆನಂತರ ಬ್ಯಾಟಿಂಗ್'ಗಿಳಿದ ಅವಿನಾಶ್ ಯಾದವ್ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ(40) ರೈಲ್ವೇಸ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರಾದರೂ ಅವರನ್ನು ಬಲಿ ಪಡೆಯುವಲ್ಲಿ ಪ್ರಸಿದ್ಧ್ ಮತ್ತೆ ಯಶಸ್ವಿಯಾದರು. ಅಂತಿಮವಾಗಿ ರೈಲ್ವೇಸ್ 241 ರನ್'ಗಳಿಗೆ ಸರ್ವಪತನ ಕಂಡಿತು. ಕರ್ನಾಟಕ ಪರ ಪ್ರಸಿದ್ಧ್ ಕೃಷ್ಣ(4), ಪ್ರದೀಪ್ ಟಿ(4) ರೋನಿತ್ ಮೋರೆ(2) ವಿಕೆಟ್ ಪಡೆದರು.
ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕದ ಆರಂಭ ಕೂಡ ಉತ್ತಮವಾಗಿರಲಿಲ್ಲ. ತಂಡದ ಮೊತ್ತ 41 ರನ್'ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಈ ವೇಳೆ 4ನೇ ವಿಕೆಟ್'ಗೆ ಜತೆಯಾದ ಮಯಾಂಕ್ ಅಗರ್'ವಾಲ್(89) ಹಾಗೂ ಪವನ್ ದೇಶ್'ಪಾಂಡೆ(65) ಜೋಡಿ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.
ಸಂಕ್ಷಿಪ್ತ ಸ್ಕೋರ್:
ಕರ್ನಾಟಕ: 257/10
ಅಗರ್'ವಾಲ್: 89
ಮಿಶ್ರಾ: 45/3
ರೈಲ್ವೇಸ್: 241/10
ಅನುರೀತ್: 59
ಪ್ರಸಿದ್ಧ್ ಕೃಷ್ಣ: 35/4