ಇಂದಿನಿಂದ ಇಂಡೋ-ಆಫ್ರಿಕಾ ಟಿ20 ಮೊದಲ ಫೈಟ್; ಟೀಂ ಇಂಡಿಯಾದ ಈ ಆಟಗಾರನ ಮೇಲಿದೆ ಎಲ್ಲರ ಚಿತ್ತ..!
ಒಂದು ವರ್ಷದ ನಂತರ ಭಾರತ ತಂಡಕ್ಕೆ ಮರಳಿರುವ ಸುರೇಶ್ ರೈನಾ ಮೇಲೆ ಎಲ್ಲರ ಕಣ್ಣಿದ್ದು, ಯುವ ಮಣಿಕಟ್ಟು ಸ್ಪಿನ್ನರ್'ಗಳಾದ ಕುಲ್ದೀಪ್ ಹಾಗೂ ಯಜುವೇಂದ್ರ ಚಾಹಲ್, ಮತ್ತೊಮ್ಮೆ ಹರಿಣಗಳ ಬೇಟೆಗೆ ಸಜ್ಜಾಗಿದ್ದಾರೆ. ರೈನಾ ಜತೆ ರಾಹುಲ್ ಹಾಗೂ ಉನಾದ್ಕತ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ವಾಂಡರರ್ಸ್(ಫೆ.18): ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಗೆಲುವಿನ ನಾಗಾಲೋಟ ಮುಂದುವರಿಸಿರುವ ಭಾರತ ಕ್ರಿಕೆಟ್ ತಂಡ, ಏಕದಿನ ಸರಣಿ ಗೆಲುವಿನ ಬಳಿಕ ಟಿ20 ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಇಂದಿನಿಂದ 3 ಪಂದ್ಯಗಳ ಸರಣಿ ಆರಂಭಗೊಳ್ಳಲಿದ್ದು, ಮೊದಲ ಟಿ20ಗೆ ಇಲ್ಲಿನ ವಾಂಡರರ್ಸ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಒಂದು ವರ್ಷದ ನಂತರ ಭಾರತ ತಂಡಕ್ಕೆ ಮರಳಿರುವ ಸುರೇಶ್ ರೈನಾ ಮೇಲೆ ಎಲ್ಲರ ಕಣ್ಣಿದ್ದು, ಯುವ ಮಣಿಕಟ್ಟು ಸ್ಪಿನ್ನರ್'ಗಳಾದ ಕುಲ್ದೀಪ್ ಹಾಗೂ ಯಜುವೇಂದ್ರ ಚಾಹಲ್, ಮತ್ತೊಮ್ಮೆ ಹರಿಣಗಳ ಬೇಟೆಗೆ ಸಜ್ಜಾಗಿದ್ದಾರೆ. ರೈನಾ ಜತೆ ರಾಹುಲ್ ಹಾಗೂ ಉನಾದ್ಕತ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ತಂಡದ ಸಂಯೋಜನೆ ಹೇಗಿರಲಿದೆ?:
ರೋಹಿತ್ ಶರ್ಮಾ ಸಹಜವಾಗಿಯೇ ಆರಂಭಿಕನಾಗಿ ತಂಡದಲ್ಲಿರಲಿದ್ದಾರೆ. ಧವನ್ ಉತ್ತಮ ಲಯದಲ್ಲಿದ್ದು, ರಾಹುಲ್ ಬೆಂಚ್ ಕಾಯಬೇಕಾಗಬಹುದು. ಕೊಹ್ಲಿ, ಧೋನಿ, ಪಾಂಡ್ಯ ಜತೆ ಮಧ್ಯಮ ಕ್ರಮಾಂಕದಲ್ಲಿ ರೈನಾ ಕೂಡಿಕೊಳ್ಳುವ ಸಾಧ್ಯತೆ ಹೆಚ್ಚು. ಬುಮ್ರಾ ಹಾಗೂ ಭುವನೇಶ್ವರ್ ಜತೆಗೆ ಉನಾದ್ಕತ್ ಸಹ ಆಡುವ ಹನ್ನೊಂದರಲ್ಲಿ ಸ್ಥಾನ ಗಿಟ್ಟಿಸುವ ನಿರೀಕ್ಷೆ ಇದೆ. ಕುಲ್ದೀಪ್ ಹಾಗೂ ಚಹಲ್ ಸಹಜವಾಗಿಯೇ ಹನ್ನೊಂದರ ಬಳಗದಲ್ಲಿ ಇರಲಿದ್ದಾರೆ. ಇದೇ ವೇಳೆ ದಕ್ಷಿಣ ಆಫ್ರಿಕಾ ತನ್ನ ದೇಸಿ ಟಿ20 ತಾರೆಯರನ್ನು ತಂಡಕ್ಕೆ ಸೇರಿಸಿಕೊಂಡಿದ್ದು, ಏಕದಿನ ಸರಣಿಯಲ್ಲಿ ಅನುಭವಿಸಿದ ಅವಮಾನಕ್ಕೆ ತಕ್ಕ ಉತ್ತರ ನೀಡುವ ತವಕದಲ್ಲಿದೆ.