ಗ್ರೇಟರ್ ನೋಯ್ಡಾ ಕ್ರೀಡಾ ಸಂಕೀರ್ಣದಲ್ಲಿ ನಡೆಯುತ್ತಿರುವ ‘ಬಿ’ ಗುಂಪಿನ ರಣಜಿ ಟ್ರೋಫಿ ಪಂದ್ಯಾವಳಿಯ ಮೂರನೇ ದಿನದ ಮುಕ್ತಾಯಕ್ಕೆ ಕರ್ನಾಟಕದ 577 ರನ್‌ಗೆ ಉತ್ತರವಾಗಿ ಜಾರ್ಖಂಡ್ 96 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 309 ರನ್ ದಾಖಲಿಸಿತು.

ಗ್ರೇಟರ್‌ನೋಯ್ಡಾ(ಅ.15): ಮಧ್ಯಮ ಕ್ರಮಾಂಕದಲ್ಲಿ ನಾಯಕ ಇಶನ್ ಕಿಶನ್ (118: 148 ಎಸೆತ, 13 ಬೌಂಡರಿ, 5 ಸಿಕ್ಸರ್) ದಾಖಲಿಸಿದ ಅಜೇಯ ಶತಕದೊಂದಿಗೆ ಸೌರಭ್ ತಿವಾರಿ (91: 163 ಎಸೆತ, 6 ಬೌಂಡರಿ, 3 ಸಿಕ್ಸರ್) ತೋರಿದ ದಿಟ್ಟ ಬ್ಯಾಟಿಂಗ್ ನಡುವೆಯೂ ಕರ್ನಾಟಕ, ಜಾರ್ಖಂಡ್ ವಿರುದ್ಧ ಮೇಲುಗೈ ಸಾಧಿಸಿ ಇನ್ನಿಂಗ್ಸ್ ಮುನ್ನಡೆಯತ್ತ ಸಾಗಿದೆ.

ಇಲ್ಲಿನ ಗ್ರೇಟರ್ ನೋಯ್ಡಾ ಕ್ರೀಡಾ ಸಂಕೀರ್ಣದಲ್ಲಿ ನಡೆಯುತ್ತಿರುವ ‘ಬಿ’ ಗುಂಪಿನ ರಣಜಿ ಟ್ರೋಫಿ ಪಂದ್ಯಾವಳಿಯ ಮೂರನೇ ದಿನದ ಮುಕ್ತಾಯಕ್ಕೆ ಕರ್ನಾಟಕದ 577 ರನ್‌ಗೆ ಉತ್ತರವಾಗಿ ಜಾರ್ಖಂಡ್ 96 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 309 ರನ್ ದಾಖಲಿಸಿತು.

ಆಟ ನಿಂತಾಗ ಕಿಶನ್ ಜತೆಗೆ ಶಾಭಾಜ್ ನದೀಮ್ 13 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. 7ನೇ ವಿಕೆಟ್‌ಗೆ ಮುರಿಯದ 94 ರನ್ ಪೇರಿಸಿದ ಈ ಜೋಡಿ ಕರ್ನಾಟಕ ಇನ್ನಷ್ಟು ಮೇಲುಗೈ ಸಾಧಿಸದಂತೆ ನೋಡಿಕೊಂಡಿತು. ಅಂದಹಾಗೆ ಭಾನುವಾರ ಪಂದ್ಯದ ಕೊನೆಯ ದಿನವಾಗಿದ್ದು, ಬಹುತೇಕ ಪಂದ್ಯ ಡ್ರಾನಲ್ಲಿ ಮುಕ್ತಾಯ ಕಾಣುವ ಸಾಧ್ಯತೆಗಳಿವೆ.

