ಕರ್ನಾಟಕದ ಜ್ಯಾಕ್ ಈಗ ಹೈದರಾಬಾದ್'ನ ಹೊಸ ಕೋಚ್
ಜೆ.ಅರುಣ್ ಕುಮಾರ್ ಅವರು ಐದು ವರ್ಷ ಕಾಲ ಕರ್ನಾಟಕ ಕ್ರಿಕೆಟ್ ತಂಡದ ಮುಖ್ಯಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಅವರ ಗರಡಿಯಲ್ಲಿ ಕರ್ನಾಟಕ ತಂಡವು ಬಹುತೇಕ ಎಲ್ಲಾ ದೇಶೀ ಟೂರ್ನಿಗಳನ್ನು ಜಯಿಸಿದೆ. ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ, ಇರಾನಿ ಕಪ್ ಟೂರ್ನಿಗಳನ್ನ ಕರ್ನಾಟಕಕ್ಕೆ ಗೆಲ್ಲಿಸಿಕೊಟ್ಟಿದ್ದಾರೆ.
ಹೈದರಾಬಾದ್(ಆ. 28): ಕರ್ನಾಟಕ ಮಾಜಿ ಕ್ಯಾಪ್ಟನ್ ಹಾಗೂ ಕ್ರಿಕೆಟಿಗ ಜೆ ಅರುಣ್ ಕುಮಾರ್ ಅವರು ಹೈದರಾಬಾದ್ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದಾರೆ. 2017-18ನೇ ಋತುವಿನಲ್ಲಿ ಹೈದರಾಬಾದ್ ತಂಡಕ್ಕೆ ಕರ್ನಾಟಕದ ಜ್ಯಾಕ್ ಮಾರ್ಗದರ್ಶನ ಮಾಡಲಿದ್ದಾರೆ. ಭರತ್ ಅರುಣ್ ಅವರು ಈವರೆಗೆ ಹೈದರಾಬಾದ್ ತಂಡದ ಕೋಚ್ ಆಗಿದ್ದರು. ಭಾರತ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ಭರತ್ ಅರುಣ್ ಆಯ್ಕೆಯಾದ ಹಿನ್ನೆಲೆಯಲ್ಲಿ ಕೋಚ್ ಸ್ಥಾನ ತೆರವಾಗಿತ್ತು. ಈಗ ಜೆ ಅರುಣ್ ಕುಮಾರ್ ಅವರು ಭರತ್ ಅರುಣ್ ಸ್ಥಾನವನ್ನು ತುಂಬಿದ್ದಾರೆ.
ಕರ್ನಾಟಕದ ನೆನಪು:
ತಾವು ಕೋಚ್ ಆಗಿರುವ ಹೈದರಾಬಾದ್ ತಂಡವನ್ನು ಅರುಣ್ ಕುಮಾರ್ ಕರ್ನಾಟಕ ತಂಡಕ್ಕೆ ಹೋಲಿಕೆ ಮಾಡಿದ್ದಾರೆ. ತಾವು ಕರ್ನಾಟಕ ಕ್ರಿಕೆಟ್ ತಂಡದ ಕೋಚ್ ಆಗಿದ್ದಾಗ ಆಟಗಾರರಲ್ಲಿದ್ದ ಹಸಿವು ಈಗ ಹೈದಬಾದ್ ಆಟಗಾರರಲ್ಲಿ ಕಾಣುತ್ತಿದ್ದೇನೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೆಎಲ್ ರಾಹುಲ್, ಕರುಣ್ ನಾಯರ್ ಮತ್ತು ಮನೀಶ್ ಪಾಂಡೆಯಂತಹ ಯುವ ಆಟಗಾರರು ಕರ್ನಾಟಕ ತಂಡದಲ್ಲಿದ್ದರು. ಈಗ ಹೈದರಾಬಾದ್'ನಲ್ಲೂ ಅಂತ ಆಟಗಾರರಿದ್ದಾರೆ. ಮೊಹಮ್ಮದ್ ಸಿರಾಜ್, ತನ್ಮಯ್ ಅಗರ್ವಾಲ್ ಅವರು ಐಪಿಎಲ್ ಟೂರ್ನಿಗೆ ಅಡಿ ಇರಿಸಿದ್ದಾರೆ. ಒಟ್ಟಾರೆ ಹೈದರಾಬಾದ್ ಸಾಕಷ್ಟು ಪ್ರತಿಭೆಗಳಿಂದ ತುಂಬಿತುಳುಕುತ್ತಿದೆ ಎಂದು ಜ್ಯಾಕ್ ಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೆ.ಅರುಣ್ ಕುಮಾರ್ ಅವರು ಐದು ವರ್ಷ ಕಾಲ ಕರ್ನಾಟಕ ಕ್ರಿಕೆಟ್ ತಂಡದ ಮುಖ್ಯಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಅವರ ಗರಡಿಯಲ್ಲಿ ಕರ್ನಾಟಕ ತಂಡವು ಬಹುತೇಕ ಎಲ್ಲಾ ದೇಶೀ ಟೂರ್ನಿಗಳನ್ನು ಜಯಿಸಿದೆ. ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ, ಇರಾನಿ ಕಪ್ ಟೂರ್ನಿಗಳನ್ನ ಕರ್ನಾಟಕಕ್ಕೆ ಗೆಲ್ಲಿಸಿಕೊಟ್ಟಿದ್ದಾರೆ.