ರಾಯುಡು ಬದಲು ಟೀಂ ಇಂಡಿಯಾದಲ್ಲಿ ಕನ್ನಡಿಗನಿಗೆ ಸಿಗುತ್ತಾ ಅವಕಾಶ?
ಯೋ-ಯೋ ಫಿಟ್ನೆಸ್ ಟೆಸ್ಟ್ನಲ್ಲಿ ಬ್ಯಾಟ್ಸ್ಮನ್ ಅಂಬಾಟಿ ರಾಯುಡು ಫೇಲ್ ಆಗಿದ್ದಾರೆ. ಹೀಗಾಗಿ ರಾಯುಡು ಸ್ಥಾನಕ್ಕೆ ತೀವ್ರ ಪೈಪೋಟಿ ಆರಂಭಗೊಂಡಿದೆ. ಇದೀಗ ಈ ಸ್ಥಾನಕ್ಕೆ ಇಬ್ಬರು ಕನ್ನಡಿಗರು ಹೋರಾಟ ನಡೆಸುತ್ತಿದ್ದಾರೆ.
ಮುಂಬೈ(ಜೂ.16): ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿರೋ ಟೀಂ ಇಂಡಿಯಾ ಆಟಗಾರರ ಯೋ-ಯೋ ಫಿಟ್ನೆಸ್ ಟೆಸ್ಟ್ ಮುಗಿದಿದೆ. ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಸೀನಿಯರ್ ಕ್ರಿಕೆಟಿಗರು ಫಿಟ್ನೆಸ್ ಟೆಸ್ಟ್ನಲ್ಲಿ ಪಾಸಾಗಿದ್ದಾರೆ. ಆದರೆ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದ ಅಂಬಾಟಿ ರಾಯುಡು ಯೋ-ಯೋ ಟೆಸ್ಟ್ನಲ್ಲಿ ಫೇಲ್ ಆಗಿ ಇದೀಗ ತಂಡದಿಂದ ಹೊರನಡೆದಿದ್ದಾರೆ. ಇದೀಗ ಅಂಬಾಟಿ ರಾಡುಡು ತೆರವಾದ ಸ್ಥಾನಕ್ಕೆ ಯಾರು ಆಯ್ಕೆಯಾಗುತ್ತಾರೆ ಅನ್ನೋ ಚರ್ಚೆ ಶುರುವಾಗಿದೆ.
ಅಜಿಂಕ್ಯ ರಹಾನೆ:
ಇಂಗ್ಲೆಂಡ್ ಪ್ರವಾಸಕ್ಕೆ ತಂಡ ಪ್ರಕಟಗೊಂಡಾಗ ಎಲ್ಲರಿಗೂ ಅಚ್ಚರಿ ಕಾದಿತ್ತು. ಏಕದಿನ ತಂಡದಿಂದ ಅಜಿಂಕ್ಯ ರಾಹನೆಯನ್ನ ಕೈಬಿಡಲಾಗಿತ್ತು. ರಾಯುಡುಗಾಗಿ ರಹಾನೆ ಸ್ಥಾನ ಬಿಟ್ಟುಕೊಡಬೇಕಾಗಿ ಬಂದಿತ್ತು. ಇದೀಗ ರಾಯುಡು ಫಿಟ್ನೆಸ್ ಟೆಸ್ಟ್ನಲ್ಲಿ ಫೇಲ್ ಆಗಿರೋ ಕಾರಣ, ಮತ್ತೆ ರಹಾನೆ ಆಯ್ಕೆಯಾಗೋ ಸಾಧ್ಯತೆ ಹೆಚ್ಚಿದೆ.
ಮನೀಶ್ ಪಾಂಡೆ:
ಇಂಗ್ಲೆಂಡ್ ಪ್ರವಾಸದ ಟಿ-ಟ್ವೆಂಟಿ ತಂಡದಲ್ಲಿ ಸ್ಥಾನ ಪಡೆದಿರುವ ಮನೀಶ್ ಪಾಂಡೆಗೆ ಮತ್ತೊಂದು ಅವಕಾಶ ಸಿಗೋ ಸಾಧ್ಯತೆ ಇದೆ. 2017ರ ಶ್ರೀಲಂಕಾ ವಿರುದ್ದದ ಏಕದಿನ ಪಂದ್ಯದ ಬಳಿಕ ತಂಡದಿಂದ ದೂರ ಉಳಿದಿರುವ ಪಾಂಡೆ ಕಮ್ಬ್ಯಾಕ್ ಮಾಡಲು ಇದು ಸೂಕ್ತ ಸಮಯ. ಈ ಮೂಲಕ 2019ರ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬಹುದಾಗಿದೆ.
ಮಯಾಂಕ್ ಅಗರ್ವಾಲ್:
ಈ ಸ್ಥಾನಕ್ಕೆ ಕನ್ನಡಿಗ ಮಯಾಂಕ್ ಅಗರ್ವಾಲ್ ಆಯ್ಕೆಯಾಗೋ ಸಾದ್ಯತೆ ತಳ್ಳಿಹಾಕುವಂತಿಲ್ಲ. ಕಳೆದ ರಣಟಿ ಟ್ರೋಫಿಯ 13 ಇನ್ನಿಂಗ್ಸ್ಗಳಲ್ಲಿ 1160 ರನ್ ಸಿಡಿಸಿದರೆ, ವಿಜಯ್ ಹಜಾರೆಯಲ್ಲಿ 723 ರನ್ ದಾಖಲಿಸಿದ್ದಾರೆ. ಇನ್ನು ಸಯ್ಯದ್ ಮುಷ್ತಾರ್ ಆಲಿ ಟೂರ್ನಿಯಲ್ಲಿ 258 ರನ್ ಸಿಡಿಸಿದ್ದಾರೆ. ಹೀಗಾಗಿ ಮಯಾಂಕ್ ಆಯ್ಕೆಯಾಗೋ ಸಾಧ್ಯತೆ ಇದೆ. ಆದರೆ ಮಯಾಂಕ್ ಇತ್ತೀಚಿನ ಐಪಿಎಲ್ ಪ್ರದರ್ಶನ ಆಯ್ಕೆಗೆ ತೊಡಕಾಗಬಹುದು.
ಇವರೊಂದಿಗೆ ಯುವ ಬ್ಯಾಟ್ಸ್ಮನ್ ರಿಷಬ್ ಪಂತ್, ಮುಂಬೈ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಸೇರಿದಂತೆ ಹಲವು ಕ್ರಿಕೆಟಿಗರು ತೀವ್ರ ಪೈಪೋಟಿ ನೀಡಲಿದ್ದಾರೆ.