ಸೌತ್ ಆಫ್ರಿಕಾ ಮಣಿಸಿ ಟ್ರೋಫಿ ಗೆಲ್ಲುವ ಭಾರತದ ಕನಸು ನನಸಾಗಲಿಲ್ಲ. 3ನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಅನುಭವಿಸಿದೆ. 

ಬೆಂಗಳೂರು(ಸೆ.22): ಸೌತ್ ಆಫ್ರಿಕಾ ವಿರುದ್ದ ತವರಿನಲ್ಲಿ ಇದೇ ಮೊದಲ ಬಾರಿಗೆ ಟಿ20 ಸರಣಿ ಗೆಲ್ಲುವ ಸುವರ್ಣ ಅವಕಾಶವನ್ನು ಟೀಂ ಇಂಡಿಯಾ ಕೈಚೆಲ್ಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿದೆ. ಹೀಗಾಗಿ 1-1 ಅಂತರದಲ್ಲಿ ಸರಣಿ ಸಮಬಲಗೊಂಡಿತು. ಇಷ್ಟೇ ಅಲ್ಲ ಉಭಯ ತಂಡ ಟ್ರೋಫಿ ಹಂಚಿಕೊಂಡಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರಿನ ಬ್ಯಾಟಿಂಗ್ ಫೇವರಿಟ್ ಪಿಚ್‌ನಲ್ಲಿ ದಿಟ್ಟ ಹೋರಾಟ ನೀಡುವಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಪಿಚ್ ಲಾಭ ಪಡೆದ ಸೌತ್ ಆಫ್ರಿಗಾ ಬೌಲರ್ ಭಾರತವನ್ನು 134 ರನ್‌ಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಸೌತ್ ಆಫ್ರಿಕಾ 135 ರನ್ ಸುಲಭ ಗುರಿ ಪಡೆಯಿತು.

ಗುರಿ ಚೇಸ್ ಮಾಡಲು ಕಣಕ್ಕಿಳಿದ ಸೌತ್ ಆಫ್ರಿಕಾ ತಂಡ ಯಾವ ಹಂತದಲ್ಲೂ ಆತಂಕ ಎದುರಿಸಲಿಲ್ಲ. ರೀಝ್ ಹೆಂಡ್ರಿಕ್ಸ್ ಹಾಗೂ ನಾಯಕ ಕ್ವಿಂಟನ್ ಡಿಕಾಕ್ ಅತ್ಯುತ್ತಮ ಆರಂಭ ಹರಿಗಣಗಳ ಆತ್ಮವಿಶ್ವಾಸ ಹೆಚ್ಚಿಸಿತು. ಈ ಜೋಡಿ ಮೊದಲ ವಿಕೆಟ್‌ಗೆ 76 ರನ್ ಜೊತೆಯಾಟ ನೀಡಿತು.

ಹೆಂಡ್ರಿಕ್ಸ್ 28 ರನ್ ಸಿಡಿಸಿ ಔಟಾದರು. ಅಷ್ಟರಲ್ಲೇ ಸೌತ್ ಆಫ್ರಿಕಾ ಗೆಲುವಿನತ್ತ ಹೆಜ್ಜೆ ಇಟ್ಟಿತು. ತೆಂಬಾ ಬವುಮಾ ಜೊತೆ ಸೇರಿದ ಡಿಕಾಕ್ ಆಕರ್ಷಕ ಹಾಫ್ ಸೆಂಚುರಿ ಸಿಡಿಸಿದರು. ಡಿಕಾಕ್ ಅಜೇಯ 79 ರನ್ ಹಾಗೂ ಬವುಮಾ ಸಿಡಿಸಿದ 29 ರನ್ ನೆರವಿನಿಂದ ಸೌತ್ ಆಫ್ರಿಕಾ 16. 5 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. 9 ವಿಕೆಟ್ ಭರ್ಜರಿ ಗೆಲುವು ಸಾಧಿಸಿದ ಸೌತ್ ಆಫ್ರಿಕಾ 1-1 ಅಂತರದಲ್ಲಿ ಸರಣಿ ಸಮಬಲ ಮಾಡಿಕೊಂಡು ನಿಟ್ಟುಸಿರು ಬಿಟ್ಟಿತು.