KPL ಟ್ರೋಫಿ ಲಾಂಚ್; ಪ್ರವಾಹ ಸಂತ್ರಸ್ತರಿಗೆ KSCA ನೆರವಿನ ಭರವಸೆ!
ಕರ್ನಾಟಕ ರಣಭೀಕರ ಮಳೆ ಹಾಗೂ ಪ್ರವಾಹಕ್ಕೆ ತತ್ತರಿಸಿದೆ. ಜನರ ಬದುಕು ನೀರಿನಲ್ಲಿ ಕೊಚ್ಚಿ ಹೋಗಿದೆ. ಇದೀಗ ಪ್ರವಾಹಕ್ಕೆ ಸಿಕ್ಕಿ ನಲುಗಿದವರಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನೆರವಿನ ಹಸ್ತ ಚಾಚುವುದಾಗಿ ಸ್ಪಷ್ಟಪಡಿಸಿದೆ.
ಬೆಂಗಳೂರು(ಆ.13): 8ನೇ ಆವೃತ್ತಿ ಕೆಪಿಎಲ್ ಟೂರ್ನಿ ಆಗಸ್ಟ್ 16 ರಿಂದ ಆರಂಭವಾಗಲಿದೆ. ಇದೀಗ ಕೆಪಿಎಲ್ ಟ್ರೋಫಿ ಲಾಂಚ್ ಮಾಡಲಾಗಿದೆ. ನಟ ಕಿಚ್ಚ ಸುದೀಪ್, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಬಿಎಸ್ ಚಂದ್ರಶೇಖರ್ , ಟೀಂ ಇಂಡಿಯಾ ಆಟಗಾರ್ತಿ ವೇದಾ ಕೃಷ್ಣ ಮೂರ್ತಿ ಹಾಗೂ KSCA ಸದಸ್ಯರು ಟ್ರೋಫಿ ಅನಾವರಣ ಮಾಡಿದರು. ಇದೇ ವೇಳೆ ಪ್ರವಾಹದಿಂದ ಕಂಗೆಟ್ಟಿರುವ ಕರ್ನಾಟಕ ಜನತೆಗೆ ರಾಜ್ಯ ಕ್ರಿಕೆಟ್ ಸಂಸ್ಛೆ ನೆರವಿನ ಭರವಸೆ ಇಟ್ಟಿತು.
ಇದನ್ನೂ ಓದಿ: ವಿಶೇಷ ರೀತಿಯಲ್ಲಿ KPL ಟ್ರೋಫಿ ಲಾಂಚ್; ಟೂರ್ನಿಗೆ ಶುಭಕೋರಿದ ಸುದೀಪ್!
ಟ್ರೋಫಿ ಲಾಂಚ್ ಬಳಿಕ ಮಾತನಾಡಿದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಾಧ್ಯಮ ವಕ್ತಾರ ವಿನಯ್ ಮೃತ್ಯುಂಜಯ್, ಕೆಪಿಎಲ್ ಟೂರ್ನಿ ಮುಗಿದ ಬಳಿಕ ರಾಜ್ಯ ಕ್ರಿಕೆಟ್ ಸಂಸ್ಥೆ ಪ್ರವಾಹ ಸಂತ್ರಸ್ತರಿಗೆ ನೆರವು ನೀಡಲಿದೆ. ಕರ್ನಾಟಕದಲ್ಲಿ ರಣಭೀಕರ ಮಳೆ ಹಾಗೂ ಪ್ರವಾಹದಿಂದ ಲಕ್ಷಕ್ಕೂ ಹೆಚ್ಚಿನ ಜನ ಸೂರು ಕಳೆದುಕೊಂಡಿದ್ದಾರೆ. ಹಲವರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ರಾಜ್ಯದ ಸಂಕಷ್ಟಕ್ಕೆ KSCA ನೆರವಾಗಲಿದೆ ಎಂದರು.
ಇದನ್ನೂ ಓದಿ: ಮಳೆಯಿಂದಾಗಿ KPL ಟೂರ್ನಿಯಲ್ಲಿ ಬದಲಾವಣೆ; ಹೊಸ ವೇಳಾಪಟ್ಟಿ ಪ್ರಕಟ!
ಮಳೆ ಕಾರಣದಿಂದ ಹುಬ್ಬಳ್ಳಿಯಲ್ಲಿ ಆಯೋಜಿಸಲಾದ KPL ಪಂದ್ಯಗಳನ್ನು ಬೆಂಗಳೂರು ಹಾಗೂ ಮೈಸೂರಿಗೆ ಶಿಫ್ಟ್ ಮಾಡಲಾಗಿದೆ. ಸದ್ಯ ಮಳೆ ಕಡಿಮೆಯಾದರೂ ಹುಬ್ಬಳ್ಳಿ ಮೈದಾನ ಸಜ್ಜುಗೊಳಿಸಲು ಕನಿಷ್ಠ 15 ದಿನದ ಅವಶ್ಯಕತೆ ಇದೆ. ಹೀಗಾಗಿ ಹುಬ್ಬಳ್ಳಿಯಲ್ಲಿ ಪಂದ್ಯ ಆಯೋಜಿಸಲು ಸಾಧ್ಯವಿಲ್ಲ. ವಿಶೇಷ ರೀತಿಯಲ್ಲಿ ಈಗಾಗಲೇ ಟ್ರೋಫಿ ಲಾಂಚ್ ಆಗಿದೆ. ಕನ್ನಡಿಗರು ಈ ಬಾರಿಯೂ ಕೆಪಿಎಲ್ ಟೂರ್ನಿಯಲ್ಲಿ ಯಶಸ್ವಿಗೊಳಿಸಬೇಕು ಎಂದು ವಿನಯ್ ಮೃತ್ಯುಂಜಯ್ ಮನವಿ ಮಾಡಿದರು.