Asianet Suvarna News Asianet Suvarna News

ಐಪಿಎಲ್ ಮಾಲೀಕರ ವಿವಾದಾತ್ಮಕ 'ಆಟ'ಗಳು..!

ಪ್ರಸಕ್ತ ಸಾಲಿನ ಐಪಿಲ್ ಪಂದ್ಯಾವಳಿ ಇನ್ನೇನು ಕೊನೆಯ ಹಂತಕ್ಕೆ ಬಂದು ತಲುಪಿದೆ. ನಾಳೆ ಫೈನಲ್ ಪಂದ್ಯ ನಡೆಯಲಿದ್ದು, ಗೆದ್ದ ತಂಡ 2018ರ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಲಿದೆ. ಆದರೆ ಪ್ರತಿ ಐಪಿಎಲ್ ತಂಡಕ್ಕೂ ಒಬ್ಬೊಬ್ಬರು ಮಾಲೀಕರಿದ್ದು, ಬಹುತೇಕ ಮಾಲೀಕರು ತಮ್ಮ ತಂಡದ ಆಟಕ್ಕಿಂತ ಹೆಚ್ಚಾಗಿ ತಾವು ಸೃಷ್ಟಿಸುವ ವಿವಾದಗಳಿಂದಲೇ ಸುದ್ದಿಯಲ್ಲಿರುತ್ತಾರೆ

IPL's Controversial Bosses

ಪ್ರಸಕ್ತ ಸಾಲಿನ ಐಪಿಲ್ ಪಂದ್ಯಾವಳಿ ಇನ್ನೇನು ಕೊನೆಯ ಹಂತಕ್ಕೆ ಬಂದು ತಲುಪಿದೆ. ನಾಳೆ ಫೈನಲ್ ಪಂದ್ಯ ನಡೆಯಲಿದ್ದು, ಗೆದ್ದ ತಂಡ 2018ರ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಲಿದೆ. ಆದರೆ ಪ್ರತಿ ಐಪಿಎಲ್ ತಂಡಕ್ಕೂಒಬ್ಬೊಬ್ಬರು ಮಾಲೀಕರಿದ್ದು, ಬಹುತೇಕ ಮಾಲೀಕರು ತಮ್ಮ ತಂಡದ ಆಟಕ್ಕಿಂತ ಹೆಚ್ಚಾಗಿ ತಾವು ಸೃಷ್ಟಿಸುವ ವಿವಾದಗಳಿಂದಲೇ ಸುದ್ದಿಯಲ್ಲಿರುತ್ತಾರೆ.

ಕೆಕೆಆರ್ ತಂಡದ ಮಾಲೀಕ, ಬಾಲಿವುಡ್ ಬಾದ್ ಷಾ ಶಾರೂಖ್ ಖಾನ್, ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾ, ಆರ್‌ಸಿಬಿಯ ಮಾಜಿ ಒಡೆಯ ವಿಜಯ್ ಮಲ್ಯ, ರಾಜಸ್ಥಾನ ರಾಯಲ್ಸ್ ತಂಡದ ರಾಜ್ ಕುಂದ್ರಾ, ಸಿಎಸ್‌ಕೆ ಯ ಎನ್. ಶ್ರೀನಿವಾಸನ್ ಹೀಗೆ ಹಲವು ಸಿರಿವಂತ ಒಡೆಯರು ವಿವಿಧ ಐಪಿಎಲ್ ಪಂದ್ಯಾವಳಿಗಳಲ್ಲಿ ಸಾಕಷ್ಟು ವಿವಾದ ಸೃಷ್ಟಿಸಿದ್ದಾರೆ. ಯಾವ ತಂಡದ ಮಾಲೀಕರು ಯಾವ್ಯಾವ ವಿವಾದ ಸೃಷ್ಟಿಸಿದ್ದಾರೆ?

'ಪ್ರೀತಿ' ಮರೆತ ಜಿಂಟಾ

ಈ ವರ್ಷದ ಟೂರ್ನಿಯಲ್ಲಿ ಪಂಜಾಬ್ ತಂಡದ ಕಳಪೆ ಪ್ರದರ್ಶನದ ಬಳಿಕ ಪ್ರೀತಿ ಜಿಂಟಾ ತಂಡದ ಮೆಂಟರ್ ವಿರೇಂದ್ರ ಸೆಹ್ವಾಗ್ ವಿರುದ್ದ ಗರಂ ಆಗಿದ್ದಾರೆ ಎಂಬ ಗುಸುಗುಸು ಕೇಳಿತ್ತು. ರಾಜಸ್ಥಾನ್ ತಂಡದ ವಿರುದ್ದ ಸೋಲುಂಡ ಬಳಿಕ ಪ್ರೀತಿ ಅವರು ಸೆಹ್ವಾಗ್ ಅವರ ಯೋಜನೆಗಳ ಕುರಿತು ಅಪಸ್ವರ ಎತ್ತಿದ್ದರೆಂದು ವರದಿಯಾಗಿತ್ತು.

