Asianet Suvarna News Asianet Suvarna News

ದಬಾಂಗ್‌ ಡೆಲ್ಲಿ ವಿರುದ್ಧದ ಗೆಲುವನ್ನು ಅಪ್ಪುವಿಗೆ ಅರ್ಪಿಸಿದ ಬೆಂಗಳೂರು ಬುಲ್ಸ್‌!

ಪ್ರೋ ಕಬಡ್ಡಿ ಲೀಗ್‌ನಲ್ಲಿ ಶನಿವಾರದ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡ ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿ ವಿರುದ್ಧ ಗೆಲುವು ಕಂಡಿತು. ಈ ಗೆಲುವು ಹಾಗೂ ಇಡೀ ಪಂದ್ಯವನ್ನು ಬೆಂಗಳೂರು ಬುಲ್ಸ್‌ ತಂಡ ಪುನೀತ್‌ ರಾಜ್‌ಕುಮಾರ್‌ಗೆ ಅರ್ಪಣೆ ಮಾಡುವ ಮೂಲಕ ಅವರ ಮೊದಲ ಪುಣ್ಯತಿಥಿಯನ್ನು ಅಭಿಮಾನಿಗಳಿಗೆ ಸ್ಮರಣೀಯ ಮಾಡಿಸಿದೆ.
 

Pro Kabaddi Bengaluru Bulls dedicate Match against Dabang Delhi KC to Puneet Rajkumar san
Author
First Published Oct 29, 2022, 9:56 PM IST

ಪುಣೆ (ಅ. 29): ತನ್ನ ಐದನೇ ಗೆಲುವಿನೊಂದಿಗೆ ಮಾಜಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ತಂಡ 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಇದೇ ಮೊದಲ ಬಾರಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಪಂದ್ಯಕ್ಕೂ ಮುನ್ನ ಬೆಂಗಳೂರು ಫ್ರಾಂಚೈಸಿ ದಿನದ ಪಂದ್ಯವನ್ನು ಕರ್ನಾಟಕ ರತ್ನ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಅರ್ಪಿಸುವುದಾಗಿ ಹೇಳಿತ್ತು. ಅದರಂತೆ ಗೆಲುವಿನ ಹಠ ತೊಟ್ಟೇ ಆಟವಾಡಿದ ಬೆಂಗಳೂರು ಬುಲ್ಸ್‌ 4 ಅಂಕಗಳ ಅಂತರದಲ್ಲಿ ಬಲಿಷ್ಠ ದಬಾಂಗ್‌ ದೆಹಲಿಯನ್ನು ಮಣ್ಣು ಮುಕ್ಕಿಸಿತು. ರೋಚಕ ಕ್ಷಣಗಳಿಗೆ ಸಾಕ್ಷಿಯಾದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ದಬಾಂಗ್‌ ಡೆಲ್ಲಿ ತಂಡವನ್ನು 47-43 ಅಂತರದಲ್ಲಿ ಮಣಿಸುವ ಮೂಲಕ ಜಯದ ಹೆಜ್ಜೆಯನ್ನು ಮುಂದುವರಿಸಿದೆ. ದಿನದ ಇನ್ನೊಂದು ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ತಂಡ 30-19 ಅಂಕಗಳಿಂದ ತೆಲುಗು ಟೈಟಾನ್ಸ್‌ ತಂಡವನ್ನು ಸೋಲಿಸಿತು. ಲೀಗ್‌ನಲ್ಲಿ 5ನೇ ಗೆಲುವಿನೊಂದಿಗೆ ಬೆಂಗಳೂರು ಬುಲ್ಸ್‌ 29 ಅಂಕ ಸಂಪಾದಿಸಿ ಅಗ್ರಸ್ಥಾನಕ್ಕೇರಿದ್ದರೆ, 28 ಅಂಕ ಹೊಂದಿರುವ ದಬಾಂಗ್‌ ಡೆಲ್ಲಿ 2ನೇ ಸ್ಥಾನದಲ್ಲಿದೆ. ಇನ್ನು ಗುಜರಾತ್‌ ಜೈಂಟ್ಸ್‌ ತಂಡ 9ನೇ ಸ್ಥಾನದಲ್ಲಿದ್ದರೆ, ತೆಲುಗು ಟೈಟಾನ್ಸ್‌ ತಂಡ 6ನೇ ಸೋಲಿನೊಂದಿಗೆ 12 ತಂಡಗಳ ಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿ ಮುಂದುವರಿದಿದೆ.


