ಐಸಿಸಿ ಶ್ರೇಯಾಂಕದಲ್ಲಿ ಶ್ರೀಲಂಕಾ ತಂಡವು ಇನ್ನೊಂದು ಸ್ಥಾನ ಕುಸಿದರೂ ಲಂಡನ್'ನಲ್ಲಿ 2019ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್'ಗೆ ನೇರವಾಗಿ ಪ್ರವೇಶ ಪಡೆಯುವ ಅವಕಾಶದಿಂದ ವಂಚಿತವಾಗಲಿದೆ.

ಕೊಲಂಬೊ(ಜು.11): ದುರ್ಬಲ ಜಿಂಬಾಬ್ವೆ ವಿರುದ್ಧ ತವರಿನಲ್ಲೇ ಹೀನಾಯವಾಗಿ ಏಕದಿನ ಸರಣಿ ಸೋತ ಬೆನ್ನಲ್ಲೇ ಶ್ರೀಲಂಕಾ ತಂಡದ ನಾಯಕ ಆ್ಯಂಜೆಲೋ ಮ್ಯಾಥ್ಯೂಸ್ ನಾಯಕತ್ವ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

Add Asianetnews Kannada as a Preferred SourcegooglePreferred

ತವರಿನಲ್ಲಿ ನಡೆದ ಏಕದಿನ ಪಂದ್ಯಗಳ ಸರಣಿಯನ್ನು 3-2 ಅಂತರದಿಂದ ಸೋತ ಬಳಿಕ ಏಂಜಲೋ ಮ್ಯಾಥ್ಯೂಸ್ ತಾವು ನಾಯತ್ವದಲ್ಲಿ ಮುಂದುವರಿಯಬೇಕೋ ಅಥವಾ ಬೇಡವೋ ಎಂಬುದರ ಕುರಿತು ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

‘ನನ್ನ ವೃತ್ತಿಜೀವನದಲ್ಲೇ ಅತ್ಯಂತ ಕೆಟ್ಟ ಹಂತ ಇದಾಗಿದೆ. ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಟಾಸ್‌'ನಿಂದ ಹಿಡಿದು, ನಮ್ಮ ಯೋಜನೆಗಳೆಲ್ಲವೂ ಉಲ್ಟಾ ಆದವು. ಆದರೆ ಇದ್ಯಾವುದಕ್ಕೂ ಕ್ಷಮೆಯಿಲ್ಲ. ದಿನದ ಅಂತ್ಯಕ್ಕೆ ನಾವು ಕೆಟ್ಟ ಆಟ ಪ್ರದರ್ಶಿಸಿದೆವು. ಜಿಂಬಾಬ್ವೆ ಉತ್ತಮವಾಗಿ ಆಡಿತು’ಎಂದು ಮ್ಯಾಥ್ಯೂಸ್ ಹೇಳಿದ್ದಾರೆ.

ಶ್ರೀಲಂಕಾ ತಂಡವು ಚಾಂಪಿಯನ್ಸ್ ಟ್ರೋಫಿಯಲ್ಲಿ ಲೀಗ್ ಹಂತದಲ್ಲೇ ಹೊರಬಿದ್ದು ನಿರಾಸೆ ಅನುಭವಿಸಿದರೆ, ಜಿಂಬಾಬ್ವೆ ವಿರುದ್ಧ 3-2 ಅಂತದರಲ್ಲಿ ಸೋಲುಂಡು ಐಸಿಸಿ ಶ್ರೇಯಾಂಕದಲ್ಲಿ ಎಂಟನೇ ಸ್ಥಾನಕ್ಕೆ ಕುಸಿದಿದೆ. ಐಸಿಸಿ ಶ್ರೇಯಾಂಕದಲ್ಲಿ ಶ್ರೀಲಂಕಾ ತಂಡವು ಇನ್ನೊಂದು ಸ್ಥಾನ ಕುಸಿದರೂ ಲಂಡನ್'ನಲ್ಲಿ 2019ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್'ಗೆ ನೇರವಾಗಿ ಪ್ರವೇಶ ಪಡೆಯುವ ಅವಕಾಶದಿಂದ ವಂಚಿತವಾಗಲಿದೆ.

ಜಿಂಬಾಬ್ವೆ 8 ವರ್ಷಗಳ ಬಳಿಕ ವಿದೇಶಿ ನೆಲದಲ್ಲಿ ಏಕದಿನ ಸರಣಿ ಗೆದ್ದು ಇತಿಹಾಸ ನಿರ್ಮಿಸಿದೆ.