ರಣಜಿ ಟ್ರೋಫಿ : ರೈಲ್ವೇಸ್ ದಾಳಿಗೆ ಹಳಿ ತಪ್ಪಿದ ಕರ್ನಾಟಕ!
ಶಿವಮೊಗ್ಗದ ಬೌಲಿಂಗ್ ಸ್ನೇಹಿ ಪಿಚ್ನಲ್ಲಿ ರೈಲ್ವೇಸ್ ಬೌಲರ್ಗಳ ಆರ್ಭಟಿಸಿದ್ದಾರೆ. ವಿನಯ್ ಕುಮಾರ್ ಅನುಪಸ್ಥಿತಿಯಲ್ಲಿ ತಂಡ ಮುನ್ನಡೆಸುತ್ತಿರುವ ಮನೀಶ್ ಪಾಂಡೆಗೆ ತೀವ್ರ ಹಿನ್ನಡೆ. ಇಲ್ಲಿದೆ ಮೊದಲ ದಿನದಾಟದ ಹೈಲೈಟ್ಸ್.
ಶಿವಮೊಗ್ಗ(ಡಿ.23): ಕ್ವಾರ್ಟರ್ ಫೈನಲ್ ಆಸೆ ಜೀವಂತವಾಗಿರಿಸಿಕೊಳ್ಳಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಕರ್ನಾಟಕ ಆರಂಭಿಕ ಆಘಾತ ಎದುರಿಸಿದೆ. ಇಲ್ಲಿನ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಶನಿವಾರ ರೈಲ್ವೇಸ್ ವಿರುದ್ಧ ಆರಂಭಗೊಂಡ ‘ಎ’ ಗುಂಪಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಷ್ಟಕರ್ನಾಟಕ, ಮೊದಲ ದಿನದಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 208 ರನ್ ಕಲೆಹಾಕಿತು. ರೈಲ್ವೇಸ್ ಬೌಲರ್ಗಳ ಬಿಗುವಾದ ದಾಳಿಗೆ ಬೆಚ್ಚಿದ ರಾಜ್ಯ ತಂಡ ಮೊದಲ ಇನ್ನಿಂಗ್ಸ್ನಲ್ಲಿ ಸಾಧಾರಣ ಮೊತ್ತಕ್ಕೆ ಕುಸಿಯುವ ಹೊಸ್ತಿಲಲ್ಲಿದೆ.
ಇದನ್ನೂ ಓದಿ: 160 ಕೋಟಿ ಬಾಕಿ- ಬಿಸಿಸಿಐ ಕೈತಪ್ಪುತ್ತಾ 2023ರ ವಿಶ್ವಕಪ್ ಆತಿಥ್ಯ?
ಹಸಿರು ಪಿಚ್ ಮೇಲೆ ಇಬ್ಬನಿ ಬಿದ್ದಿದ್ದ ಕಾರಣ, ರೈಲ್ವೇಸ್ ಟಾಸ್ ಗೆಲ್ಲುತ್ತಿದ್ದಂತೆ ಎರಡನೇ ಆಲೋಚನೆಯೇ ಇಲ್ಲದೆ ಫೀಲ್ಡಿಂಗ್ ಆಯ್ದುಕೊಂಡಿತು. ತಂಡದ ನಿರ್ಧಾರ ಸರಿಯಾಗಿಯೇ ಇತ್ತು. ಬ್ಯಾಟಿಂಗ್ ಲಯದ ಸಮಸ್ಯೆ ಎದುರಿಸುತ್ತಿರುವ ಆರ್.ಸಮಥ್ರ್ (03) ಮೊದಲಿಗರಾಗಿ ಪೆವಿಲಿಯನ್ ಸೇರಿಕೊಂಡರು. ಯುವ ಆಟಗಾರ ದೇವದತ್ ಪಡಿಕ್ಕಲ್ (01), ವಿನಯ್ ಕುಮಾರ್ ಗಾಯಗೊಂಡಿರುವ ಕಾರಣ ತಂಡ ಮುನ್ನಡೆಸುವ ಜವಾಬ್ದಾರಿ ಹೊತ್ತ ಮನೀಶ್ ಪಾಂಡೆ (04) ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. 17 ರನ್ಗೆ ರಾಜ್ಯ ತಂಡ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಇದನ್ನೂ ಓದಿ: ಪಾಕಿಸ್ತಾನ ಕ್ರಿಕೆಟಿಗರನ್ನು ಐಪಿಎಲ್ಗೆ ಪರಿಗಣಿಸಲು ಪಿಸಿಬಿ ಹರಸಾಹಸ!
