ಬಯಲಾಯ್ತು ಆಫ್ರಿಕಾ ಪ್ರವಾಸಕ್ಕೂ ಮುನ್ನ ಭಾರತ ತಂಡದ ಎಡವಟ್ಟು...!
‘ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಗೂ ಮುನ್ನ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ಸಲುವಾಗಿ ಭಾರತ ತಂಡದ ಟೆಸ್ಟ್ ತಜ್ಞರನ್ನು ಪೂರ್ವಭಾವಿಯಾಗಿ ದ.ಆಫ್ರಿಕಾಕ್ಕೆ ಕಳುಹಿಸಲು ಸುಪ್ರೀಂಕೋರ್ಟ್ ನೇಮಿತ ಸಮಿತಿ ಮತ್ತು ಬಿಸಿಸಿಐ ಅಧಿಕಾರಿಗಳು ಮುಂದಾಗಿದ್ದರು. ಈ ಸಂಬಂಧ ಸಿಒಎ ಹಾಗೂ ಬಿಸಿಸಿಐ ಅಧಿಕಾರಿಗಳು, ನಿರ್ವಹಣಾ ಮಂಡಳಿಗೆ ಪ್ರಸ್ತಾವ ಸಹ ಸಲ್ಲಿಸಿದ್ದರು. ಆದರೆ, ಭಾರತ ಕ್ರಿಕೆಟ್ ತಂಡದ ನಿರ್ವಹಣಾ ಮಂಡಳಿ ಇದನ್ನು ನಿರಾಕರಿಸಿತ್ತು’ ಎಂದು ಬಿಸಿಸಿಐ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನವದೆಹಲಿ(ಜ.11): ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್'ನಲ್ಲಿ ಭಾರತ ಕ್ರಿಕೆಟ್ ತಂಡದ ಸೋಲಿಗೆ ತಂಡದ ನಿರ್ವಹಣಾ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿಬಂದಿದೆ.
ಮೊದಲ ಟೆಸ್ಟ್ನಲ್ಲಿ ಭಾರತ ತಂಡದ ಪ್ರದರ್ಶನ ಗಮನಿಸಿದರೆ, ಪೂರ್ವತಯಾರಿ ಕೊರತೆ ಎದ್ದು ಕಾಣುತ್ತಿತ್ತು. ಅಲ್ಲದೇ ಒಂದು ಸರಣಿಯಿಂದ ಮತ್ತೊಂದು ಸರಣಿಗೆ ಸಮಯಾವಕಾಶ ನೀಡಬೇಕು. ಪೂರ್ವಸಿದ್ಧತೆ ನಡೆಸಲು ಅವಕಾಶ ನೀಡಬೇಕು. ಒಂದರ ಹಿಂದೆ ಒಂದರಂತೆ ಸರಣಿ ಆಯೋಜಿಸುವುದು ಸೂಕ್ತವಲ್ಲ ಎಂದು ದಕ್ಷಿಣ ಆಫ್ರಿಕಾ ಸರಣಿ ಆರಂಭಕ್ಕೂ ಮೊದಲೇ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಈ ಹೇಳಿಕೆಗೆ ಪುಷ್ಟಿ ನೀಡುವಂತಹ ಅಂಶವೊಂದು ಬೆಳಕಿಗೆ ಬಂದಿದ್ದು, ಈ ಕಳಪೆ ಪ್ರದರ್ಶನಕ್ಕೆ ತಂಡದ ನಿರ್ವಹಣಾ ಮಂಡಳಿಯ ತೀರ್ಮಾನವೇ ಕಾರಣ ಎನ್ನಲಾಗಿದೆ.
