ಆರಂಭಿಕರಾದ ಆರ್‌. ಸಮಥ್‌ರ್‍ (0) ಮತ್ತು ಮಯಾಂಕ್‌ ಅಗರ್ವಾಲ್‌ (0) ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದರು. ಕೇವಲ 4 ರನ್‌ ಗಳಿಸುಷ್ಟರಲ್ಲಿ ಎರಡು ಪ್ರಮುಖ ವಿಕೆಟ್‌ ಕಳೆದುಕೊಂಡ ಕರ್ನಾಟಕ ಉತ್ತಪ್ಪ ಮತ್ತು ಕರುಣ್‌ ಕಟ್ಟಿದ ಎಚ್ಚರಿಕೆಯ ಇನ್ನಿಂಗ್ಸ್‌ನಿಂದಾಗಿ ಚೇತರಿಕೆ ಕಂಡಿತು.

ಮುಂಬೈ: ಅನುಭವಿ ಆಟಗಾರ ರಾಬಿನ್‌ ಉತ್ತಪ್ಪ (108: 206 ಎಸೆತ, 12 ಬೌಂಡರಿ, 2 ಸಿಕ್ಸರ್‌) ಹಾಗೂ ನಾಯಕ ಕರುಣ್‌ ನಾಯರ್‌ (108: 198 ಎಸೆತ, 13 ಬೌಂಡರಿ) ದಾಖಲಿಸಿದ ಜಂಟಿ ಅಜೇಯ ಶತಕದಿಂದಾಗಿ ಅಸ್ಸಾಂ ವಿರುದ್ಧದ ರಣಜಿ ‘ಬಿ' ಗುಂಪಿನ ಪಂದ್ಯದಲ್ಲಿ ಕರ್ನಾಟಕ ಇನ್ನಿಂಗ್ಸ್‌ ಮುನ್ನಡೆಯತ್ತ ದಾಪುಗಾಲಿಟ್ಟಿದೆ.
ಇಲ್ಲಿನ ಬಾಂದ್ರಾ ಕುರ್ಲಾ ಸಂಕೀರ್ಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ 325 ರನ್‌ಗಳಿಗೆ ಆಲೌಟ್‌ ಆದ ಅಸ್ಸಾಂ ವಿರುದ್ಧ ಕರ್ನಾಟಕ 69 ಓವರ್‌ಗಳಲ್ಲಿ 2 ವಿಕೆಟ್‌ಗೆ 223 ರನ್‌ ಗಳಿಸಿ ಸುಸ್ಥಿತಿಯಲ್ಲಿದೆ. 102 ರನ್‌ಗಳ ಹಿನ್ನಡೆಯಲ್ಲಿರುವ ಕರ್ನಾಟಕದ ಪರ ಉತ್ತಪ್ಪ ಮತ್ತು ಕರುಣ್‌ ಕ್ರೀಸ್‌ನಲ್ಲಿದ್ದಾರೆ.
ಆರಂಭಿಕ ಆಘಾತ: ಇನ್ನು ಅಸ್ಸಾಂ ಇನ್ನಿಂಗ್ಸ್‌ಗೆ ತೆರೆ ಎಳೆದ ಮೇಲೆ ಬ್ಯಾಟಿಂಗ್‌ಗೆ ಮುಂದಾದ ಕರ್ನಾಟಕ ಆರಂಭಿಕ ಆಘಾತ ಅನುಭವಿಸಿತು. ಆರಂಭಿಕರಾದ ಆರ್‌. ಸಮಥ್‌ರ್‍ (0) ಮತ್ತು ಮಯಾಂಕ್‌ ಅಗರ್ವಾಲ್‌ (0) ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದರು. ಕೇವಲ 4 ರನ್‌ ಗಳಿಸುಷ್ಟರಲ್ಲಿ ಎರಡು ಪ್ರಮುಖ ವಿಕೆಟ್‌ ಕಳೆದುಕೊಂಡ ಕರ್ನಾಟಕ ಉತ್ತಪ್ಪ ಮತ್ತು ಕರುಣ್‌ ಕಟ್ಟಿದ ಎಚ್ಚರಿಕೆಯ ಇನ್ನಿಂಗ್ಸ್‌ನಿಂದಾಗಿ ಚೇತರಿಕೆ ಕಂಡಿತು. ಭೋಜನ ವಿರಾಮದ ಹೊತ್ತಿಗೆ 2 ವಿಕೆಟ್‌ಗೆ 42 ರನ್‌ ಪೇರಿಸಿದ ಈ ಜೋಡಿ, ಆ ಬಳಿಕ ದಿನಾಂತ್ಯದವರೆಗೆ ಅಸ್ಸಾಂ ಬೌಲರ್‌ಗಳ ಬೆವರಿಳಿಸಿತು. ಕಳೆದೆರಡೂ ಪಂದ್ಯಗಳಲ್ಲಿ ನೀರಸ ಬ್ಯಾಟಿಂಗ್‌ ಪ್ರದರ್ಶಿಸಿದ್ದ ರಾಬಿನ್‌ ಉತ್ತಪ್ಪ ಈ ಬಾರಿ ಜವಾಬ್ದಾರಿಯಿಂದ ಬ್ಯಾಟ್‌ ಬೀಸಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 21ನೇ ಶತಕ ಪೂರೈಸಿದರೆ, ನಾಯಕನಾಗಿ ಸಮರ್ಥ ಬ್ಯಾಟಿಂಗ್‌ ಪ್ರದರ್ಶಿಸಿದ ಕರುಣ್‌ ನಾಯರ್‌ 8ನೇ ಶತಕ ಪೂರೈಸಿ ತಂಡಕ್ಕೆ ನೆರವಾದರು. ಅಸ್ಸಾಂ ಪರ ಅರೂಪ್‌ ದಾಸ್‌ ಹಾಗೂ ಕೃಷ್ಣ ದಾಸ್‌ ತಲಾ ಒಂದೊಂದು ವಿಕೆಟ್‌ ಗಳಿಸಿದರು.
ಅಮಿತ್‌ ಅಜೇಯ ಆಟ: ಕರ್ನಾಟಕದ ವೇಗದ ದಾಳಿಗೆ ಕುಸಿದು ಕಂಗೆಟ್ಟುಹೋಗಿದ್ದ ಅಸ್ಸಾಂಗೆ ಆಸರೆಯಾಗಿದ್ದ ಕನ್ನಡಿಗ ಅಮಿತ್‌ ವರ್ಮಾ ಔಟಾಗದೆ ಉಳಿದದ್ದು ಎರಡನೇ ದಿನದಾಟದ ಮತ್ತೊಂದು ವಿಶೇಷ. ಮೊದಲ ದಿನದಾಟದಂದು ಯಶಸ್ವಿ ಅರ್ಧಶತಕ ಪೂರೈಸಿ 56 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದ ಸರೂಪಂ ಪುರಕಾಯಾಸ್ತ ಕೇವಲ 3 ರನ್‌ಗೆ ವಿಕೆಟ್‌ ಒಪ್ಪಿಸಿದರು. ಆದರೆ, 125 ರನ್‌ ಗಳಿಸಿದ್ದ ಅಮಿತ್‌ ವರ್ಮಾ (166: 316 ಎಸೆತ, 23 ಬೌಂಡರಿ, 3 ಸಿಕ್ಸರ್‌) 150 ರನ್‌ ಗಡಿ ದಾಟಿ ಅಜೇಯರಾಗುಳಿದರು. 

ಸಂಕ್ಷಿಪ್ತ ಸ್ಕೋರು:
ಅಸ್ಸಾಂ ಮೊದಲ ಇನ್ನಿಂಗ್ಸ್‌ 108.5 ಓವರ್‌ಗಳಲ್ಲಿ 325ಕ್ಕೆ ಆಲೌಟ್‌
(ಅಮಿತ್‌ ವರ್ಮಾ 166*; ಎಸ್‌. ಅರವಿಂದ್‌ 70ಕ್ಕೆ 5, ಶ್ರೇಯಸ್‌ 74ಕ್ಕೆ 3)

ಕರ್ನಾಟಕ ಮೊದಲ ಇನ್ನಿಂಗ್ಸ್‌ 69 ಓವರ್‌ಗಳಲ್ಲಿ 2 ವಿಕೆಟ್‌ಗೆ 223
(ರಾಬಿನ್‌ ಉತ್ತಪ್ಪ 108*, ಕರುಣ್‌ ನಾಯರ್‌ 108*; ಅರೂಪ್‌ 27ಕ್ಕೆ 1, ಕೃಷ್ಣದಾಸ್‌ 46ಕ್ಕೆ 1)