Asianet Suvarna News Asianet Suvarna News

ಜಾರ್ಖಂಡ್ ಮತ್ತು ಕರ್ನಾಟಕ ಪಂದ್ಯ ಡ್ರಾನಲ್ಲಿ ಅಂತ್ಯ; ಆರ್.ಸಮರ್ಥ್ ಪಂದ್ಯಶ್ರೇಷ್ಠ; ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಅಬ್ಬಾಸ್

ಪಂದ್ಯ ಡ್ರಾನಲ್ಲಿ ಅಂತ್ಯವಾದರೂ ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ ಕರ್ನಾಟಕ 3 ಅಂಕ ಸಂಪಾದಿಸಿತು. ಮೊದಲ ಇನ್ನಿಂಗ್ಸಲ್ಲಿ ದ್ವಿಶತಕ ಗಳಿಸಿದ್ದ ರಾಮಕುಮಾರ್ ಸಮರ್ಥ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

karnataka and jarkhand ranji match ends in draw

ದೆಹಲಿ(ಅ. 16): ಕರ್ನಾಟಕ ತಂಡ ಈ ಬಾರಿಯ ರಣಜಿ ಋತುವನ್ನು ಡ್ರಾ ಮೂಲಕ ಆರಂಭ ಮಾಡಿದೆ. ಇಲ್ಲಿಗೆ ಸಮೀಪದ ಗ್ರೇಟರ್ ನೋಯ್ಡಾದಲ್ಲಿ ಮುಕ್ತಾಯಗೊಂಡ ಜಾರ್ಖಂಡ್ ಮತ್ತು ಕರ್ನಾಟಕ ನಡುವಿನ ಬಿ ಗುಂಪಿನ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಕರ್ನಾಟಕದ 577 ರನ್'ಗಳ ಮೊದಲ ಇನ್ನಿಂಗ್ಸ್ ಮೊತ್ತಕ್ಕೆ ಪ್ರತಿಯಾಗಿ ಜಾರ್ಖಂಡ್ ತಂಡದ ಮೊದಲ ಇನ್ನಿಂಗ್ಸ್ 374 ರನ್ನಿಗೆ ಮುಕ್ತಾಯಗೊಂಡಿತು. ಫಾಲೋಆನ್ ನೀಡುವ ಬದಲು ಮತ್ತೆ ಬ್ಯಾಟ್ ಮಾಡಿದ ಕರ್ನಾಟಕ ತನ್ನ ಎರಡನೇ ಇನಿಂಗ್ಸಲ್ಲಿ 3 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ಪಂದ್ಯ ಡ್ರಾನಲ್ಲಿ ಅಂತ್ಯವಾದರೂ ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ ಕರ್ನಾಟಕ 3 ಅಂಕ ಸಂಪಾದಿಸಿತು.

ಇಂದು ನಡೆದ ಕೊನೆಯ ದಿನದಾಟದಲ್ಲಿ ಭಾರತ ಕಿರಿಯರ ತಂಡದ ಮಾಜಿ ಕ್ಯಾಪ್ಟನ್ ಜಾರ್ಖಂಡ್ ತಂಡದ ವಿಕೆಟ್'ಕೀಪರ್ ಇಶಾನ್ ಕಿಶನ್ ಆಕರ್ಷಕ ಶತಕ ಭಾರಿಸಿದ್ದು ಹೈಲೈಟ್ ಆಯಿತು. ಇಶಾನ್ ಕಿಶನ್ ಮತ್ತು ಶಹಬಾಜ್ ನದೀಮ್ ನಡುವೆ 7ನೇ ವಿಕೆಟ್'ಗೆ 128 ರನ್ ಜೊತೆಯಾಟ ಬಂದಿದ್ದರಿಂದ ಜಾರ್ಖಂಡ್ ಬಚಾವಾಗಲು ಸಾಧ್ಯವಾಯಿತು. ಇಶಾನ್ ಕಿಶನ್ ಕೊನೆಯವರೆಗೂ ಹೋರಾಟ ನಡೆಸಿ 159 ರನ್ ಗಳಿಸಿ ಅಜೇಯರಾಗಿ ಉಳಿದರು. ಜಾರ್ಖಂಡ್ ಇನ್ನಿಂಗ್ಸ್ ನಿರೀಕ್ಷೆಮೀರಿ ಬೆಳೆದ್ದರಿಂದ ಕರ್ನಾಟಕದ ಗೆಲುವಿನ ಆಸೆಗೆ ತಣ್ಣೀರು ಬಿತ್ತು.

