ಇಂದು KSCA ಚುನಾವಣೆ: ಯಾರಿಗೆ ಅಧ್ಯಕ್ಷ ಹುದ್ದೆ?
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆ ಇದೀಗ ಆರಂಭವಾಗಿದೆ. ರೋಜರ್ ಬಿನ್ನಿ, ಎಂ.ಎಂ. ಹರೀಶ್ KSCA ಅಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿದ್ದು, ಯಾರು ಅಧಿಕಾರಕ್ಕೇರುತ್ತಾರೆ ಎನ್ನುವುದು ಇನ್ನು ಕೆಲವು ಗಂಟೆಗಳಲ್ಲಿ ಬಯಲಾಗಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು[ಅ.03]: ಬಹು ನಿರೀಕ್ಷಿತ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಚುನಾವಣೆ ಗುರುವಾರ ನಡೆಯಲಿದೆ. ಬೆಳಗ್ಗೆ 10.30 ರಿಂದ ಸಂಜೆ 7 ಗಂಟೆವರೆಗೆ ಅಭ್ಯರ್ಥಿಗಳು ಮತ ಚಲಾವಣೆ ಮಾಡಬಹುದಾಗಿದೆ. ರಾತ್ರಿ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು ರಾತ್ರಿ 10ಕ್ಕೆ ಫಲಿತಾಂಶ ಹೊರಬೀಳಲಿದೆ.
ಸುಮಾರು 2000 ಮತಗಳಿವೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ 1623 ಅಜೀವ ಸದಸ್ಯರು ಹಾಗೂ 348 ಮಂದಿ ಕ್ಲಬ್ ಸದಸ್ಯರು ಮತ ಚಲಾವಣೆ ಮಾಡಲಿದ್ದಾರೆ. ರೋಜರ್ ಬಿನ್ನಿ ಬಣ ಹಾಗೂ ಕ್ಯಾಪ್ಟನ್ ಎಂ.ಎಂ. ಹರೀಶ್ ಬಣ ಚುನಾವಣಾ ಅಖಾಡದಲ್ಲಿದ್ದು ಯಾರ ಕೊರಳಿಗೆ ವಿಜಯ ಮಾಲೆ ಸಿಗಲಿದೆ ಎನ್ನುವ ಕುತೂಹಲ ಮೂಡಿದೆ.
KSCA ಕ್ರಿಕೆಟ್ ಚುನಾವಣೆ; ಅಖಾಡದಲ್ಲಿ ಬಿನ್ನಿ ಹಾಗೂ ಹರೀಶ್!
ಬ್ರಿಜೇಶ್ ಪಟೇಲ್ ಬೆಂಬಲಿತ ರೋಜರ್ ಬಿನ್ನಿ ಬಣ, ಚುನಾವಣೆ ಸಂಬಂಧ ಬುಧವಾರ ಸುದ್ದಿಗೋಷ್ಠಿ ನಡೆಸಿತು. ಈ ವೇಳೆ ಮಾತನಾಡಿದ ಬಿನ್ನಿ, ಕೆಎಸ್ಸಿಎ ಹಲವು ವರ್ಷಗಳಿಂದ ರಾಜ್ಯದಲ್ಲಿ ಕ್ರಿಕೆಟ್ ಅಭಿವೃದ್ಧಿ ಯೋಜನೆಗಳನ್ನು ಮಾಡಿಕೊಂಡು ಬಂದಿದೆ. ಶಿವಮೊಗ್ಗ, ಆಲೂರು, ಬೆಳಗಾವಿ ಹಾಗೂ ಹುಬ್ಬಳ್ಳಿಯಲ್ಲಿ ಸದ್ಯ ಇರುವ ಕ್ರೀಡಾಂಗಣವನ್ನು ಅಂ.ರಾ. ಮಟ್ಟಕ್ಕೇರಿಸುವ ಯೋಜನೆ ಇರುವುದಾಗಿ ತಿಳಿಸಿದರು. ಹಾಗೆ ಕೊಡಗು ಮತ್ತು ಮಂಗಳೂರಿನಲ್ಲಿ ಅಂ.ರಾ. ಮಟ್ಟದ ಕ್ರೀಡಾಂಗಣ ಮಾಡುವ ನೂತನ ಯೋಜನೆ ಇದೆ ಎಂದು ತಿಳಿಸಿದರು.
ಸದ್ಯ ನಡೆದಿರುವ ಭ್ರಷ್ಟಾಚಾರ ಮತ್ತು ಬೆಟ್ಟಿಂಗ್ ಪ್ರಕರಣವನ್ನು ಈಗಿರುವ ಆಡಳಿತ ಮಂಡಳಿಗೆ ಕಟ್ಟುವ ಹುನ್ನಾರ ನಡೆದಿದೆ ಎಂದು ವಿನಯ್ ಮೃತ್ಯುಂಜಯ ಹೇಳಿದರು. ಕೆಲ ವರ್ಷಗಳಿಂದ ರಾಜ್ಯ ಕ್ರಿಕೆಟ್ ತಂಡ ಅತ್ಯುತ್ತಮ ಸಾಧನೆ ಮಾಡಿದೆ. ಮುಂದಿನ ದಿನಗಳಲ್ಲಿ ಉತ್ತಮ ಸಾಧನೆ ಮಾಡುವ ವಿಶ್ವಾಸವಿದೆ ಎಂದು ಅವರು ಹೇಳಿದರು.