ಬೆಳಗಾವಿಯಲ್ಲಿ ನಡೆಯುತ್ತಿರುವ ಕರ್ನಾಟಕ ಹಾಗೂ ಮುಂಬೈ ನಡುವಿನ ರಣಜಿ ಪಂದ್ಯ ಮೊದಲ ದಿನವೇ ಕುತೂಹಲ ಕೆರಳಿಸಿದೆ. ಮೊದಲ ದಿನದಾಟದಲ್ಲಿ ಕನ್ನಡಿಗರ ಹೋರಾಟ  ಹೇಗಿತ್ತು? ಇಲ್ಲಿದೆ ಹೈಲೈಟ್ಸ್. 

ಬೆಳಗಾವಿ(ನ.20): ಮುಂಬೈ ವಿರುದ್ಧದ ರಣಜಿ ಪಂದ್ಯದ ಮೊದಲ ದಿನದಲ್ಲಿ ಕರ್ನಾಟಕ ದಿಟ್ಟ ಹೋರಾಟ ನೀಡಿದೆ. ಕೆವಿ ಸಿದ್ದಾರ್ಥ್ ಭರ್ಜರಿ ಶತಕ ಹಾಗೂ ಕೊನೈನ ಅಬ್ಬಾಸ್ ಅರ್ಧಶತಕದ ನೆರವಿನಿಂದ ಕರ್ನಾಟಕ ಮೊದಲ ದಿನದಲ್ಲಿ 4 ವಿಕೆಟ್ ನಷ್ಟಕ್ಕೆ 211 ರನ್ ಸಿಡಿಸಿದೆ.

Add Asianetnews Kannada as a Preferred SourcegooglePreferred

ಬೆಳಗಾವಿಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಕರ್ನಾಟಕ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಶಿಶಿರ್ ಭವಾನೆ ಕೇವಲ 5 ರನ್ ಸಿಡಿಸಿ ಔಟಾದರು. ಇನ್ನು ಡಿ ನಿಶ್ಚಲ್ 27 ರನ್ ಸಿಡಿಸಿ ಔಟಾದರು.

59 ರನ್‌ಗೆ ಎರಡು ವಿಕೆಟ್ ಕಳೆದುಕೊಂಡ ಕರ್ನಾಟಕಕ್ಕೆ ಕೊನೈನ ಅಬ್ಬಾಸ್, ಕೆವಿ ಸಿದ್ಧಾರ್ಥ್ ಜೊತೆಯಾಟದಿಂದ ಚೇತರಿಸಿಕೊಂಡಿತು. ಅತ್ಯುತ್ತಮ ಹೋರಾಟ ನೀಡಿದ ಕೆವಿ ಸಿದ್ದಾರ್ಥ್ ಆಕರ್ಷಕ ಶತಕ ಸಿಡಿಸಿ ಮಿಂಚಿದರು. 

ಸಿದ್ದಾರ್ಥ್‌ಗೆ ಉತ್ತಮ ಸಾಥ್ ನೀಡಿದ ಅಬ್ಬಾಸ್ 64 ರನ್ ಸಿಡಿಸಿ ಔಟಾದರು. ಸ್ಟುವರ್ಟ್ ಬಿನ್ನಿ ಕೇವಲ 3 ರನ್ ಸಿಡಿಸಿ ಪೆವಿಲಿಯನ್ ಸೇರಿದರು. ಆದರೆ ಸಿದ್ದಾರ್ಥ್ ಜೊತೆ ಬ್ಯಾಟಿಂಗ್ ಮುಂದುವರಿಸಿದ ಶ್ರೇಯಸ್ ಗೋಪಾಲ್ ತಂಡಕ್ಕೆ ಆಸರೆಯಾಗಿದ್ದಾರೆ. 

ಮಂದ ಬೆಳಕಿನ ಕಾರಣ 2 ಓವರ್ ಮೊದಲೇ ಆಟ ನಿಲ್ಲಿಸಲಾಯಿತು. ದಿನದಾಟದ ಅಂತ್ಯದಲ್ಲಿ ಕರ್ನಾಟಕ 4 ವಿಕೆಟ್ ನಷ್ಟಕ್ಕೆ 263 ರನ್ ಸಿಡಿಸಿದೆ. ಸಿದ್ದಾರ್ಥ್ ಅಜೇಯ 104 ಹಾಗೂ ಶ್ರೇಯಸ್ ಗೋಪಾಲ್ ಅಜೇಯ 47 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಮುಂಬೈ ಪರ ಶಿವಂ ದುಬೆ 4 ವಿಕೆಟ್ ಕಬಳಿಸಿ ಮಿಂಚಿದರು.