ಇರಾನಿ ಕಪ್: ವಿದರ್ಭ ಗೆಲುವಿಗೆ ಬೇಕು 243 ರನ್!
ಇರಾನಿ ಕಪ್ ಅಂತಿಮ ದಿನಕ್ಕೆ ಕಾಲಿಟ್ಟಿದೆ. ಗೆಲುವು ಯಾರಿಗೆ ಅನ್ನೋ ಕುತೂಹಲ ಇದೀಗ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಶೇಷ ಭಾರತ ನೀಡಿರುವ 280 ರನ್ ಗುರಿ, ವಿದರ್ಭ ತಂಡಕ್ಕೆ ಸವಾಲಾಗಿ ಪರಿಣಮಿಸಿದರೂ, ದಿಗ್ಗಜ ಆಟಗಾರರನ್ನೊಳಗೊಂಡಿರುವ ತಂಡಕ್ಕೆ ಕಷ್ಟವೇನಲ್ಲ.
ನಾಗ್ಪುರ(ಫೆ.16): ಹಾಲಿ ರಣಜಿ ಚಾಂಪಿಯನ್ ವಿದರ್ಭ ಸತತ 2ನೇ ವರ್ಷ ಇರಾನಿ ಟ್ರೋಫಿ ಗೆಲುವಿನ ಕಣ್ಣಿಟ್ಟಿದೆ. ಶೇಷ ಭಾರತ (ರೆಸ್ಟ್ ಆಫ್ ಇಂಡಿಯಾ) ನೀಡಿರುವ 280 ರನ್ ಗುರಿ ಬೆನ್ನತ್ತಿರುವ ವಿದರ್ಭ 4ನೇ ದಿನದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 37 ರನ್ ಗಳಿಸಿದ್ದು, ಗೆಲುವಿಗೆ ಇನ್ನೂ 243 ರನ್ ಅಗತ್ಯವಿದೆ.
ಇದನ್ನೂ ಓದಿ: 2019ರ ವಿಶ್ವಕಪ್ಗೆ 18 ಟೀಂ ಇಂಡಿಯಾ ಕ್ರಿಕೆಟಿಗರ ಪಟ್ಟಿ ರೆಡಿ!
4ನೇ ದಿನವಾದ ಶುಕ್ರವಾರ ಶೇಷ ಭಾರತ 3 ವಿಕೆಟ್ ನಷ್ಟಕ್ಕೆ 374 ರನ್ ಗಳಿಸಿ ತನ್ನ 2ನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಹನುಮ ವಿಹಾರಿ ಅಮೋಘ 180 ರನ್ಗಳ ಆಟವಾಡಿದರು. ನಾಯಕ ಅಜಿಂಕ್ಯ ರಹಾನೆ 87, ಶ್ರೇಯಸ್ ಅಯ್ಯರ್ 61 ರನ್ ಗಳಿಸಿದರು. 2ನೇ ಇನ್ನಿಂಗ್ಸ್ ಆರಂಭಿಸಿದ ವಿದರ್ಭ, ನಾಯಕ ಫೈಯಾಜ್ ಫೈಜಲ್ (0) ವಿಕೆಟ್ ಕಳೆದುಕೊಂಡಿತು. ಸಂಜಯ್ (17), ಅಥರ್ವ (16) ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ: ಭಾರತ-ಆಸ್ಟ್ರೇಲಿಯಾ ಬೆಂಗಳೂರು ಟಿ20 ಪಂದ್ಯ-ಎಲ್ಲಿ ಸಿಗಲಿದೆ ಟಿಕೆಟ್?
ಹನುಮ ಹೊಸ ದಾಖಲೆ: ಇರಾನಿ ಟ್ರೋಫಿಯಲ್ಲಿ ಸತತ 3 ಇನ್ನಿಂಗ್ಸ್ಗಳಲ್ಲಿ ಶತಕ ಬಾರಿಸಿದ ಮೊದಲ ಆಟಗಾರ ಎನ್ನುವ ದಾಖಲೆಯನ್ನು ಹನುಮ ವಿಹಾರಿ ಬರೆದಿದ್ದಾರೆ. ಕಳೆದ ವರ್ಷ ಇರಾನಿ ಕಪ್ ಪಂದ್ಯದಲ್ಲಿ 183 ರನ್ ಗಳಿಸಿದ್ದ ವಿಹಾರಿ, ಈ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 114 ರನ್ ಬಾರಿಸಿದ್ದರು.
ಸ್ಕೋರ್: ಶೇಷ ಭಾರತ 330 ಹಾಗೂ 374/3 ಡಿ., ವಿದರ್ಭ 425 ಹಾಗೂ 37/1