ಟೀಂ ಇಂಡಿಯಾವನ್ನ ಅಜಿಂಕ್ಯ ರಹಾನೆ ಕಾಪಾಡಬೇಕು!
ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯ ಇದೀಗ ಭಾರತೀಯ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದೆ. 4ನೇ ದಿನದಾಟದಲ್ಲಿ ಉಭಯ ತಂಡದ ಹೋರಾಟ ಹೇಗಿದೆ? ಇಲ್ಲಿದೆ ಅಪ್ಡೇಟ್ಸ್.
ಸೌತಾಂಪ್ಟನ್(ಸೆ.02): ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ 245 ರನ್ ಟಾರ್ಗೆಟ್ ಚೇಸ್ ಮಾಡುತ್ತಿರುವ ಟೀಂ ಇಂಡಿಯಾವನ್ನ ಅಜಿಂಕ್ಯ ರಹಾನೆ ಕಾಪಾಡಬೇಕಿದೆ. ಈಗಾಗಲೇ 6 ವಿಕೆಟ್ ಕಳೆದುಕೊಂಡಿರುವ ಭಾರತಕ್ಕೆ ರಹಾನೆ ಅರ್ಧಶತಕ ಸಿಡಿಸಿ ಚೇತರಿಕೆ ನೀಡಿದ್ದಾರೆ.
2ನೇ ಇನ್ನಿಂಗ್ಸ್ ಆರಂಭದಲ್ಲೇ ಟೀಂ ಇಂಡಿಯಾ ಕೆಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತು. ರಾಹುಲ್ ಶೂನ್ಯ ಸುತ್ತಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿ ಮಿಂಚಿದ್ದ ಚೇತೇಶ್ವರ್ ಪೂಜಾರ 2ನೇ ಇನ್ನಿಂಗ್ಸ್ನಲ್ಲಿ ಕೇವಲ 5 ರನ್ ಸಿಡಿಸಿ ಔಟಾದರು.
3 ಬೌಂಡರ್ ಸಿಡಿಸಿ ಉತ್ತಮ ಪ್ರದರ್ಶನ ನೀಡೋ ಸೂಚನೆ ನೀಡಿದ ಶಿಖರ್ ಧವನ್ 17 ರನ್ ಸಿಡಿಸಿ ಔಟಾದರು. ಆದರೆ ನಾಯಕ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ತಂಡಕ್ಕೆ ಚೇತರಿಕೆ ನೀಡಿದರು.
ಅದ್ಬುತ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿ ಆಸರೆಯಾದರು. ಕೊಹ್ಲಿಗೆ ಅಜಿಂಕ್ಯ ರಹಾನೆ ಕೂಡ ಉತ್ತಮ ಸಾಥ್ ನೀಡಿದರು. ಆದರೆ ಹಾಫ್ ಸೆಂಚುರಿ ಸಿಡಿಸಿದ ಬೆನ್ನಲ್ಲೇ ಕೊಹ್ಲಿ ವಿಕೆಟ್ ಪತನಗೊಂಡಿತು. ಕೊಹ್ಲಿ 58 ರನ್ ಸಿಡಿಸಿ ಔಟಾದರು. ಹಾರ್ದಿಕ್ ಪಾಂಡ್ಯ ಶೂನ್ಯ ಸುತ್ತಿದರು.
ದಿಟ್ಟ ಹೋರಾಟ ನೀಡಿದ ಅಜಿಂಕ್ಯ ರಹಾನೆ ಹಾಫ್ ಸೆಂಚುರಿ ಸಿಡಿಸಿದ್ದಾರೆ. ಆದರೆ ರಿಷಬ್ ಪಂತ್ ಮತ್ತೆ ನಿರಾಸೆ ಅನುಭವಿಸಿದರು. ಪಂತ್ 18 ರನ್ ಸಿಡಿಸಿ ಔಟಾದರು. ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 150 ರನ್ ಸಿಡಿಸಿದೆ. ಗೆಲುವಿಗೆ ಇನ್ನು 95 ರನ್ ಅವಶ್ಯಕತೆ ಇದೆ.