ರಾಜ್ಯ ಕ್ರಿಕೆಟ್ ಸಂಸ್ಥೆಗಳ ಚುನಾವಣೆಗೆ ತಾತ್ಕಾಲಿಕ ಬ್ರೇಕ್
ಬಿಸಿಸಿಐ ಕಾನೂನು ಹೋರಾಟ ಸದ್ಯಕ್ಕೆ ಮುಗಿಯೋ ಲಕ್ಷಣಗಳು ಕಾಣುತ್ತಿಲ್ಲ. ಸದ್ದಿಲ್ಲದೆ ರಾಜ್ಯ ಚುನಾವಣೆ ನಡೆಸಲು ಹೊರಟ್ಟಿದ್ದ ಬಿಸಿಸಿಐಗೆ ಸುಪ್ರೀಂ ಕೋರ್ಟ್ ಛಾಟಿ ಬೀಸಿದೆ. ಸದ್ಯಕ್ಕೆ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆ ನಡೆಸದಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಅಷ್ಟಕ್ಕೂ ಸುಪ್ರೀಂ ಕೋರ್ಟ್ ಸೂಚನೆಯಲ್ಲಿ ಏನಿದೆ? ಇಲ್ಲಿದೆ.
ನವದೆಹಲಿ(ಜು.06): ರಾಜ್ಯ ಕ್ರಿಕೆಟ್ ಸಂಸ್ಥೆಗಳ ಚುನಾವಣೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಈ ಮೂಲಕ ಲೋಧ ಶಿಫಾರಸ್ಸು ಅನ್ವಯ ಚುನಾಣೆಗೆ ಸಜ್ಜಾಗಬೇಕಿದ್ದ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಸದ್ಯಕ್ಕೆ ರಿಲೀಫ್ ಸಿಕ್ಕಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸಂವಿಧಾನ ಕುರಿತ ತೀರ್ಪು ಅಂತಿಮಗೊಳ್ಳುವವರೆಗೂ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಚುನಾವಣೆ ನಡೆಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಸೂಚಿಸಿದೆ. ಜತೆಗೆ ಬಿಸಿಸಿಐ ಕುರಿತ ತೀರ್ಪನ್ನು 2 ವಾರಗಳವರೆಗೆ ಮುಂದೂಡಿದೆ.
ಮುಖ್ಯ ನ್ಯಾ.ದೀಪಕ್ ಮಿಶ್ರಾ ಹಾಗೂ ನ್ಯಾ. ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ ಅವರನ್ನೊಳಗೊಂಡ ತ್ರಿಸದಸ್ಯಪೀಠ, ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಆಡಳಿತಾಧಿಕಾರಿಗಳ ನೇಮಕ ಕುರಿತಂತೆ ಯಾವುದೇ ತೀರ್ಪು ನೀಡಬಾರದು ಎಂದು ಆಯಾ ರಾಜ್ಯ ಹೈಕೋರ್ಟ್ಗಳಿಗೆ ಸೂಚಿಸಿದೆ. ನ್ಯಾ.ಲೋಧಾ ಶಿಫಾರಸ್ಸುಗಳಾದ ಒಂದು ರಾಜ್ಯ, ಒಂದು ಮತ ಮತ್ತು ಕೂಲಿಂಗ್ ಆಫ್ ಅವಧಿ ನಿಯಮಗಳಲ್ಲಿ ಬದಲಾವಣೆ ತರುವುದಕ್ಕೆ ಯೋಚಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.