ಜಾರ್ಖಂಡ್ ಇನ್ನಿಂಗ್ಸ್ ಮುಕ್ತಾಯವಾದಾಗ ದಿನದಾಟ ಮುಗಿಯಲು ಇನ್ನೆರಡು ಸೆಷೆನ್ಸ್ ಮಾತ್ರ ಬಾಕಿ ಇತ್ತು. ಜಾರ್ಖಂಡ್'ಗೆ ಮತ್ತೆ ಬ್ಯಾಟ್ ಮಾಡಲು ಅವಕಾಶ ನೀಡದೇ ಕರ್ನಾಟಕವೇ ಎರಡನೇ ಇನ್ನಿಂಗ್ಸ್ ಆರಂಭಿಸಿತು. ಮೊದಲ ಇನ್ನಿಂಗ್ಸ್'ನ ಡಬಲ್ ಸೆಂಚೂರಿಯನ್ ಆರ್.ಸಮರ್ಥ್ ಕೇವಲ 21 ರನ್'ಗೆ ಔಟಾದರು. ಮಾಯಾಂಕ್ ಅಗರ್ವಾಲ್ ಮತ್ತು ರಾಬಿನ್ ಉತ್ತಪ್ಪ ಕೂಡ ಅಲ್ಪಮೊತ್ತಕ್ಕೆ ನಿರ್ಗಮಿಸಿದರು. ಆದರೆ, ಕರುಣ್ ನಾಯರ್ ಮತ್ತು ಮೀರ್ ಕೌನೇನ್ ಅಬ್ಬಾಸ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರಿಬ್ಬರು 4ನೇ ವಿಕೆಟ್'ಗೆ 95 ರನ್'ಗಳ ಮುರಿಯದ ಜೊತೆಯಾಟದಲ್ಲಿ ಭಾಗಿಯಾದರು.

ಕರ್ನಾಟಕ ತನ್ನ ಮುಂದಿನ ಹಾಗೂ ಎರಡನೇ ಪಂದ್ಯವನ್ನು ದಿಲ್ಲಿ ವಿರುದ್ಧ ಆಡಲಿದೆ. ಆ  ಪಂದ್ಯ ಅಕ್ಟೋಬರ್ 20-23ರಂದು ನಡೆಯಲಿದೆ.

ಸ್ಕೋರು ವಿವರ:

ಕರ್ನಾಟಕ ಮೊದಲ ಇನ್ನಿಂಗ್ಸ್ 172 ಓವರ್ 577/6(ಡಿಕ್ಲೇರ್)
(ರಾಮಕುಮಾರ್ ಸಮರ್ಥ್ 235, ಸ್ಟುವರ್ಟ್ ಬಿನ್ನಿ 97, ಕರುಣ್ ನಾಯರ್ 74, ಕೌನೇನ್ ಅಬ್ಬಾಸ್ 55, ಸಿಎಂ ಗೌತಮ್ ಅಜೇಯ 36, ಶ್ರೇಯಸ್ ಗೋಪಾಲ್ ಅಜೇಯ 21 ರನ್ - ಆಶೀಷ್ ಕುಮಾರ್ 78/3, ಶಹಬಾಜ್ ನದೀಮ್ 199/2)

ಜಾರ್ಖಂಡ್ ಮೊದಲ ಇನ್ನಿಂಗ್ಸ್ 115.1 ಓವರ್ 374 ರನ್ ಆಲೌಟ್
(ಇಶಾನ್ ಕಿಶನ್ ಅಜೇಯ 159, ಸೌರಭ್ ತಿವಾರಿ 91, ಆನಂದ್ ಸಿಂಗ್ 45, ಶಹಬಾಜ್ ನದೀಮ್ 28 ರನ್ - ಕೆ. ಗೌತಮ್ 97/3, ಶ್ರೇಯಸ್ ಗೋಪಾಲ್ 114/3, ಅಭಿಮನ್ಯು ಮಿಥುನ್ 61/2)

ಕರ್ನಾಟಕ ಎರಡನೇ ಇನ್ನಿಂಗ್ಸ್ 53.4 ಓವರ್ 162/3
(ಕರುಣ್ ನಾಯರ್ ಅಜೇಯ 54, ಮೀರ್ ಕೌನೇನ್ ಅಬ್ಬಾಸ್ ಅಜೇಯ 51, ಆರ್.ಸಮರ್ಥ್ 21, ಮಾಯಾಂಕ್ ಅಗರ್ವಾಲ್ 19 ರನ್ - ಸಮರ್ ಖಾದ್ರಿ 62/3)

Follow Us:
Download App:
  • android
  • ios