ಯಾರೇ ಕೋಚ್ ಆಗಿದ್ದರೂ ಅಂತಿಮವಾಗಿ ತಂಡದ ಗೆಲುವು ಮಾತ್ರ ಮುಖ್ಯ ಎಂದು ಸಾಹಾ ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿ(ಜು.14): ಅನಿಲ್ ಕುಂಬ್ಳೆ ಕೋಚ್ ಆಗಿದ್ದ ಸಂದರ್ಭದಲ್ಲಿ ಡ್ರೆಸ್ಸಿಂಗ್ ರೂಮ್'ನಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇರಲಿಲ್ಲ ಎಂದು ಭಾರತ ಟೆಸ್ಟ್ ತಂಡದ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕುಂಬ್ಳೆ ಹಾಗೂ ವಿರಾಟ್ ಕೊಹ್ಲಿ ನಡುವಿನ ಭಿನ್ನಾಭಿಪ್ರಾಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಾಹಾ, ‘ಡ್ರೆಸ್ಸಿಂಗ್ ರೂಂನಲ್ಲಿ ನನಗೆ ಆ ರೀತಿಯ ಯಾವುದೇ ವಾತಾವರಣ ಕಂಡುಬಂದಿಲ್ಲ. ನಾವೆಲ್ಲರೂ ಒಟ್ಟಿಗೆ ಬೆರೆಯುತ್ತಿದ್ದೆವು. ಹಾಸ್ಯ ಚಾಟಕಿಗಳನ್ನು ಹಾರಿಸುತ್ತಿದ್ದೆವು. ಅಲ್ಲಿ ಯಾವುದೇ ಬಿಗುವಿನ ವಾತಾವರಣ ಇರುತ್ತಿರಲಿಲ್ಲ ಏಕದಿನ ಪಂದ್ಯಗಳ ಸಮಯದಲ್ಲೂ ಇದೇ ರೀತಿ ವಾತಾವರಣ ಇರುತ್ತಿತ್ತು ಎಂದು ಭಾವಿಸಿದ್ದೇನೆ. ಏಕೆಂದರೆ ಕೇವಲ ನಾನು ಟೆಸ್ಟ್ ಪಂದ್ಯಗಳಿಗೆ ಮಾತ್ರ ತಂಡದೊಂದಿಗಿರುತ್ತಿದೆ’ ಎಂದಿದ್ದಾರೆ.

ನಾವು ವೆಸ್ಟ್ ಇಂಡಿಸ್ ಪ್ರವಾಸ ಕೈಗೊಂಡಾಗ ಅನಿಲ್ ಕುಂಬ್ಳೆ ನನ್ನ ಬಳಿ ಬಂದು 'ನೀನು ಬಂಗಾಳ ತಂಡದಲ್ಲಿದ್ದಾಗ ಹೇಗೆ ಆಡುತ್ತಿದ್ದೆಯೋ ಹಾಗೆಯೇ ಆಡು. ತುಂಬಾ ಒತ್ತಡಕ್ಕೆ ಒಳಗಾಗಬೇಡ ಎಂದು ಅವರ ಅನುಭವವನ್ನು ನನ್ನೊಂದಿಗೆ ಹಂಚಿಕೊಂಡರು ಎಂದು ಸಾಹಾ ತಿಳಿಸಿದ್ದಾರೆ.

ಯಾರೇ ಕೋಚ್ ಆಗಿದ್ದರೂ ಅಂತಿಮವಾಗಿ ತಂಡದ ಗೆಲುವು ಮಾತ್ರ ಮುಖ್ಯ ಎಂದು ಸಾಹಾ ಅಭಿಪ್ರಾಯಪಟ್ಟಿದ್ದಾರೆ.

ಕುಂಬ್ಳೆ ಒಂದು ವರ್ಷದ ಅವಧಿಗೆ ಟೀಂ ಇಂಡಿಯಾ ಕೋಚ್ ಆಗಿ ಕಾರ್ಯನಿರ್ವಹಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ರಾಜೀನಾಮೆ ನೀಡಿದ್ದಾರೆ.