ಆರ್’ಸಿಬಿ ಪ್ಲೇ ಆಫ್ ಕನಸಿಗಿಂದು ಕೊನೆಯ ಚಾನ್ಸ್..!
ಉಭಯ ತಂಡಗಳು ಆಡಿರುವ 7 ಪಂದ್ಯಗಳಲ್ಲಿ ತಲಾ 5ರಲ್ಲಿ ಸೋತಿದ್ದು, ಪ್ಲೇ-ಆಫ್ ರೇಸ್’ನಲ್ಲಿ ಉಳಿದುಕೊಳ್ಳಲು ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. ಎರಡೂ ತಂಡಗಳಿಗೆ ಲೀಗ್ ಹಂತದಲ್ಲಿ ಇನ್ನು 7 ಪಂದ್ಯ ಬಾಕಿ ಇದ್ದು, ನಾಕೌಟ್ ಹಂತ ಪ್ರವೇಶಿಸಲು ಕನಿಷ್ಠ 6ರಲ್ಲಿ ಜಯಿಸಬೇಕಿದೆ.
ಬೆಂಗಳೂರು[ಮೇ.01]: ಒಂದೇ ನಾಣ್ಯದ ಎರಡು ಮುಖಗಳಂತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ಇಂದು ನಡೆಯಲಿರುವ ರೋಚಕ ಪಂದ್ಯದಲ್ಲಿ ಸೆಣಸಲಿವೆ. ಉಭಯ ತಂಡಗಳು ಆಡಿರುವ 7 ಪಂದ್ಯಗಳಲ್ಲಿ ತಲಾ 5ರಲ್ಲಿ ಸೋತಿದ್ದು, ಪ್ಲೇ-ಆಫ್ ರೇಸ್’ನಲ್ಲಿ ಉಳಿದುಕೊಳ್ಳಲು ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. ಎರಡೂ ತಂಡಗಳಿಗೆ ಲೀಗ್ ಹಂತದಲ್ಲಿ ಇನ್ನು 7 ಪಂದ್ಯ ಬಾಕಿ ಇದ್ದು, ನಾಕೌಟ್ ಹಂತ ಪ್ರವೇಶಿಸಲು ಕನಿಷ್ಠ 6ರಲ್ಲಿ ಜಯಿಸಬೇಕಿದೆ. ಆದರೆ ಮೊದಲ 4 ಸ್ಥಾನಗಳಲ್ಲಿರುವ ತಂಡ ಗಳ ನೆಟ್ ರನ್’ರೇಟ್ ಉತ್ತಮವಾಗಿರುವ ಕಾರಣ, ಎರಡೂ ತಂಡಗಳು ಉಳಿದಿರುವ ಎಲ್ಲಾ 7 ಪಂದ್ಯಗಳಲ್ಲಿ ಗೆದ್ದು ಪ್ಲೇ-ಆಫ್ ಪ್ರವೇಶಿಸಬೇಕಾದ ಅನಿವಾರ್ಯತೆ ಎದುರಾಗಬಹುದು. ಹೀಗಾಗಿ ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಪಂದ್ಯ ಆರ್ಸಿಬಿ ಹಾಗೂ ಮುಂಬೈನ ಭವಿಷ್ಯ ನಿರ್ಧರಿಸಲಿದೆ.
ಬಗೆಹರಿಯದ ಆರ್ಸಿಬಿ ಸಮಸ್ಯೆ: ಈ ಆವೃತ್ತಿಯ ಅತ್ಯಂತ ಕಳಪೆ ತಂಡ ಎಂದು ಸಾಮಾಜಿಕ ತಾಣಗಳಲ್ಲಿ ಕುಖ್ಯಾತಿಗೆ ಒಳಗಾಗಿರುವ ಆರ್’ಸಿಬಿ, ಸಮಸ್ಯೆಗಳ ಸಾಗರದಲ್ಲಿ ಮುಳುಗುತ್ತಿದೆ. ಪಂದ್ಯದಿಂದ ಪಂದ್ಯಕ್ಕೆ ತಂಡದಲ್ಲಿ ಸಮಸ್ಯೆ ಹೆಚ್ಚುತ್ತಿದೆ. ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಹೊರತು ಪಡಿಸಿ ಉಳಿದ್ಯಾವ ಬ್ಯಾಟ್ಸ್’ಮನ್’ಗಳಿಂದಲೂ ತಂಡಕ್ಕೆ ನಿರೀಕ್ಷಿತ ರನ್ ಕೊಡುಗೆ ದೊರೆಯುತ್ತಿಲ್ಲ. ಕಳೆದ ಪಂದ್ಯದಲ್ಲಿ ಡಿ ಕಾಕ್, ಮೆಕ್ಕಲಂ ಮೊದಲ ವಿಕೆಟ್’ಗೆ ಉತ್ತಮ ಜೊತೆಯಾಟವಾಡಿದರಾದರೂ, ಹೆಚ್ಚು ಓವರ್’ಗಳನ್ನು ವ್ಯರ್ಥ ಮಾಡಿದರು. ಎಬಿಡಿ ಅನುಪಸ್ಥಿತಿ ತಂಡಕ್ಕೆ ದೊಡ್ಡ ಮಟ್ಟದಲ್ಲಿ ಕಾಡಿತು. ಕೊಹ್ಲಿ, ಎಬಿಡಿ ವಿಕೆಟ್ ಪತನಗೊಂಡರೆ ತಂಡ ನಂಬಿಕೆಯಿಡಬಹುದಾದಂತ ಒಬ್ಬ ಬ್ಯಾಟ್ಸ್'ಮನ್ ಸಹ ಇಲ್ಲ. ಇನ್ನು ಆರ್'ಸಿಬಿ ಬೌಲಿಂಗ್ ಟೂರ್ನಿ ಸಾಗಿದಂತೆ ತಳಹಿಡಿಯುತ್ತಿದೆ. ದುಬಾರಿಯಾಗುತ್ತಿರುವ ಯಾದವ್, ಸಿರಾಜ್'ರನ್ನು ತಂಡದಲ್ಲಿ ಮುಂದುವರಿಸುತ್ತಿರುವುದು ಟೀಕೆಗೆ ಕಾರಣವಾಗಿದೆ. ಡಿ ಗ್ರಾಂಡ್'ಹೋಮ್'ರನ್ನು ಆಲ್ರೌಂಡರ್ ಆಗಿ ಕಣಕ್ಕಿಳಿಸಿದರೂ, ಅವರಿಂದ ಒಂದೇ ಒಂದು ಓವರ್ ಬೌಲಿಂಗ್ ಸಹ ಮಾಡಿಸದೆ ಇರುವುದು ಅಚ್ಚರಿ ಮೂಡಿಸುತ್ತಿದೆ. ಮೊಯಿನ್ ಅಲಿಯಂತಹ ಉತ್ತಮ ಆಲ್ರೌಂಡರ್ ಬೆಂಚ್ ಕಾಯುತ್ತಿದ್ದಾರೆ. ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಬಲ್ಲ ರಾಜ್ಯದ ಪವನ್ ದೇಶಪಾಂಡೆಗೆ ಅವಕಾಶ ದೊರೆಯುತ್ತಿಲ್ಲ. ವೇಗಿ ನವ್'ದೀಪ್'ರನ್ನು ಪ್ರಯತ್ನಿಸುತ್ತಿಲ್ಲ. ಈ ಎಲ್ಲಾ ಬೆಳವಣಿಗೆಗಳಿಂದ ಆರ್'ಸಿಬಿ ತಂಡದ ಆಡಳಿತ ಹಲವು ಪ್ರಶ್ನೆಗಳು ಉದ್ಭವವಾಗುವಂತೆ ಮಾಡಿದೆ.
ಕೊಹ್ಲಿ ಕಳಪೆ ನಾಯಕತ್ವ: ಈ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವ ಗುಣಗಳ ಬಗ್ಗೆಯೂ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ತಂಡದ ಆಯ್ಕೆ, ಬ್ಯಾಟಿಂಗ್ ಕ್ರಮಾಂಕದ ನಿರ್ಧಾರ, ಬೌಲರ್'ಗಳನ್ನು ನಿಭಾಯಿಸುತ್ತಿರುವ ರೀತಿ, ಕ್ಷೇತ್ರ ರಕ್ಷಣೆ ನಿರ್ವಹಣೆ ಇದೆಲ್ಲದರಲ್ಲೂ ಕೊಹ್ಲಿ ಪದೇ ಪದೇ ಎಡವುತ್ತಿದ್ದಾರೆ.
ಆಡ್ತಾರಾ ಎಬಿಡಿ?: ಎಬಿ ಡಿವಿಲಿಯರ್ಸ್ ಜ್ವರದ ಕಾರಣ ಕೆಕೆಆರ್ ವಿರುದ್ಧ ಪಂದ್ಯ ತಪ್ಪಿಸಿಕೊಂಡಿದ್ದರು. ಅವರ ಆರೋಗ್ಯ ಸುಧಾರಿಸಿದ್ದು, ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಹೊರಬೀಳುವ ಭೀತಿಯಲ್ಲಿ ಮುಂಬೈ: ಆರ್'ಸಿಬಿಗೆ ಹೋಲಿ ಸಿದರೆ ಹಾಲಿ ಚಾಂಪಿಯನ್ ಮುಂಬೈ ಪರಿಸ್ಥಿತಿ ವಿಭಿನ್ನವಾಗಿಲ್ಲ. ಸೂರ್ಯಕುಮಾರ್ ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್'ಮನ್'ಗಳು ಸಹ ಸ್ಥಿರತೆ ಕಾಯ್ದುಕೊಂಡಿಲ್ಲ. ಆರ್'ಸಿಬಿಗಿಂತ ಉತ್ತಮ ಬೌಲಿಂಗ್ ಪಡೆ ಹೊಂದಿದ್ದರೂ ಮುಂಬೈಗೆ ಅದೃಷ್ಟ ಕೈಕೊಡುತ್ತಿದೆ. ಚಿನ್ನಸ್ವಾಮಿ ಅಂಗಳದಲ್ಲಿ ರೋಹಿತ್ ಶರ್ಮಾ ಪಡೆ, ಸಂಘಟಿತ ಪ್ರದರ್ಶನ ತೋರಿ ಟ್ರೋಫಿ ಉಳಿಸಿಕೊಳ್ಳುವ ಪೈಪೋಟಿಯಲ್ಲಿ ಉಳಿಯಲು ಕಾತರಿಸುತ್ತಿದೆ.