KPL 2019: ಬೆಳಗಾವಿಗೆ ಆಘಾತ; ಬಳ್ಳಾರಿಗೆ ಗೆಲುವಿನ ಪುಳಕ!
ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಯ 3ನೇ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್ ಹಾಗೂ ಬಳ್ಳಾರಿ ಟಸ್ಕರ್ಸ್ ಹೋರಾಟ ನಡೆಸಿತು. ಆರಂಭಿಕ ಹಂತದಲ್ಲಿ ರನ್ ವೇಗ ಕಡಿಮೆಯಾಗಿದ್ದರೂ, ಅಂತ್ಯದಲ್ಲಿ ರೋಚಕ ಘಟ್ಟ ತಲುಪಿತು. ಬೆಳಗಾವಿ ಹಾಗೂ ಬಳ್ಳಾರಿ ನಡುವಿನ ಪಂದ್ಯದ ಹೈಲೈಟ್ಸ್ ಇಲ್ಲಿದೆ.
ಬೆಂಗಳೂರು(ಆ.17): ಬೆಳಗಾವಿ ಪ್ಯಾಂಥರ್ಸ್ ವಿರುದ್ಧದ ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಯ 3ನೇ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್ ರನ್ ಗೆಲುವು ಸಾಧಿಸಿದೆ. ಅಂತಿಮ ಹಂತದಲ್ಲಿ ವಿಕೆಟ್ ಕಳೆದುಕೊಂಡ ಬೆಳಗಾವಿ ಗೆಲುವಿನ ಆಸೆ ಕೈಬಿಟ್ಟಿತು. ಪ್ರಸಿದ್ ಕೃಷ್ಣ ಹಾಗೂ ಭವೇಶ್ ಗುಲೇಚಾ ದಾಳಿಗೆ ತತ್ತರಿಸಿದ ಬೆಳಗಾವಿ ಸೋಲು ಕಂಡಿತು. 5 ರನ್ ರೋಚಕ ಗೆಲುವು ಸಾಧಿಸಿದ ಬಳ್ಳಾರಿ ಮೈದಾನದಲ್ಲಿ ಸಂಭ್ರಮ ಆಚರಿಸಿತು.
ಇದನ್ನೂ ಓದಿ: KPL ಉದ್ಘಾಟನಾ ಸಮಾರಂಭ; ಟೂರ್ನಿ ಕಳೆ ಹೆಚ್ಚಿಸಿದ ಚಂದನ್ ಶೆಟ್ಟಿ, ರಾಗಿಣಿ!
ಮೊದಲು ಬ್ಯಾಟಿಂಗ್ ಮಾಡಿದ ಬಳ್ಳಾರಿ ಟಸ್ಕರ್ಸ್ ನಿಗಿದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 144 ರನ್ ಸಿಡಿಸಿತು. ಅಭಿಷೇಕ್ ರೆಡ್ಡಿ 35, ದೇವದತ್ ಪಡಿಕ್ಕಲ್ 54, ಸಿಎಂ ಗೌತಮ್ 27 ಹಾಗೂ ಕೃಷ್ಣಪ್ಪ ಗೌತಮ್ 17 ರನ್ ಸಿಡಿಸಿದರು. ಬೆಳಗಾವಿ ಪ್ಯಾಂಥರ್ಸ್ ತಂಡ ಜಹೂರ್ ಫಾರೂಕಿ 2 ವಿಕೆಟ್ ಕಬಳಿಸಿ ಮಿಂಚಿದರು.
145 ರನ್ ಗುರಿ ಬೆನ್ನಟ್ಟಿದ ಬೆಳಗಾವಿ ನಿರೀಕ್ಷಿತ ಆರಂಭ ಪಡೆಯಲಿಲ್ಲ. ರವಿ ಸಮರ್ಥ್ ಕೇವಲ 4 ರನ್ ಸಿಡಿಸಿ ಔಟಾದರು. ಸ್ಟಾಲಿನ್ ಹೂವರ್ 10, ರಕ್ಷಿತ್ ಎಸ್ ಶೂನ್ಯಕ್ಕೆ ಔಟಾದರು. ಕೊನೈನ ಅಬ್ಬಾಸ್ 19 ರನ್ ಕಾಣಿಕೆ ನೀಡಿದರು. ದಿಕ್ಷಾಂಶು ನೇಗಿ 17 ರನ್ ಸಿಡಿಸಿ ಪೆವಿಲಿಯನ್ ಸೇರಿದರು. ಅಭಿನವ್ ಮನೋಹರ್ ಹಾಗೂ ರಿತೇಶ್ ಭಟ್ಕಳ್ ಆಸರೆಯಾದರು.
ಅಭಿನವ್ 26 ರನ್ ಸಿಡಿಸಿ ಔಟಾದರು. ರಿತೇಶ್ 27 ರನ್ ಸಿಡಿಸಿ ನಿರ್ಗಮಿಸಿದರು. ಅಷ್ಟರಲ್ಲೇ ಬೆಳಗಾವಿ ಗೆಲುವಿನ ಹಾದಿ ಕಠಿಣವಾಯಿತು. 12 ಎಸೆತದಲ್ಲಿ 19 ರನ್ ಅವಶ್ಯಕತೆ ಇತ್ತು. ಅರ್ಶದೀಪ್ ಸಿಂಗ್ ಹಾಗೂ ಶುಭಾಂಗ್ ಹೆಗ್ಡೆಹೋರಾಟ ನೀಡಿದರೂ ಗೆಲುವು ಸಿಗಲಿಲ್ಲ. ಬೆಳಗಾವಿ 8 ವಿಕೆಟ್ ಕಳೆದುಕೊಂಡ 138 ರನ್ ಸಿಡಿಸಿತು. ಈ ಮೂಲಕ ಬಳ್ಳಾರಿ 5 ರನ್ ರೋಚಕ ಗೆಲುವು ಸಾಧಿಸಿತು.