ಕಿಂಗ್ ಖಾನ್ ಕಿರಿ ಕಿರಿ

ಕೆಕೆಆರ್ ಬಾಸ್ ಕಿಂಗ್ ಖಾನ್ 2012ರ ಟೂರ್ನಿಯಲ್ಲಿ ಮುಂಬೈನ ವಾಂಖಡೇ ಕ್ರೀಡಾಂಗಣದ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿ ಹಲವರ ಕಂಗೆಣ್ಣಿಗೆ ಗುರಿಯಾಗಿದ್ದರು.  ಇದೇ ಕಾರಣಕ್ಕೆ ವಾಂಖಡೇ ಆಡಳಿತ ಮಂಡಳಿ ಖಾನ್ ಅವರಿಗೆ 5 ವರ್ಷಗಳ ಕಾಲ ಕ್ರೀಡಾಂಗಣ ಪ್ರವೇಶವನ್ನು ನಿರ್ಬಂಧಿಸಿತ್ತು. ಆದರೆ 2016ರಲ್ಲಿ ಈ ನಿರ್ಬಂಧವನ್ನು ಹಿಂಪಡೆದಿತ್ತು.

ಮೌಲ್ಯ ಮರೆತ ಮಲ್ಯ

ಆರ್‌ಸಿಬಿ ಮಾಲೀಕರಾಗಿದ್ದ ವಿಜಯ್ ಮಲ್ಯ, ತನ್ನದೇ ತಂಡದ ಆಟಗಾರರಿಗೆ ಹಲವು ರೀತಿಯ ಕಿರುಕುಳ ನೀಡುತ್ತಿದ್ದರು ಎಂಬುದು ಗುಟ್ಟಾಗಿ ಉಳಿದಿಲ್ಲ. ತಂಡದ ಸಿಇಒ ಆಗಿದ್ದ ಚಾರು ಶರ್ಮ ಈ ಕುರಿತು ಅಪಸ್ವರ ಎತ್ತಿ ಹುದ್ದೆ ಕಳೆದುಕೊಂಡಿದ್ದರು. ಮಧ್ಯರಾತ್ರಿ ಆಟಗಾರರನ್ನು ಎಬ್ಬಿಸಿ ಸಭೆ ನಡೆಸುತ್ತಿದ್ದ ಮಲ್ಯ, ಕೆಲವೊಮ್ಮೆ ವಿಮಾನ ನಿಲ್ದಾಣದಲ್ಲೇ ಸಭೆ ಕರೆದು ಕಿರಿಕಿರಿ ಉಂಟು ಮಾಡುತ್ತಿದ್ದರಂತೆ.

ಮೌಢ್ಯರಾಗಿದ್ದ ಶ್ರೀನಿವಾಸನ್

ಹಾಗೆ ನೋಡಿದರೆ ಸಿಎಸ್‌ಕೆ ತಂಡದ ಮಾಲೀಕ ಎನ್. ಶ್ರೀನಿವಾಸನ್ ಐಪಿಎಲ್ ಮಾಲೀಕರಲ್ಲೇ ಅತ್ಯಂತ ಯೋಜಿತ ಮತ್ತು ಅದೃಷ್ಟವಂತ ಮಾಲೀಕ ಎಂದು ಪರಿಗಣಿಸಲ್ಪಿಟ್ಟಿದ್ದರು. ಆದರೆ ಕೆಲವು ಮೂಢನಂಬಿಕೆಗಳ ದಾಸರಾಗಿದ್ದ ಅವರು, ತಂಡಕ್ಕೆ ಕೆಲವೊಮ್ಮೆ ಕಿರಿಕಿರಿ ಉಂಟು ಮಾಡುತ್ತಿದ್ದರು. ಅಲ್ಲದೇ ಬೆಟ್ಟಿಂಗ್ ಆರೋಪಕ್ಕೆ ಗುರಿಯಾಗಿ ತಂಡ ನಿಷೇಧಕ್ಕೊಳಪಟ್ಟಿದ್ದೂ ಶ್ರೀನಿವಾಸನ್ ಜನಪ್ರಿಯತೆಗೆ ಕುತ್ತು ತಂದಿತ್ತು.

ಕುಂದ್ರಾ ಜನಪ್ರಿಯತೆ ಕುಂದಿದ್ದೆಲ್ಲಿ?

ಆರ್‌ಆರ್ ಮಾಲೀಕ ಹಾಗೂ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಕೂಡ ವಿವಾದಗಳ ಸರಮಾಲೆ ಸೃಷ್ಟಿಸಿದವರೇ. ಮೊದಲ ಐಪಿಎಲ್ ಟೂರ್ನಿ ಗೆದ್ದು ಬೀಗುತ್ತಿದ್ದ ಕುಂದ್ರಾ, ನಂತರ ಸ್ಪಾಟ್ ಫಿಕ್ಸಿಂಗ್ ಆರೋಪಕ್ಕೆ ಬಲಿಯಾಗಬೇಕಾಯಿತು. ಅಷ್ಟೇ ಅಲ್ಲದೇ ದೆಹಲಿ ಪೊಲೀಸರ ಮುಂದೆ ತಪ್ಪೊಪ್ಪಿಗೆ ಹೇಳಿಕೆಯನ್ನೂ ನೀಡಿದ್ದರು. ಇದರ ಪರಿಣಾಮವಾಗಿ ಆರ್‌ಆರ್ ತಂಡವನ್ನೂ ಐಪಿಎಲ್‌ನಿಂದ ಹೊರ ಹಾಕಲಾಗಿತ್ತು.

Follow Us:
Download App:
  • android
  • ios