Asianet Suvarna News Asianet Suvarna News

National Open Athletics Championships: ಜಾವೆಲಿನ್‌ನಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ ಕನ್ನಡಿಗ ಮನು

61ನೇ ರಾಷ್ಟ್ರೀಯ ಓಪನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕನ್ನಡಿಗ ಮನುಗೆ ಒಲಿದ ಚಿನ್ನ
ಕರ್ನಾಟಕದ ಜಾವೆಲಿನ್‌ ಎಸೆತಗಾರ ಡಿ.ಪಿ.ಮನು ಮತ್ತು ಹೈ ಜಂಪ್‌ ಪಟು ಅಭಿನಯ ಚಿನ್ನದ ಪದಕ
ಇವರಿಬ್ಬರು ಕ್ರಮವಾಗಿ ಸರ್ವಿಸಸ್‌ ಮತ್ತು ರೈಲ್ವೇಸ್‌ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ.
 

National Open Athletics Championships Javelin Thrower DP Manu Clinch gold in Bengaluru kvn
Author
First Published Oct 19, 2022, 10:21 AM IST

ಬೆಂಗಳೂರು(ಅ.19): 61ನೇ ರಾಷ್ಟ್ರೀಯ ಓಪನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಜಾವೆಲಿನ್‌ ಎಸೆತಗಾರ ಡಿ.ಪಿ.ಮನು ಮತ್ತು ಹೈ ಜಂಪ್‌ ಪಟು ಅಭಿನಯ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಆದರೆ ಇವರಿಬ್ಬರು ಕ್ರಮವಾಗಿ ಸರ್ವಿಸಸ್‌ ಮತ್ತು ರೈಲ್ವೇಸ್‌ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ.

ಕೂಟದ 4ನೇ ದಿನವಾದ ಮಂಗಳವಾರ ಪುರುಷರ ಜಾವೆಲಿನ್‌ ಎಸೆತದಲ್ಲಿ ಮನು 81.23 ಮೀ. ದೂರ ಎಸೆದು ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ರೈಲ್ವೇಸ್‌ನ ರೋಹಿತ್‌ ಯಾದವ್‌(79.80 ಮೀ.-ಕೂಟ ದಾಖಲೆ) ಬೆಳ್ಳಿ ಪಡೆದರೆ, ಒಡಿಶಾದ ಕಿಶೋರ್‌ಗೆ ಕಂಚು ಒಲಿಯಿತು. ಮಹಿಳೆಯರ ಹೈಜಂಪ್‌ನಲ್ಲಿ ರೈಲ್ವೇಸ್‌ನ ಅಭಿನಯ ಶೆಟ್ಟಿ1.78 ಎತ್ತರಕ್ಕೆ ನೆಗೆದು ಬಂಗಾರಕ್ಕೆ ಮುತ್ತಿಕ್ಕಿದರೆ, ತಮಿಳುನಾಡಿದ ಕೆವಿನಾ ಅಶ್ವಿನಿ(1.76 ಮೀ.) ಬೆಳ್ಳಿ, ರೈಲ್ವೇಸ್‌ನ ರುಬಿನಾ ಯಾದವ್‌(1.74 ಮೀ.) ಕಂಚು ಗೆದ್ದುಕೊಂಡರು.

ಪುರುಷರ ಡಿಸ್ಕಸ್‌ ಎಸೆತದಲ್ಲಿ ಒಎನ್‌ಜಿಸಿ ತಂಡದ ಕೃಪಾಲ್‌ ಸಿಂಗ್‌, 58.15 ಮೀ. ದೂರ ಎಸೆದು ಚಿನ್ನ ಜಯಿಸಿದರೆ, ಹರಾರ‍ಯಣದ ಕ್ರೀಡಾಪಟುಗಳಾದ ಪ್ರಶಾಂತ್‌ ಮಲಿಕ್‌,ನಿರ್ಭಯ್‌ ಸಿಂಗ್‌ ಕ್ರಮವಾಗಿ ಬೆಳ್ಳಿ, ಕಂಚು ಜಯಿಸಿದರು. ಮಹಿಳೆಯರ ತ್ರಿಪಲ್‌ ಜಂಪ್‌ನಲ್ಲಿ ಮಹಾರಾಷ್ಟ್ರದ ಪೂರ್ವ ಹಿತೇಶ್‌, 800 ಮೀ. ಓಟದಲ್ಲಿ ರೈಲ್ವೇಸ್‌ನ ಚಂದಾ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ಶೂಟಿಂಗ್‌ ವಿಶ್ವಕಪ್‌: ಮತ್ತೆ 4 ಚಿನ್ನ ಜಯಿಸಿದ ಭಾರತ

ಕೈರೋ: ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತ ಮತ್ತೆ 4 ಚಿನ್ನದ ಪದಕ ಬಾಚಿಕೊಂಡಿದೆ. ಮಂಗಳವಾರ ನಡೆದ ಕಿರಿಯ ಮಹಿಳೆಯರ 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಶಿಖಾ ನರ್ವಾಲ್‌, ಈಶಾ ಸಿಂಗ್‌, ವರ್ಷಾ ಸಿಂಗ್‌ ಚೀನಾದ ಜೋಡಿಯನ್ನು 16-6 ಅಂತರದಲ್ಲಿ ಮಣಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿತು. 

