ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿ 15ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಗೆಲುವಿನ ನಗೆ ಬೀರಿದೆ. ಶಿವಮೊಗ್ಗ ಲಯನ್ಸ್ ಹಾಗೂ ಮೈಸೂರು ನಡುವಿನ ಹೋರಾಟ ಹೇಗಿತ್ತು? ಇಲ್ಲಿದೆ ಹೈಲೈಟ್ಸ್
ಮೈಸೂರು(ಆ.28): ಶಿವಮೊಗ್ಗ ಲಯನ್ಸ್ ವಿರುದ್ದ ಕೆಪಿಎಲ್ ಲೀಗ್ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 3 ಪಂದ್ಯದಿಂದ 2 ಗೆಲುವು ಸಾಧಿಸಿರುವ ಮೈಸೂರು ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಶಿವಮೊಗ್ಗ ಲಯನ್ಸ್ ನಿಗಧಿತ 20 ಓವರ್ಗಳಲ್ಲಿ 146 ರನ್ಗಳಿಗೆ ಆಲೌಟ್ ಆಯಿತು. ಶರತ್ ಬಿಆರ್ 46 ಹಾಗೂ ಆದಿತ್ಯ ಸೋಮಣ್ಣ 39ರನ್ಗಳ ಕಾಣಿಕೆ ನೀಡಿದರು.
147 ರನ್ ಗುರಿ ಬೆನ್ನಟ್ಟಿದ ಮೈಸೂರು ವಾರಿಯರ್ಸ್ ತಂಡಕ್ಕೆ ರಾಜು ಭಟ್ಕಳ್ ಹಾಗೂ ಅರ್ಜುನ್ ಹೊಯ್ಸಳ ಉತ್ತಮ ಆರಂಭ ನೀಡಿದರು. ಅರ್ಜುನ್ 40 ಹಾಗೂ ರಾಜು ಭಟ್ಕಳ್ 59 ರನ್ ಕಾಣಿಕೆ ನೀಡಿದರು. ಶೋಯಿಬ್ ಮ್ಯಾನೇಜ್ ಅಜೇಯ 25ರನ್ ಸಿಡಿಸಿದರು. ಈ ಮೂಲಕ ಮೈಸೂರು 17.2 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