ಕೊನೆಯ ಎರಡು ನಿಮಿಷಗಳ ಆಟದಲ್ಲಿ ಬೆಂಗಳೂರು ಬುಲ್ಸ್‌ ಪಂದ್ಯದ ಗತಿಯನ್ನೇ ಬದಲಾಯಿಸಿತು. ಭರತ್‌ ಡಬಲ್‌ ಸೂಪರ್‌ ಟೆನ್‌ (20) ನೆರವಿನಿಂದ ಬೆಂಗಳೂರು ಬಲಿಷ್ಠ ಡೆಲ್ಲಿಗೆ ಅಚ್ಚರಿಯ ಆಘಾತ ನೀಡಿತು. ಟ್ಯಾಕಲ್‌ನಲ್ಲಿ ಸೌರಭ್‌ ನಂದಾಲ್‌ 6 ಅಂಕಗಳನ್ನು ಗಳಿಸಿ ಜಯದಲ್ಲಿ ಗಮನಾರ್ಹ ಪಾತ್ರ ನಿಭಾಯಿಸಿದರು. 2 ನಿಮಿಷಗಳು ಬಾಕಿ ಇರುವಾಗ ದಬಾಂಗ್‌ ಡೆಲ್ಲಿ ಬೆಂಗಳೂರು ಬುಲ್ಸ್‌ ತಂಡವನ್ನು ಆಲೌಟ್‌ ಮಾಡಿ ಗೆಲ್ಲುವ ಲಕ್ಷಣ ತೋರಿತ್ತು. ಆದರೆ ಬೆಂಗಳೂರು ಬುಲ್ಸ್‌ ನಂತರದ ಒಂದು ನಿಮಿಷದಲ್ಲಿ ದಬಾಂಗ್‌ ಡೆಲ್ಲಿ ತಂಡವನ್ನು ಆಲೌಟ್‌ ಮಾಡಿ ಮತ್ತೆ ಚೇತರಿಸದಂತೆ ಮಾಡಿತು. ದಬಾಂಗ್‌ ಡೆಲ್ಲಿ ತಂಡದ ನಾಯಕ ನವೀನ್‌ ಕುಮಾರ್‌ 15 ಹಾಗೂ ಅಶು ಮಲಿಕ್‌ 15 ಅಂಕಗಳನ್ನು ಗಳಿಸಿದರೂ ಸೌರಭ್‌ ಅವರ ಭದ್ರ ಹಿಡಿತ ಡೆಲ್ಲಿಯ ಜಯವನ್ನು ಕಸಿದುಕೊಳ್ಳುವಂತೆ ಮಾಡಿತು. 

ಪ್ರಥಮಾರ್ಧದಲ್ಲಿ ಬೆಂಗಳೂರು ಮುನ್ನಡೆ: ಬಲಿಷ್ಠ ದಬಾಂಗ್‌ ಡೆಲ್ಲಿ ಕೆಸಿ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ ಬೆಂಗಳೂರು ಬುಲ್ಸ್‌ 27-18 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು. ಭರತ್‌ (9), ನವೀನ್‌ (5) ಮತ್ತು ವಿಕಾಸ್‌ ಕಂಡೋಲ (3) ರೈಡಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿ ತಂಡದ ಮುನ್ನಡೆಗೆ ನೆರವಾದರು. ಟ್ಯಾಕಲ್‌ನಲ್ಲಿ ಸೌರಭ್‌ ನಂದಲ್‌ 2 ಅಂಕಗಳನ್ನು ಗಳಿಸಿದರು.  ದಬಾಂಗ್‌ ಡೆಲ್ಲಿ ತಂಡದ ನಾಯಕ ನವೀನ್‌ ಕುಮಾರ್‌ ಅವರು ತಂಡದ ಪರ ಉತ್ತಮ ರೈಡಿಂಗ್‌ ಪ್ರದರ್ಶಿಸಿದರೂ ಬೆಂಗಳೂರಿನ ಶಕ್ತಿಗೆ ಅದು ಸರಿಹೊಂದಲಿಲ್ಲ. ಇದುವರೆಗೂ ಸತತ ಎರಡು ಸೋಲಿನಿಂದ ಕಂಗೆಟ್ಟಿರುವ ದಬಾಂಗ್‌ ಡೆಲ್ಲಿ ತಂಡಕ್ಕೆ ಇಲ್ಲಿ ಜಯದ ಅನಿವಾರ್ಯತೆ ಇದೆ.