National Open Athletics Championship: ಮೊದಲ ದಿನವೇ ಎರಡು ಪದಕ ಗೆದ್ದ ಕರ್ನಾಟಕ

ಇದೇ ವೇಳೆ ಕಿರಿಯ ಮಹಿಳೆಯರ 10 ಮೀ. ಏರ್‌ ರೈಫಲ್‌ ತಂಡ ವಿಭಾಗದಲ್ಲಿ ತಿಲೋತ್ತಮ ಸೇನ್‌, ನ್ಯಾನ್ಸಿ ಹಾಗೂ ರಮಿತಾ ಅವರನ್ನೊಳಗೊಂಡ ತಂಡ ಚಿನ್ನದ ಪದಕ ಜಯಿಸಿತು. ಪುರುಷರ ವಿಭಾಗದಲ್ಲಿ ರವಿಶಂಕರ್‌, ದಿವ್ಯಾಂಶ್‌ ಪಾನ್ವರ್‌ ಹಾಗೂ ವಿದಿತ್‌ ಜೈನ್‌ ಇದ್ದ ತಂಡಕ್ಕೂ ಚಿನ್ನ ಒಲಿಯಿತು. ಕೂಟದಲ್ಲಿ ಭಾರತ 9 ಚಿನ್ನ, 3 ಬೆಳ್ಳಿ, 8 ಕಂಚು ಸೇರಿ 20 ಪದಕಗಳೊಂದಿಗೆ 2ನೇ ಸ್ಥಾನದಲ್ಲಿದೆ.

ಕ್ರೀಡಾ ಪ್ರಶಸ್ತಿಯ ಆಯ್ಕೆ ಸಮಿತಿಗೆ ರಾಜ್ಯದ ಗಿರೀಶ್‌

ಬೆಂಗಳೂರು: 2022ರ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಆಯ್ಕೆ ಸಮಿತಿ ತಂಡದಲ್ಲಿ ಕರ್ನಾಟಕದ ಮಾಜಿ ಪ್ಯಾರಾ ಒಲಿಂಪಿಯನ್‌ ಎಚ್‌.ಎನ್‌.ಗಿರೀಶ್‌ ಸ್ಥಾನ ಪಡೆದಿದ್ದಾರೆ. ಗಿರೀಶ್‌ ಅವರು 2012ರ ಲಂಡನ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಪುರುಷರ ಹೈ ಜಂಪ್‌ನಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕ ಗೆದ್ದಿದ್ದರು. ಇನ್ನು, ಸಮಿತಿಗೆ ಸುಪ್ರೀಂ ಕೋರ್ಚ್‌ ನಿವೃತ್ತ ನ್ಯಾಯಾದೀಶ ಎ.ಎಂ.ಖಾನ್‌ವಿಲ್ಕರ್‌ ಮುಖ್ಯಸ್ಥರಾಗಿದ್ದು, ಭಾರತದ ಮಾಜಿ ಕ್ರಿಕೆಟ್‌ ಆಟಗಾರ್ತಿ ಮಿಥಾಲಿ ರಾಜ್‌, ಕುಸ್ತಿಪಟು ಯೋಗೇಶ್ವರ್‌ ದತ್‌ ಕೂಡಾ ಸ್ಥಾನ ಪಡೆದಿದ್ದಾರೆ.

ಇಯರ್‌ ಬಡ್ಸ್‌ನಿಂದಾಗಿ ವಿಶ್ವ ಚೆಸ್‌ನಿಂದ ಪ್ರಿಯಾಂಕ ಔಟ್‌!

ಚೆನ್ನೈ: ಭಾರತದ ಮಹಿಳಾ ಗ್ರ್ಯಾಂಡ್‌ಮಾಸ್ಟರ್‌ ಪ್ರಿಯಾಂಕಾ ನುಟಕ್ಕಿ ತಮ್ಮ ಜಾಕೆಟ್‌ನಲ್ಲಿ ಇಯರ್‌ ಬಡ್‌್ಸ ಇಟ್ಟುಕೊಂಡ ಕಾರಣ ಇಟಲಿಯಲ್ಲಿ ನಡೆಯುತ್ತಿರುವ ವಿಶ್ವ ಕಿರಿಯರ ಚೆಸ್‌ ಚಾಂಪಿಯನ್‌ಶಿಪ್‌ನಿಂದ ಹೊರಬಿದ್ದಿದ್ದಾರೆ. ಇದನ್ನು ವಿಶ್ವ ಚೆಸ್‌ ಫೆಡರೇಶನ್‌(ಫಿಡೆ) ಮಂಗಳವಾರ ಖಚಿತಪಡಿಸಿದೆ. 

ಟೂರ್ನಿ ವೇಳೆ ನಿರ್ಬಂಧ ಇರುವ ಕೆಲ ವಸ್ತುಗಳಲ್ಲಿ ಇಯರ್‌ ಬಡ್‌್ಸ ಕೂಡಾ ಒಳಗೊಂಡಿದ್ದು, ಪ್ರಿಯಾಂಕ ಅವರ ಜಾಕೆಟ್‌ನಲ್ಲಿ ಇಯರ್‌ ಬಡ್‌್ಸ ಪತ್ತೆಯಾಗಿದ್ದರಿಂದ ಟೂರ್ನಿಯಿಂದ ಹೊರಹಾಕಲಾಗಿದೆ ಎಂದು ಫಿಡೆ ತಿಳಿಸಿದೆ. ಅವರು ಟೂರ್ನಿಯಲ್ಲಿ ಆಡಿದ 5 ಸುತ್ತುಗಳಲ್ಲಿ 3 ಜಯ, 2 ಡ್ರಾ ಸಾಧಿಸಿದ್ದರು.

Follow Us:
Download App:
  • android
  • ios