ಆರಂಭಿಕರ ವೈಫಲ್ಯ

ಪಂದ್ಯದ ಎರಡನೇ ದಿನದಾಟ ಮುಗಿದಾಗ ವಿಕೆಟ್ ನಷ್ಟವಿಲ್ಲದೆ 8 ರನ್ ಗಳಿಸಿದ್ದ ಜಾರ್ಖಂಡ್ ಉತ್ತಮ ಆರಂಭವನ್ನೇನೂ ಪಡೆಯಲಿಲ್ಲ. ಒಂದು ರನ್ ಗಳಿಸಿ ಔಟಾಗದೆ ಉಳಿದಿದ್ದ ಎಸ್.ಪಿ. ಗೌತಮ್ ಅಷ್ಟೇ ಮೊತ್ತಕ್ಕೆ ವೇಗಿ ಅಭಿಮನ್ಯು ಮಿಥುನ್ ಬೌಲಿಂಗ್‌ನಲ್ಲಿ ಮಯಾಂಕ್‌ಗೆ ಕ್ಯಾಚಿತ್ತು ಕ್ರೀಸ್ ತೊರೆದರು. ತದನಂತರ ಆಡಲಿಳಿದ ವಿರಾಟ್ ಸಿಂಗ್ (10) ಸ್ಪಿನ್ನರ್ ಶ್ರೇಯಸ್ ಗೋಪಾಲ್ ಬೌಲಿಂಗ್‌ನಲ್ಲಿ ವಿಕೆಟ್‌ಕೀಪರ್ ಗೌತಮ್‌ಗೆ ಕ್ಯಾಚಿತ್ತು ಕ್ರೀಸ್ ತೊರೆದಾಗ ಜಾರ್ಖಂಡ್‌ನ ಮೊತ್ತ 34 ರನ್‌ಗಳಷ್ಟೆ. ಈ ಹಂತದಲ್ಲಿ ಆಡಲಿಳಿದ ಸೌರಭ್ ತಿವಾರಿ ಜತೆಗೆ 8 ರನ್ ಗಳಿಸಿ ಔಟಾಗದೆ ಉಳಿದಿದ್ದ ಆನಂದ್ ಸಿಂಗ್ ಜಿಗುಟು ಆಟದಿಂದಲೇ ತಂಡದ ಸ್ಥಿತಿಯನ್ನು ಚೇತರಿಸಲು ನೆರವಾದರು. ಮಧ್ಯಾಹ್ನದ ಭೋಜನ ವಿರಾಮಕ್ಕೆ 2 ವಿಕೆಟ್‌ಗೆ 86 ರನ್ ಗಳಿಸಿದ ಜಾರ್ಖಂಡ್ ಬಳಿಕ ಎಡವಿತು. ಆನಂದ್ ವಿಕೆಟ್ ಎಗರಿಸಿದ ಸ್ಟುವರ್ಟ್ ಬಿನ್ನಿ ಈ ಜೋಡಿಯನ್ನು ಬೇರ್ಪಡಿಸಿದರು. 137 ಎಸೆತಗಳನ್ನು ಎದುರಿಸಿದ ಆನಂದ್ 7 ಆಕರ್ಷಕ ಬೌಂಡರಿಗಳುಳ್ಳ 45 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು.

ಕಿಶನ್-ಸೌರಭ್ ಜತೆಯಾಟ

ಆನಂದ್ ಸಿಂಗ್ ನಿರ್ಗಮನದ ಬಳಿಕ ಕ್ರೀಸ್‌ಗಿಳಿದ ಇಶಾಂಕ್ ಜಗ್ಗಿ (18) ಅಭಿಮನ್ಯು ಮಿಥುನ್ ಬೌಲಿಂಗ್‌ನಲ್ಲಿ ಅವರಿಗೇ ಕ್ಯಾಚಿತ್ತು ಕ್ರೀಸ್ ತೊರೆದರೆ, ಬಳಿಕ ಬಂದ ಇಶನ್ ಕಿಶನ್ ಕರ್ನಾಟಕ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಮತ್ತೊಂದು ಬದಿಯಲ್ಲಿ ಸೌರಭ್ ತಿವಾರಿ ಕೂಡ ಅವರಿಗೆ ಉತ್ತಮ ಬೆಂಬಲ ನೀಡಿದರು. ಈ ಜೋಡಿ ಐದನೇ ವಿಕೆಟ್‌ಗೆ 72 ರನ್ ಜತೆಯಾಟವಾಡಿ ತಂಡದ ಸ್ಥಿತಿಯನ್ನು ತುಸು ಚೇತರಿಸಿತು. ಆದಾಗ್ಯೂ ಶತಕದ ಹೊಸ್ತಿಲಲ್ಲಿದ್ದ ಸೌರಭ್ ತಿವಾರಿ ಅನಗತ್ಯ ರನ್ ಕದಿಯಲು ಹೋಗಿ ಗೌತಮ್ ಅವರಿಂದ ರನೌಟ್ ಆದರೆ, ಕಿಶನ್ ಅಜೇಯ ಆಟದೊಂದಿಗೆ ತಂಡಕ್ಕೆ ಆಸರೆಯಾದರು.

ಸ್ಕೋರ್ ವಿವರ

ಕರ್ನಾಟಕ ಮೊದಲ ಇನ್ನಿಂಗ್ಸ್: 577/6 (ಡಿಕ್ಲೇರ್)

ಜಾರ್ಖಂಡ್ ಮೊದಲ ಇನ್ನಿಂಗ್ಸ್

96 ಓವರ್‌ಗಳಲ್ಲಿ 6 ವಿಕೆಟ್‌ಗೆ 309