Pro Kabaddi: ಮತ್ತೊಮ್ಮೆ ಮುಗ್ಗರಿಸಿದ ಬೆಂಗಳೂರು ಬುಲ್ಸ್‌!

ತೆಲುಗು ವಿರುದ್ಧ ಅಬ್ಬರಿಸಿದ ಗುಜರಾತ್‌ ರೈಡರ್ಸ್‌: ದಿನದ ಇನ್ನೊಂದು ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ತಂಡದ ರೈಡರ್‌ಗಳಾದ ರಾಕೇಶ್‌ ಎಸ್‌, ಸೌರವ್‌ ಗುಲಿಯಾ ಹಾಗೂ ಪ್ರತೀಕ್‌ ದಹಿಯಾ ಅವರ ತಲಾ 6 ಅಕಗಳ ನಿರ್ವಹಣೆಯ ನೆರವಿನಿಂದ ಗುಜರಾತ್‌ ಜೈಂಟ್ಸ್‌ 30-19 ಅಂಕಗಳಿಂದ ತೆಲುಗು ಟೈಟಾನ್ಸ್‌ ತಂಡವನ್ನು ಸೋಲಿಸಿತು.  ತೆಲುಗು ಪರವಾಗಿ ಅಂಕಿತ್‌ ಮಾತ್ರವೇ ಗಮನಸೆಳೆಯುವಂಥ ಆಟವಾಡಿದರು.

ಕಂಬಳವಲ್ಲ.. ಕಬಡ್ಡಿ ಕೋರ್ಟ್‌ನಲ್ಲಿ ಕಾಂತಾರ ಟೀಮ್‌, ಬುಲ್ಸ್‌ಗೆ ಬೆಂಬಲಿಸಿದ ರಿಷಬ್ ಶೆಟ್ಟಿ!

ಗೆಲುವನ್ನು ಪುನೀತ್‌ಗೆ ಅರ್ಪಿಸಿದ ಬುಲ್ಸ್‌: ಪಂದ್ಯಕ್ಕೂ ಮುನ್ನ ತನ್ನ ಹ್ಯಾಂಡಲ್‌ನಿಂದ ಟ್ವೀಟ್‌ ಮಾಡಿದ್ದ ಬೆಂಗಳೂರು ಬುಲ್ಸ್, 'ಆಡಿಸಿಯೇ ನೋಡು, ಬೀಳಿಸಿಯೆ ನೋಡು, ಎಂದು ಸೋಲದು, ಸೋತು ತಲೆಯ ಬಾಗದು' ಎನ್ನುವ ಹಾಡನ್ನು ಬಳಸಿ, 'ನಮ್ಮ ಪ್ರೀತಿಯ ಸೂಪರ್‌ಸ್ಟಾರ್, ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅಣ್ಣನ ನೆನಪಿಗಾಗಿ ನಾವು ಇಂದು ದಬಾಂಗ್ ದೆಹಲಿ ಕೆಸಿ ವಿರುದ್ಧದ ನಮ್ಮ ಪಂದ್ಯವನ್ನು ಅವರಿಗೆ ಅರ್ಪಿಸುತ್ತೇವೆ. ಅಪ್ಪು ಅಜರಾಮರ' ಎಂದು ಬರೆದುಕೊಂಡಿತ್ತು.

 

Follow Us:
Download App:
  • android
  • ios