ಭಾರತ-ಆಸ್ಟ್ರೇಲಿಯಾ 3ನೇ ಟೆಸ್ಟ್; ಧೋನಿಯ ತವರಿನಲ್ಲಿ ವಿರಾಟ್ ಪಡೆಗೆ ಮೇಲುಗೈ ಕನಸು
ಕಾಂಗರೂಗಳ ಸ್ಪಿನ್ನರ್'ಗಳು ತಾವೆಂಥ ಡೇಂಜರಸ್ ಎಂಬುದನ್ನು ಕಳೆದ ಎರಡೂ ಪಂದ್ಯಗಳಲ್ಲಿ ಸಾಬೀತುಪಡಿಸಿದ್ದಾರೆ. ಹೀಗಾಗಿ, ಭಾರತದ ಬ್ಯಾಟುಗಾರರು ಬಹಳ ಜಾಗರೂಕವಾಗಿ ಬ್ಯಾಟಿಂಗ್ ನಡೆಸಬೇಕು.
ರಾಂಚಿ(ಮಾ. 16): ತುರುಸಿನ ಪೈಪೋಟಿಯಿಂದ ಕೂಡಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಸರಣಿಯ ಮೂರನೇ ಪಂದ್ಯ ಇಂದು ಆರಂಭಗೊಳ್ಳುತ್ತಿದೆ. ಮೊದಲೆರಡು ಪಂದ್ಯಗಳಲ್ಲಿ ಸಮಾನ ಗೌರವ ಪಡೆದಿರುವ ಎರಡೂ ತಂಡಗಳು ಸರಣಿಯಲ್ಲಿ ಮುನ್ನಡೆ ಗಳಿಸಲು ತವಕಿಸುತ್ತಿವೆ. ತವರಿನಲ್ಲಿ ಎಂದೂ ಹುಲಿಗಳಾಗಿರುವ ಭಾರತ ತಂಡ ಈ ಬಾರಿ ಕಾಂಗರೂಗಳಿಂದ ತೀವ್ರ ಪ್ರತಿರೋಧ ಎದುರಿಸುತ್ತಿದೆ. ಮೊದಲ ಪಂದ್ಯದಲ್ಲಿ ಸೋತು ಎರಡನೇ ಪಂದ್ಯದಲ್ಲಿ ಪುಟಿದೆದ್ದು ರೋಚಕ ಗೆಲುವು ದಾಖಲಿಸಿದ ಕೊಹ್ಲಿ ಪಡೆಗೆ ಮೂರನೇ ಪಂದ್ಯ ಸತ್ವ ಪರೀಕ್ಷೆಯಾಗಲಿದೆ.
ಟೀಮ್'ನಲ್ಲಿ ಸ್ವಲ್ಪ ಬದಲಾವಣೆ?
ಈ ಸರಣಿಯಲ್ಲಿ ಭಾರತಕ್ಕೆ ಹೆಚ್ಚಾಗಿ ಕಾಡಿದ್ದು ಬ್ಯಾಟಿಂಗ್ ಸಮಸ್ಯೆಯೇ. ಕಳೆದ ಪಂದ್ಯದಲ್ಲಿ ವಿಫಲರಾದ ಅಭಿನವ್ ಮುಕುಂದ್ ಅವರ ಬದಲು ಮುರಳಿ ವಿಜಯ್ ಅವರನ್ನು ಮರಳಿ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಹಾಗೆಯೇ, ಕರುಣ್ ನಾಯರ್'ಗೂ ಕೊಕ್ ಕೊಡುವ ಸಾಧ್ಯತೆ ಇದೆ. ಹಾಗೇನಾದರೂ ಆದರೆ, ಕರುಣ್ ಸ್ಥಾನಕ್ಕೆ ಆಲ್'ರೌಂಡರ್ ಜಯಂತ್ ಯಾದವ್ ಅವರನ್ನು ಕರೆತರಲಾಗುತ್ತದೆ. ಮೇಲಾಗಿ, ರಾಂಚಿ ಪಿಚ್ ಸ್ಪಿನ್ನರ್'ಗೆ ಸಹಾಯವಾಗಲಿರುವುದರಿಂದ ಜಯಂತ್ ಯಾದವ್ ಸೇರ್ಪಡೆ ಬಹುತೇಕ ಖಚಿತ.
ರಾಂಚಿ ಪಿಚ್:
ಮೇಲೆ ತಿಳಿಸಿದಂತೆ, ರಾಂಚಿಯಲ್ಲಿರುವುದು ಸ್ಪಿನ್ನರ್'ಗಳಿಗೆ ಹುಚ್ಚಾಪಟ್ಟೆ ಸಹಾಯವಾಗುವಂತಹ ಪಿಚ್. ಮೊದಲೆರಡು ದಿನ ಮೌನವಾಗಿರುವ ಈ ಪಿಚ್ ಮೂರನೇ ದಿನದಿಂದ ಸ್ಪಿನ್ನರ್'ಗಳ ಬತ್ತಳಿಕೆಗಳಿಗೆ ಸಾಕಷ್ಟು ಆಯುಧಗಳನ್ನು ಒದಗಿಸಲಿದೆ. ಈ ಸ್ಪಿನ್ ಪಿಚ್'ನ್ನು ಯಾವ ತಂಡದ ಸ್ಪಿನ್ನರ್'ಗಳು ಸಮರ್ಥವಾಗಿ ಉಪಯೋಗಿಸುತ್ತಾರೆ ಎಂದು ಕಾದುನೋಡಬೇಕು. ಕಾಂಗರೂಗಳ ಸ್ಪಿನ್ನರ್'ಗಳು ತಾವೆಂಥ ಡೇಂಜರಸ್ ಎಂಬುದನ್ನು ಕಳೆದ ಎರಡೂ ಪಂದ್ಯಗಳಲ್ಲಿ ಸಾಬೀತುಪಡಿಸಿದ್ದಾರೆ. ಹೀಗಾಗಿ, ಭಾರತದ ಬ್ಯಾಟುಗಾರರು ಬಹಳ ಜಾಗರೂಕವಾಗಿ ಬ್ಯಾಟಿಂಗ್ ನಡೆಸಬೇಕು.
ಸಂಭಾವ್ಯ ಆಟಗಾರರು:
ಭಾರತ ತಂಡ:
ವಿರಾಟ್ ಕೊಹ್ಲಿ(ನಾಯಕ), ಕೆಎಲ್ ರಾಹುಲ್, ಮುರಳಿ ವಿಜಯ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಕರುಣ್ ನಾಯರ್/ಜಯಂತ್ ಯಾದವ್, ವೃದ್ಧಿಮಾನ್ ಸಾಹಾ, ಆರ್.ಅಶ್ವಿನ್, ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಉಮೇಶ್ ಯಾದವ್.