‘ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಗೂ ಮುನ್ನ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ಸಲುವಾಗಿ ಭಾರತ ತಂಡದ ಟೆಸ್ಟ್ ತಜ್ಞರನ್ನು ಪೂರ್ವಭಾವಿಯಾಗಿ ದ.ಆಫ್ರಿಕಾಕ್ಕೆ ಕಳುಹಿಸಲು ಸುಪ್ರೀಂಕೋರ್ಟ್ ನೇಮಿತ ಸಮಿತಿ ಮತ್ತು ಬಿಸಿಸಿಐ ಅಧಿಕಾರಿಗಳು ಮುಂದಾಗಿದ್ದರು. ಈ ಸಂಬಂಧ ಸಿಒಎ ಹಾಗೂ ಬಿಸಿಸಿಐ ಅಧಿಕಾರಿಗಳು, ನಿರ್ವಹಣಾ ಮಂಡಳಿಗೆ ಪ್ರಸ್ತಾವ ಸಹ ಸಲ್ಲಿಸಿದ್ದರು. ಆದರೆ, ಭಾರತ ಕ್ರಿಕೆಟ್ ತಂಡದ ನಿರ್ವಹಣಾ ಮಂಡಳಿ ಇದನ್ನು ನಿರಾಕರಿಸಿತ್ತು’ ಎಂದು ಬಿಸಿಸಿಐ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಭಾರತ ತಂಡದ ಟೆಸ್ಟ್ ತಜ್ಞರಾದ ಮುರಳಿ ವಿಜಯ್, ಚೇತೇಶ್ವರ್ ಪೂಜಾರ, ಅಜಿಂಕ್ಯಾ ರಹಾನೆ ಸೇರಿದಂತೆ ಕೆಲ ಆಟಗಾರರನ್ನು ದಕ್ಷಿಣ ಆಫ್ರಿಕಾಕ್ಕೆ ಟೆಸ್ಟ್ ಸರಣಿ ಆರಂಭಕ್ಕೂ ಮೊದಲೇ ಕಳುಹಿಸಲು ಬಿಸಿಸಿಐ ತೀರ್ಮಾನಿಸಿತ್ತು. ಅಲ್ಲದೇ ಈ ಮೂವರು ಆಟಗಾರರು ಸೀಮಿತ ಓವರ್'ಗಳ ತಂಡದಲ್ಲಿ ಸಹ ಸ್ಥಾನ ಪಡೆದಿರಲಿಲ್ಲ. ಅಭ್ಯಾಸ ತಪ್ಪದೇ ಇರಲಿ ಎಂಬ ಉದ್ದೇಶದಿಂದ ದೇಸಿ ಪಂದ್ಯಗಳಲ್ಲಿ ಆಟವಾಡುತ್ತಿದ್ದರು. ಇದು ಮಾತ್ರವಲ್ಲದೇ ಶ್ರೀಲಂಕಾ ವಿರುದ್ಧದ ಸೀಮಿತ ಓವರ್'ಗಳ ಟೂರ್ನಿಗಾಗಿ ಆಯ್ಕೆಗೊಂಡಿದ್ದ ತಂಡದಲ್ಲಿನ ಅಗ್ರ ಆಟಗಾರರನ್ನೂ ಆಫ್ರಿಕಾಕ್ಕೆ ಕಳುಹಿಸಲು ಮತ್ತು ಇದಕ್ಕೆ ತಗಲುವ ವೆಚ್ಚವನ್ನು ಭರಿಸಲು ನಾವು ಸಿದ್ಧರಿದ್ದೆವು. ಆದರೆ, ತಂಡದ ನಿರ್ವಹಣಾ ಮಂಡಳಿ ಇದ್ಯಾವುದಕ್ಕೂ ಒಪ್ಪಿರಲಿಲ್ಲ. ಆಫ್ರಿಕಾ ಪ್ರವಾಸವನ್ನು ಗಂಭೀರವಾಗಿ ಪರಿಗಣಿಸಿದ್ದರೆ, ಮೊದಲ ಪಂದ್ಯದ ಸೋಲನ್ನು ತಡೆಯಬಹುದಾಗಿತ್ತು’ ಎಂದು ಬಿಸಿಸಿಐ ಹೇಳಿದೆ.
ಸಮಯದ ಕೊರತೆ: ಶ್ರೀಲಂಕಾ ವಿರುದ್ಧ ಟಿ20 ಸರಣಿಯ ಬಳಿಕ ಭಾರತ ತಂಡ ಡಿ.28ರಂದು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತು. 29ರಂದು ಕೇಪ್'ಟೌನ್'ಗೆ ಬಂದಿಳಿದ ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾದ ವಿರುದ್ಧ ಮೊದಲ ಟೆಸ್ಟ್'ಗೆ ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿತ್ತು. ಹೀಗಾಗಿ ಪೂರ್ವ ತಯಾರಿ ಮಾಡಿಕೊಳ್ಳುವುದರಿಂದ ಕೊಹ್ಲಿ ನೇತೃತ್ವದ ತಂಡ ಹಿಂದೆ ಬಿದ್ದಿದೆ. ಆಟಗಾರರು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಿತ್ತು. ಇದು ತಂಡದ ಪ್ರದರ್ಶನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು
ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಈ ಕುರಿತು ಪಂದ್ಯದ ಆರಂಭಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ನಾವು ಸಿದ್ಧರಾಗಿದ್ದೇವೆ ಎಂದು ಹೇಳಿದ್ದರು. ಪಂದ್ಯದ ಮೊದಲ ಇನ್ನಿಂಗ್ಸ್'ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ವಿಫಲರಾಗಿದ್ದ ಭಾರತ ತಂಡದ ಆಟಗಾರರು, 2ನೇ ಇನ್ನಿಂಗ್ಸ್'ನಲ್ಲಿ ಆಫ್ರಿಕಾಕ್ಕೆ ತಿರುಗೇಟು ನೀಡಿದ್ದರು. ಅದರಲ್ಲೂ ಭಾರತದ ವೇಗಿಗಳು ಕೇವಲ 130 ರನ್'ಗಳಿಗೆ ಆಫ್ರಿಕಾದ ದಾಂಡಿಗರನ್ನು ಕಟ್ಟಿ ಹಾಕಿದ್ದರು. ಗೆಲ್ಲಲು 208 ರನ್ ಗುರಿ ಪಡೆದ ಇದನ್ನು ಬೆನ್ನಟ್ಟಲು ವಿಫಲವಾಗಿತ್ತು. 72 ರನ್'ಗಳ ಹೀನಾಯ ಸೋಲು ಅನುಭವಿಸಿತ್ತು.