ಬಿಸಿಸಿಐನಿಂದ ಆಜೀವ ನಿಷೇಧಕ್ಕೆ ಒಳಗಾಗಿ ಸದ್ಯ ಲಂಡನ್‌'ನಲ್ಲಿ ನೆಲೆಸಿರುವ, ಐಪಿಎಲ್‌'ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ರಾಜಸ್ಥಾನದ ನಾಗೋರ್ ಜಿಲ್ಲಾ ಕ್ರಿಕೆಟ್ ಸಂಸ್ಥೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಕ್ರಿಕೆಟ್ ಆಡಳಿತಕ್ಕೆ ವಿದಾಯ ಹೇಳಿದ್ದಾರೆ.
ಬೆಂಗಳೂರು(ಆ.13): ಬಿಸಿಸಿಐನಿಂದ ಆಜೀವ ನಿಷೇಧಕ್ಕೆ ಒಳಗಾಗಿ ಸದ್ಯ ಲಂಡನ್'ನಲ್ಲಿ ನೆಲೆಸಿರುವ, ಐಪಿಎಲ್'ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ರಾಜಸ್ಥಾನದ ನಾಗೋರ್ ಜಿಲ್ಲಾ ಕ್ರಿಕೆಟ್ ಸಂಸ್ಥೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಕ್ರಿಕೆಟ್ ಆಡಳಿತಕ್ಕೆ ವಿದಾಯ ಹೇಳಿದ್ದಾರೆ.
ನಿಷೇಧಿಸಲ್ಪಟ್ಟಿದ್ದರೂ ಲಲಿತ್ ಮೋದಿ ಅಧ್ಯಕ್ಷರಾಗಿ ಮುಂದುವರಿದಿದ್ದ ಕಾರಣ ರಾಜಸ್ಥಾನ ಕ್ರಿಕೆಟ್ ಸಂಸ್ಥೆಗೆ ನೀಡುತ್ತಿದ್ದ ಹಣಕಾಸು ನೆರವನ್ನು ಬಿಸಿಸಿಐ ಸ್ಥಗಿತಗೊಳಿಸಿತ್ತು. ರಾಜಸ್ಥಾನ ಕ್ರಿಕೆಟ್ ಸಂಸ್ಥೆ ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಜೋಹ್ರಿ ಅವರಿಗೆ ಮೋದಿ ಶನಿವಾರ ರಾಜೀನಾಮೆ ಪತ್ರ ರವಾನಿಸಿದ್ದಾರೆ.
ಇದೇ ವೇಳೆ ರಾಹುಲ್ ಜೋಹ್ರಿಗೆ ಸುದೀರ್ಘ ಪತ್ರ ಬರೆದಿರುವ ಮೋದಿ, ಇನ್ನು ಮುಂದೆಯಾದರೂ ರಾಜಸ್ಥಾನಕ್ಕೆ ಆರ್ಥಿಕ ನೆರವನ್ನು ನೀಡಬೇಕಾಗಿ ಕೋರಿದ್ದಾರೆ. ಮುಂದಿನ ಪೀಳಿಗೆಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
2008ರ ಐಪಿಎಲ್ ಪ್ರಸಾರ ಹಕ್ಕು ವಿತರಣೆಗೆ ಸಂಬಂಧಿಸಿದಂತೆ ಅಕ್ರಮ ಹಣದ ಲೇವಾದೇವಿಯಲ್ಲಿ ಭಾಗಿಯಾದ ಆರೋಪದಡಿ ಜಾರಿ ನಿರ್ದೇಶನಾಲಯ ಮೋದಿ ವಿರುದ್ಧ ಪ್ರಕರಣ ದಾಖಲಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ಸೂಚಿಸಿತ್ತು. ಆದರೆ, ಇಂಗ್ಲೆಂಡ್'ನಲ್ಲಿ ಬೀಡುಬಿಟ್ಟಿರುವ ಮೋದಿ ಪದೇ ಪದೇ ಗೈರಾದ ಕಾರಣ ಅವರ ವಿರುದ್ಧ ಬಂ‘ನದ ವಾರೆಂಟ್ ಸಹ ಜಾರಿಗೊಳಿಸಿತ್ತು.
ಕ್ರಿಕೆಟ್'ಗೆ ಹೊಸ ರೂಪ ಕೊಟ್ಟ ಉದ್ಯಮಿ:
ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಲಲಿತ್, ಹಂತ ಹಂತವಾಗಿ ಕ್ರಿಕೆಟ್ ಆಡಳಿತದಲ್ಲೂ ಖ್ಯಾತಿಯ ಜೊತೆಗೆ ಪ್ರಭಾವಿಶಾಲಿಯಾಗಿ ಬೆಳೆದರು. ಅದರಲ್ಲೂ ಐಪಿಎಲ್ ಟಿ20 ಪಂದ್ಯಾವಳಿಯನ್ನು ಹುಟ್ಟು ಹಾಕುವ ಮೂಲಕ ಕ್ರಿಕೆಟ್ಗೆ ಮತ್ತೊಂದು ಆಯಾಮವನ್ನೇ ಸೃಷ್ಟಿಸಿ, ಕ್ರಿಕೆಟ್ ಲೋಕದಲ್ಲಿ ಹಣದ ಹೊಳೆ ಹರಿಯುವಂತೆ ಮಾಡಿದರು.
ವಿಶ್ವ ಕ್ರಿಕೆಟ್'ನಲ್ಲಿ ಭಾರತದ ಪ್ರಭಾವವನ್ನು ಮತ್ತಷ್ಟು ಬಲಿಷ್ಠಗೊಳಿಸಿದರು. ರಾಜಸ್ಥಾನ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿ, ಬಿಸಿಸಿಐ ಹಾಗೂ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ನ ಉಪಾಧ್ಯಕ್ಷರ ಹುದ್ದೆಯನ್ನು ನಿರ್ವಹಿಸಿದ್ದ ಲಲಿತ್, ಬಿಸಿಸಿಐನಲ್ಲಿ ಮಾತ್ರವಲ್ಲದೇ ಐಸಿಸಿಯಲ್ಲೂ ತಮ್ಮದೇ ಛಾಪು ಸೃಷ್ಟಿಸಿದ್ದರು. ಐಪಿಎಲ್ನ ಚೇರ್ಮನ್ ಆಗುತ್ತಿದ್ದಂತೆ ಅವರ ಹಿಡಿತ ಮತ್ತಷ್ಟು ಬಲಗೊಂಡಿತ್ತು. ಯಾವುದೇ ಸಮಸ್ಯೆಗಳಿದ್ದರೂ ಕ್ಷಣ ಮಾತ್ರದಲ್ಲಿ ನಿವಾರಿಸುವ ಚಾಣಾಕ್ಷತನಕ್ಕೆ ಮೋದಿ ಹೆಸರುವಾಸಿಯಾಗಿದ್ದರು.
