ನಿದಾಸ್ ಟ್ರೋಫಿ: ನಿರಾಸೆ ಮೂಡಿಸಿದ ಟಾಪ್ 5 ಆಟಗಾರರಿವರು
ರೋಹಿತ್ ಶರ್ಮಾ, ಮೊಹಮದುಲ್ಲಾ ಸೇರಿದಂತೆ ವಾಷಿಂಗ್ಟನ್ ಸುಂದರ್, ವಿಜಯ್ ಶಂಕರ್ ಟೂರ್ನಿಯನ್ನು ಸ್ಮರಣೀಯವಾಗಿಸಿಕೊಳ್ಳುವಲ್ಲಿ ಸಫಲವಾದರು. ಅದರಂತೆ ಕೆಲ ಆಟಗಾರರು ನಿರಾಸೆಯನ್ನೂ ಮೂಡಿಸಿದರು. ನಿದಾಸ್ ಟ್ರೋಫಿಯಲ್ಲಿ ನಿರಾಸೆ ಮೂಡಿಸಿದ ಟಾಪ್ 5 ಆಟಗಾರರ ಪಟ್ಟಿ ನಿಮ್ಮ ಮುಂದೆ..
ಬೆಂಗಳೂರು(ಮಾ.19): ಬಾಂಗ್ಲಾದೇಶವನ್ನು ರೋಚಕವಾಗಿ ಬಗ್ಗುಬಡಿದ ಟೀಂ ಇಂಡಿಯಾ ನಿದಾಸ್ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಟೂರ್ನಿ ಆರಂಭಕ್ಕೂ ಮುನ್ನ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಟೀಂ ಇಂಡಿಯಾ ಲಂಕಾ ವಿರುದ್ಧ ಮೊದಲ ಪಂದ್ಯದಲ್ಲೇ ಮುಗ್ಗರಿಸಿ ಹಿನ್ನಡೆ ಅನುಭವಿಸಿತ್ತು. ಆ ಬಳಿಕ ಸತತ ಮೂರು ಪಂದ್ಯಗಳನ್ನು ಗೆದ್ದು ಫೈನಲ್ ಪ್ರವೇಶಿಸಿದ್ದ ಟೀಂ ಇಂಡಿಯಾ ಪ್ರಶಸ್ತಿ ಸುತ್ತಿನಲ್ಲಿ ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರೋಚಕ ಜಯಭೇರಿ ಬಾರಿಸಿತು.
ರೋಹಿತ್ ಶರ್ಮಾ, ಮೊಹಮದುಲ್ಲಾ ಸೇರಿದಂತೆ ವಾಷಿಂಗ್ಟನ್ ಸುಂದರ್, ವಿಜಯ್ ಶಂಕರ್ ಟೂರ್ನಿಯನ್ನು ಸ್ಮರಣೀಯವಾಗಿಸಿಕೊಳ್ಳುವಲ್ಲಿ ಸಫಲವಾದರು. ಅದರಂತೆ ಕೆಲ ಆಟಗಾರರು ನಿರಾಸೆಯನ್ನೂ ಮೂಡಿಸಿದರು.
ನಿದಾಸ್ ಟ್ರೋಫಿಯಲ್ಲಿ ನಿರಾಸೆ ಮೂಡಿಸಿದ ಟಾಪ್ 5 ಆಟಗಾರರ ಪಟ್ಟಿ ನಿಮ್ಮ ಮುಂದೆ..
1. ಸೌಮ್ಯ ಸರ್ಕಾರ್: ಬಾಂಗ್ಲಾದೇಶದ ತಾರಾ ಆಟಗಾರ ಸೌಮ್ಯ ಸರ್ಕಾರ್ ಸಾಕಷ್ಟು ಭರವಸೆಯೊಂದಿಗೆ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು. ಆದರೆ ಆಡಿದ 5 ಪಂದ್ಯಗಳಲ್ಲಿ ಕೇವಲ 50 ರನ್ ಬಾರಿಸುವುದರೊಂದಿಗೆ ನಿರಾಸೆ ಮೂಡಿಸಿದರು. ಫೈನಲ್'ನಲ್ಲಿ ಸೌಮ್ಯ ಸರ್ಕಾರ್ ಬಾರಿಸಿದ್ದು ಕೇವಲ ಒಂದು ರನ್ ಮಾತ್ರ..!
