ಇದೀಗ ವಿಶ್ವದ 22ನೇ ಶ್ರೇಯಾಂಕಿತ ಆಟಗಾರ ಶ್ರೀಕಾಂತ್, ಫೈನಲ್‌'ನಲ್ಲಿ ವಿಶ್ವದ 47 ನೇ ಶ್ರೇಯಾಂಕಿತ ಆಟಗಾರ ಜಪಾನ್‌'ನ ಸಾಕೈ ಅವರನ್ನು ಎದುರಿಸಲಿದ್ದಾರೆ.
ಜಕಾರ್ತ(ಜೂ.17): ಭಾರತದ ಅನುಭವಿ ಶಟ್ಲರ್ ಕಿದಾಂಬಿ ಶ್ರೀಕಾಂತ್ ಗೆಲುವಿನ ನಾಗಾಲೋಟ ಮುಂದುವರೆದಿದ್ದು, ವಿಶ್ವದ ನಂ. ಶ್ರೇಯಾಂಕಿತ ದಕ್ಷಿಣ ಕೊರಿಯಾದ ಸಾನ್ ವಾನ್ ಹೊ ವಿರುದ್ಧ ರೋಚಕ ಜಯ ಸಾಧಿಸಿ ಇಂಡೋನೇಷ್ಯಾ ಓಪನ್'ನಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದಾರೆ. ಇದಕ್ಕೂ ಮೊದಲು ನಡೆದ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಮತ್ತೋರ್ವ ಪ್ರತಿಭಾನ್ವಿತ ಆಟಗಾರ ತನ್ನ ಅಭಿಯಾನ ಅಂತ್ಯಗೊಳಿಸಿದ್ದಾರೆ
ಪುರುಷರ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಶ್ರೀಕಾಂತ್ 21-15, 14-21, 24-22 ಗೇಮ್'ಗಳಿಂದ ವಿಶ್ವದ ನಂ.1 ಶ್ರೇಯಾಂಕಿತ ಆಟಗಾರ ದಕ್ಷಿಣ ಕೊರಿಯಾದ ಸಾನ್ ವಾನ್ ಹೊ ಎದುರು ಗೆಲುವು ಪಡೆದರು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಸುಮಾರು 1 ಗಂಟೆ 12 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಶ್ರೀಕಾಂತ್, ಎದುರಾಳಿ ಆಟಗಾರ ಸಾನ್ ವಾನ್'ಗೆ ಶಾಕ್ ನೀಡುವಲ್ಲಿ ಯಶಸ್ವಿಯಾದರು.
ಇದೀಗ ವಿಶ್ವದ 22ನೇ ಶ್ರೇಯಾಂಕಿತ ಆಟಗಾರ ಶ್ರೀಕಾಂತ್, ಫೈನಲ್'ನಲ್ಲಿ ವಿಶ್ವದ 47 ನೇ ಶ್ರೇಯಾಂಕಿತ ಆಟಗಾರ ಜಪಾನ್'ನ ಸಾಕೈ ಅವರನ್ನು ಎದುರಿಸಲಿದ್ದಾರೆ.
ಪ್ರಣಯ್'ಗೆ ಸೋಲು
ಮತ್ತೊಂದು ಸೆಮೀಸ್'ನಲ್ಲಿ ಭಾರತದ ಪ್ರಣಯ್ 21-17, 26-28, 18-21 ಗೇಮ್'ಗಳಿಂದ ಜಪಾನ್'ನ ಕಜುಮ್ಸಾ ಸಾಕೈ ವಿರುದ್ಧ ಸೋಲು ಅನುಭವಿಸಿದರು.
77 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಜಪಾನ್ ಆಟಗಾರ ಕುಜುಮ್ಸಾ ಅವರ ಪ್ರಭಾವಿ ಪ್ರದರ್ಶನದ ಎದುರು ಪ್ರಣಯ್ ನಿರುತ್ತರರಾದರು. 25ನೇ ಶ್ರೇಯಾಂಕಿತ ಪ್ರಣಯ್, ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಲೀ ಚಾಂಗ್ ಮತ್ತು ಚಿನ್ನ ವಿಜೇತ ಚೆನ್ ಲಾಂಗ್ ಎದುರು ಗೆಲುವು ಪಡೆದು ಉಪಾಂತ್ಯ ಪ್ರವೇಶಿಸಿದ್ದರು.
