ತ್ರಿವಿಧ ಇಲ್ಲವೇ ಪ್ರತ್ಯೇಕ ನಾಯಕತ್ವ ಭಾರತಕ್ಕೆ ಒಗ್ಗದು, ನನಗಿದರಲ್ಲಿ ನಂಬಿಕೆಯೂ ಇಲ್ಲ. ಮುಖ್ಯವಾಗಿ ತಂಡವೆಂದ ಮೇಲೆ ಅದಕ್ಕೆ ಒಬ್ಬನೇ ನಾಯಕನಿರಬೇಕು.

ಪುಣೆ(ಜ.13): ಕೆಲವೊಂದು ರಾಷ್ಟ್ರಗಳು ಮೂರೂ ಪ್ರಕಾರದ ಕ್ರಿಕೆಟ್‌'ಗೆ ಪ್ರತ್ಯೇಕ ನಾಯಕರುಗಳನ್ನು ನೇಮಿಸುವಂತೆ ಭಾರತವೂ ಇದೇ ಮಾರ್ಗದಲ್ಲಿ ನಡೆಯಲಾಗದು ಏಕೆಂದರೆ, ಭಾರತಕ್ಕೆ ಇದು ಹೊಂದಿಕೊಳ್ಳುವುದಿಲ್ಲ ಎಂದು ಭಾರತ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ತಿಳಿಸಿದ್ದಾರೆ.

ಇದೇ ಭಾನುವಾರದಿಂದ ಆರಂಭವಾಗುತ್ತಿರುವ ಇಂಗ್ಲೆಂಡ್ ವಿರುದ್ಧದ ಆರು ಸೀಮಿತ ಓವರ್‌'ಗಳ ಕ್ರಿಕೆಟ್ ಸರಣಿಗೂ ಮುಂಚೆ ಕಳೆದ ಬುಧವಾರ ನಾಯಕತ್ವಕ್ಕೆ ದಿಢೀರ್ ವಿದಾಯ ಘೋಷಿಸಿದ್ದ ಧೋನಿ, ಸುದ್ದಿಗಾರರೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ.

ತ್ರಿವಿಧ ಇಲ್ಲವೇ ಪ್ರತ್ಯೇಕ ನಾಯಕತ್ವ ಭಾರತಕ್ಕೆ ಒಗ್ಗದು, ನನಗಿದರಲ್ಲಿ ನಂಬಿಕೆಯೂ ಇಲ್ಲ. ಮುಖ್ಯವಾಗಿ ತಂಡವೆಂದ ಮೇಲೆ ಅದಕ್ಕೆ ಒಬ್ಬನೇ ನಾಯಕನಿರಬೇಕು. ನಾಯಕತ್ವ ತ್ಯಜಿಸಲು ನಾನು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೆ. ವಿರಾಟ್ ಆ ಜಾಗವನ್ನು ಸಮರ್ಥವಾಗಿ ತುಂಬಬಲ್ಲರು ಎಂಬುದನ್ನು ಮನಗಂಡ ಮೇಲೆಯೇ ನಾನು ನಾಯಕತ್ವದಿಂದ ನಿವೃತ್ತಿ ಪಡೆಯಲು ನಿರ್ಧರಿಸಿದ್ದು. ಇದು ಆತುರದ ಇಲ್ಲವೇ ವಿಷಾದದ ನಿರ್ಧಾರವೇನೂ ಅಲ್ಲ ಎಂಬುದನ್ನು ಮತ್ತೊಮ್ಮೆ ಖಚಿತಪಡಿಸುತ್ತೇನೆ ಎಂದರು. ಪ್ರಸ್ತುತ ತಂಡವು ಮುಂದಿನ 10-12 ವರ್ಷಗಳ ಕಾಲ ಮೂರೂ ವಿಧದ ಕ್ರಿಕೆಟ್‌'ನಲ್ಲಿ ಶ್ರೇಷ್ಠ ಪ್ರದರ್ಶನ ತೋರುವಷ್ಟು ಶಕ್ತವಾಗಿದೆ’’ ಎಂದು ಧೋನಿ ತಿಳಿಸಿದರು.