ಟೀಂ ಇಂಡಿಯಾದ ಈ ಆಟಗಾರ ಹರಕೆಯ ಕುರಿ ಎಂದ ಗವಾಸ್ಕರ್
ಮೊದಲ ಟೆಸ್ಟ್'ನಲ್ಲಿ ಧವನ್ ನಿರೀಕ್ಷಿತ ಪ್ರದರ್ಶನ ತೋರಿರಲಿಲ್ಲ, ಹೀಗಾಗಿ ಎಡಗೈ ಆರಂಭಿಕ ಬ್ಯಾಟ್ಸ್'ಮನ್ ಅವರನ್ನು ಕೈಬಿಟ್ಟು ಕನ್ನಡಿಗ ಕೆ.ಎಲ್ ರಾಹುಲ್ ಅವರಿಗೆ ಮಣೆಹಾಕಲಾಗಿದೆ.
ಸೆಂಚೂರಿಯನ್(ಜ.13): ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಮಾಡಿದ ಆಯ್ಕೆಗೆ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಯ್ಕೆ ಸಮಿತಿ ಮೊದಲ ಟೆಸ್ಟ್'ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ಭುವನೇಶ್ವರ್ ಕುಮಾರ್ ಕೈಬಿಟ್ಟು ಇಶಾಂತ್ ಶರ್ಮಾಗೆ ಅವಕಾಶ ಕಲ್ಪಿಸಿದರೆ, ಧವನ್'ಗೆ ಕೋಕ್ ಕೊಟ್ಟು ಕೆ.ಎಲ್ ರಾಹುಲ್'ಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.
ಮೊದಲ ಟೆಸ್ಟ್'ನಲ್ಲಿ ಧವನ್ ನಿರೀಕ್ಷಿತ ಪ್ರದರ್ಶನ ತೋರಿರಲಿಲ್ಲ, ಹೀಗಾಗಿ ಎಡಗೈ ಆರಂಭಿಕ ಬ್ಯಾಟ್ಸ್'ಮನ್ ಅವರನ್ನು ಕೈಬಿಟ್ಟು ಕನ್ನಡಿಗ ಕೆ.ಎಲ್ ರಾಹುಲ್ ಅವರಿಗೆ ಮಣೆಹಾಕಲಾಗಿದೆ.
ಧವನ್ ಕೈಬಿಟ್ಟಿರುವುದಕ್ಕೆ ಕಿಡಿಕಾರಿರುವ ಗವಾಸ್ಕರ್, ನನಗನ್ನಿಸುತ್ತೆ ಧವನ್ ಹರಕೆಯ ಕುರಿಯಾಗಿದ್ದಾರೆ(ಬಲಿ ಕ ಬಕ್ರ) ಅವರ ತಲೆ ಮೇಲೆ ಯಾವಾಗಲೂ ಬಿಸಿಸಿಐ ತೂಗುಗತ್ತಿ ನೇತಾಡುತ್ತಲೇ ಇರುತ್ತದೆ. ಕೇವಲ ಒಂದು ಪಂದ್ಯದಲ್ಲಿ ಕೆಟ್ಟ ಪ್ರದರ್ಶನ ತೋರಿದ್ದಕ್ಕೆ ಅವರನ್ನು ಕೈಬಿಡಲಾಗಿದೆ ಎಂದು ತಂಡದ ಆಯ್ಕೆ ಕುರಿತಂತೆ ಅಸಮಧಾನ ಹೊರಹಾಕಿದ್ದಾರೆ.
ಇದೇ ವೇಳೆ ಭುವಿ ಕೈಬಿಟ್ಟು ಇಶಾಂತ್ ಶರ್ಮಾ ಅವರನ್ನು ಆಯ್ಕೆ ಮಾಡಿಕೊಂಡಿದ್ದು ಯಾಕೆ ಎಂದು ನನಗಂತೂ ಅರ್ಥವಾಗುತ್ತಿಲ್ಲ. ಒಂದು ವೇಳೆ ಇಶಾಂತ್ ಅವರನ್ನು ಆಡಿಸಲೇ ಬೇಕು ಎಂದಿದ್ದರೆ ಶಮಿ ಇಲ್ಲವೇ ಬುಮ್ರಾ ಬದಲಿಗೆ ಸ್ಥಾನ ಕಲ್ಪಿಸಬಹುದಿತ್ತು ಎಂದು ಸನ್ನಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.