2. ಸುರೇಶ್ ರೈನಾ: ಟಿ20 ಪರಿಣಿತ ಬ್ಯಾಟ್ಸ್'ಮನ್ ಸುರೇಶ್ ರೈನಾ ಮೇಲೆ ಸಾಕಷ್ಟು ನಿರೀಕ್ಷೆಗಳಿತ್ತು. ಒಂದು ವರ್ಷಗಳಿಂದ ಟೀಂ ಇಂಡಿಯಾ ಏಕದಿನ ತಂಡದಲ್ಲಿ ಸ್ಥಾನಗಳಿಸಲು ಹೆಣಗಾಡುತ್ತಿರುವ ರೈನಾ, ಈ ಟೂರ್ನಿಯಲ್ಲಿ ಬಾರಿಸಿದ್ದು ಕೇವಲ 103 ರನ್ ಮಾತ್ರ..!
3. ತಿಸಾರ ಪೆರೇರಾ: ಶ್ರೀಲಂಕಾ ಸ್ಟಾರ್ ಆಲ್ರೌಂಡರ್ ಹಾಗೂ ನಾಯಕ ತಿಸಾರ ಪೆರೇರಾ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದರು. ಆಡಿದ 4 ಪಂದ್ಯಗಳಲ್ಲಿ ಪೆರೇರಾ ಬೌಲಿಂಗ್'ನಲ್ಲಿ ಕೇವಲ ಒಂದು ವಿಕೆಟ್ ಪಡೆದರೆ, ಬ್ಯಾಟಿಂಗ್'ನಲ್ಲಿ ಗಳಿಸಿದ್ದು ಕೇವಲ 95 ರನ್'ಗಳು ಮಾತ್ರ.
4. ಜಯದೇವ್ ಉನಾದ್ಕತ್: ಭುವನೇಶ್ವರ್ ಕುಮಾರ್-ಜಸ್'ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ವೇಗದ ಬೌಲಿಂಗ್ ಮುಂಚೂಣಿ ವಹಿಸಿಕೊಂಡಿದ್ದ ಸೌರಾಷ್ಟ್ರ ವೇಗಿ ಉನಾದ್ಕತ್ ನಿರೀಕ್ಷೆ ಹುಸಿಯಾಗಿಸಿದರು. ಸುಮಾರು 9 ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟ ದುಬಾರಿ ಎನಿಸಿದ ಉನಾದ್ಕತ್ ಗಳಿಸಿದ್ದು ಕೇವಲ 7 ವಿಕೆಟ್ ಮಾತ್ರ.
5. ಮುಷ್ತಾಫಿಜುರ್ ರೆಹಮಾನ್: ಬಾಂಗ್ಲಾದೇಶ ತಂಡದ ಸ್ಟಾರ್ ವೇಗಿ ಕೆಲ ತಿಂಗಳಗಳ ಹಿಂದಷ್ಟೇ ಎದುರಾಳಿಗಳ ನಿದ್ದೆಗೆಡಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ ಅದೇ ಹೊಳಪನ್ನು ಉಳಿಸಿಕೊಳ್ಳಲು ಮುಷ್ತಾಫಿಜುರ್ ವಿಫಲರಾಗಿದ್ದಾರೆ. ಆಡಿದ 5 ಪಂದ್ಯಗಳಲ್ಲಿ ಈ ವೇಗಿ ಗಳಿಸಿದ್ದು ಕೇವಲ 7 ವಿಕೆಟ್ ಮಾತ್ರ.