ನಿಶ್ಚಲ್-ಸಿದ್ಧಾಥ್ರ್ ಹೋರಾಟ: 4ನೇ ವಿಕೆಟ್ಗೆ ಆರಂಭಿಕ ಡಿ.ನಿಶ್ಚಲ್ ಜತೆ ಕ್ರೀಸ್ ಹಂಚಿಕೊಂಡ ಕೆ.ವಿ.ಸಿದ್ಧಾಥ್ರ್ ಹೋರಾಟ ಪ್ರದರ್ಶಿಸಿದರು. ರೈಲ್ವೇಸ್ ಬೌಲರ್ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಇಬ್ಬರು, ತಾಳ್ಮೆಯಿಂದ ರನ್ ಕಲೆಹಾಕಿದರು. ಇಬ್ಬರೂ ಆಕರ್ಷಕ ಅರ್ಧಶತಕ ಬಾರಿಸಿ ಆತ್ಮವಿಶ್ವಾಸದೊಂದಿಗೆ ಬ್ಯಾಟಿಂಗ್ ನಡೆಸಿದರು. 49 ಓವರ್ ಬ್ಯಾಟ್ ಮಾಡಿದ ಈ ಇಬ್ಬರು, 112 ರನ್ ಜೊತೆಯಾಟವಾಡಿ ತಂಡವನ್ನು ಉತ್ತಮ ಸ್ಥಿತಿ ತಲುಪಿಸಿದರು.
ಚಹಾ ವಿರಾಮಕ್ಕೆ ಕೆಲವೇ ಓವರ್ಗಳು ಬಾಕಿ ಇದ್ದಾಗ, ನಿಶ್ಚಲ್ (52 ರನ್, 172 ಎಸೆತ, 4 ಬೌಂಡರಿ) ವಿಕೆಟ್ ಪತನಗೊಂಡಿತು. ದಿನದಾಟದ 3ನೇ ಅವಧಿಯಲ್ಲಿ ರಾಜ್ಯ ತಂಡ ಕುಸಿತ ಕಂಡಿತು. ಸಿದ್ಧಾಥ್ರ್ (69 ರನ್, 185 ಎಸೆತ, 6 ಬೌಂಡರಿ, 2 ಸಿಕ್ಸರ್) ಔಟಾದ ಬೆನ್ನಲ್ಲೇ ಆಲ್ರೌಂಡರ್ಗಳಾದ ಶ್ರೇಯಸ್ ಗೋಪಾಲ್(20) ಹಾಗೂ ಕೆ.ಗೌತಮ್ (0) ಸಹ ವಿಕೆಟ್ ಕಳೆದುಕೊಂಡರು. 159ಕ್ಕೆ 4 ವಿಕೆಟ್ಗಳಿಂದ ದಿಢೀರನೆ ತಂಡದ ಸ್ಕೋರ್ 159ಕ್ಕೆ 7 ವಿಕೆಟ್ಗೆ ಕುಸಿಯಿತು. ಅಭಿಮನ್ಯು ಮಿಥುನ್ 16 ರನ್ಗಳ ಕೊಡುಗೆ ನೀಡಿದರು. 49 ರನ್ಗೆ 6 ವಿಕೆಟ್ ಕಳೆದುಕೊಂಡ ಕರ್ನಾಟಕ, ವಿಕೆಟ್ ಕೀಪರ್ ಶರತ್ ಶ್ರೀನಿವಾಸ್ (28 ರನ್, 60 ಎಸೆತ) ಹಾಗೂ ವೇಗಿ ಪ್ರಸಿದ್್ಧ ಕೃಷ್ಣ (2 ರನ್, 21 ಎಸೆತ) ಹೋರಾಟದ ನೆರವಿನಿಂದ ಮೊದಲ ದಿನವೇ ಆಲೌಟ್ ಆಗುವುದರಿಂದ ಪಾರಾಯಿತು. ಅಮಿತ್ ಮಿಶ್ರಾ, ಅವಿನಾಶ್ ಯಾದವ್ ತಲಾ 3 ವಿಕೆಟ್ ಕಿತ್ತರೆ, ಕರಣ್ ಠಾಕೂರ್ 2 ವಿಕೆಟ್ ಕಬಳಿಸಿದರು.
ಇದನ್ನೂ ಓದಿ: ತಂಡದ ಆಯ್ಕೆ ಎಡವಟ್ಟು -ಕೊಹ್ಲಿ ,ಶಾಸ್ತ್ರಿಗೆ ಖಡಕ್ ಎಚ್ಚರಿಕೆ!
ರೈಲ್ವೇಸ್ ತಂಡವನ್ನು ಬೇಗನೆ ಕಟ್ಟಿಹಾಕಿ ಮೊದಲ ಇನ್ನಿಂಗ್ಸ್ನಲ್ಲಿ ಮುನ್ನಡೆ ಪಡೆಯುವುದು ಕರ್ನಾಟಕದ ಮೊದಲ ಗುರಿಯಾದರೂ, ಗೆಲುವಿನ ಮೇಲೆ ಕಣ್ಣಿಟ್ಟಿದೆ.
ಸ್ಕೋರ್: ಕರ್ನಾಟಕ (ಮೊದಲ ದಿನದಂತ್ಯಕ್ಕೆ) 208/9 (ಸಿದ್ಧಾಥ್ರ್ 69, ನಿಶ್ಚಲ್ 52, ಅವಿನಾಶ್ 3-43)