ಪ್ಯಾರಾಲಿಂಪಿಕ್ಸ್ ಪದಕ ವಿಜೇತರಿಗೆ ಖೇಲ್ ರತ್ನ : ಗೋಯಲ್
ನವದೆಹಲಿ(ಸೆ.19): ಪ್ಯಾರಾಲಿಂಪಿಕ್ಸ್ ಪದಕ ವಿಜೇತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಪದಕ ಗೆದ್ದ ಎಲ್ಲರಿಗೂ ಮುಂದಿನ ವರ್ಷ ಖೇಲ್ ರತ್ನ ಪ್ರಶಸ್ತಿ ನೀಡಲಾಗುವುದು ಎಂದು ಕ್ರೀಡಾ ಸಚಿವ ವಿಜಯ್ ಗೋಯಲ್ ಘೋಷಿಸಿದ್ದಾರೆ.
ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಒಟ್ಟು 4 ಪದಕಗಳ ಸಿಕ್ಕಿವೆ. ಅದರಲ್ಲಿ ಎರಡು ಬಂಗಾರ, ಒಂದು ಬೆಳ್ಳಿ, ಒಂದು ಕಂಚು ದೊರೆತಿದ್ದು, ನಾಲ್ವರಿಗೂ ಮುಂದಿನ ವರ್ಷ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಅಂತ ತಿಳಿಸಿದ್ದಾರೆ.
ಪ್ಯಾರಾಲಿಂಪಿಕ್ಸ್'ನಲ್ಲಿ ಹೈಜಂಪ್'ನಲ್ಲಿ ಭಾರತದ ಮರಿಯಪ್ಪನ್ ತಂಗವೇಲು(ಚಿನ್ನ), ವರುಣ್ ಭಾಟಿ(ಕಂಚು) ಪದಕಗಳಿಗೆ ಕೊರಳೊಡ್ಡಿದರೆ, ದೀಪಾ ಮಲಿಕ್ ಶಾಟ್'ಪುಟ್'ನಲ್ಲಿ ಬೆಳ್ಳಿಪದಕ ಗೆದ್ದಿದ್ದಾರೆ. ಇನ್ನು ಜಾವಲಿನ್ ಥ್ರೋನಲ್ಲಿ ದೇವೇಂದ್ರ ಜಜೂರಿಯಾ ವಿಶ್ವದಾಖಲೆ ನಿರ್ಮಿಸುವುದರೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಸಾಧಕರೆಲ್ಲರೂ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಲಿದ್ದಾರೆ.