ಮುಂಬೈ(ಸೆ.29): ಗೌತಮ್ ಗಂಭೀರ್ ಎರಡು ವರ್ಷದ ನಂತರ ಟೀಮ್ ಇಂಡಿಯಾಗ ಕಮ್​ಬ್ಯಾಕ್ ಮಾಡಿದ್ದಾರೆ. ಗೌತಿ ಮತ್ತೆ ತಂಡಕ್ಕೆ ವಾಪಾಸ್ ಆಗಿದ್ದಾರೆ. ವೀರೇಂದ್ರ ಸೆಹ್ವಾಗ್ ಹಾದಿಯಲ್ಲಿ ಗೌತಮ್ ಗಂಭೀರ್ ಸಾಗ್ತಾರೆ ಅನ್ನಲಾಗಿತ್ತು. ಆದರೆ ಛಲಬಿಡದ ಛಲದಂಕ ಮಲ್ಲ ಗಂಭೀರ್, ಮಾತ್ರ ಕ್ರಿಕೆಟ್​ ಬಿಡಲಿಲ್ಲ.

Add Asianetnews Kannada as a Preferred SourcegooglePreferred

ಟೀಮ್ ಇಂಡಿಯಾಗೆ ಆಯ್ಕೆ ಮಾಡದಿದ್ದರೇನಂತೆ ಡೊಮೆಸ್ಟಿಕ್​ನಲ್ಲಿ ರನ್ ಹೊಳೆ ಹರಿಸಿದ್ರು. ಅದೇ ಫರ್ಫಮೆನ್ಸ್ ಈಗ ಅವರನ್ನ ಟೀಮ್ ಇಂಡಿಯಾಗೆ ಮರು ಆಯ್ಕೆ ಮಾಡಿದೆ. ಅದು ಬರೋಬ್ಬರಿ ಎರಡು ವರ್ಷದ ನಂತರ.ಕನ್ನಡಿಗ ಕೆಎಲ್ ರಾಹುಲ್ ಗಾಯಾಳುವಾಗಿ ನ್ಯೂಜಿಲೆಂಡ್ ವಿರುದ್ಧದ ಉಳಿದ ಎರಡು ಟೆಸ್ಟ್​​ಗಳನ್ನ ಆಡ್ತಿಲ್ಲ. ರಾಹುಲ್ ಬದಲಿಗೆ ಗಂಭೀರ್​ನನ್ನ ಆಯ್ಕೆ ಮಾಡಲಾಗಿದೆ.

ದೇಸಿ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹಿನ್ನಲೆಯಲ್ಲಿ ಗೌತಿಗೆ ಹೊಸ ಆಯ್ಕೆ ಸಮಿತಿ ಮಣೆ ಹಾಕಿದೆ. ಅಷ್ಟು ಮಾತ್ರವಲ್ಲ, ತವರಿನಲ್ಲಿ ಸುದೀರ್ಘ ಟೆಸ್ಟ್​ ಸರಣಿ ಆಡುವುದರಿಂದ ಅನುಭವಿ ಆಟಗಾರನ ಅವಶ್ಯಕತೆ ಟೀಮ್ ಇಂಡಿಯಾಗಿದೆ. ಇದು ಸಹ ಗೌತಿ ಆಯ್ಕೆಗೆ ಪ್ಲಸ್ ಪಾಯಿಂಟ್ ಆಯ್ತು. ಹೀಗಾಗಿ 2014ರಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆ ಟೆಸ್ಟ್​ ಆಡಿದ್ದ ಗಂಭೀರ್, ಮತ್ತೆ ಟೆಸ್ಟ್ ಟೀಮ್​ಗೆ ಆಯ್ಕೆಯಾದರು.

ಗೌತಿ ಏನೋ ಟೀಮ್​ಗೆ ಸೆಲೆಕ್ಟ್ ಆಗಿದ್ದಾರೆ. ಆದರೆ ಅವರು 11ರ ಬಳಗದಲ್ಲಿ ಇರ್ತಾರಾ ಅನ್ನೋ ಪ್ರಶ್ನೆ ಎದ್ದಿದೆ. ಒಳ್ಳೆ ಫಾರ್ಮ್​ನಲ್ಲಿರುವ ಮುರಳಿ ವಿಜಯ್ ಕೈಬಿಡುವ ಆಗಿಲ್ಲ. ಶಿಖರ್ ಧವನ್ ಮತ್ತು ಗಂಭೀರ್ ನಡುವೆ ಈಗ ಫೈಟ್ ಬಿದ್ದಿದೆ. ಇಬ್ಬರೂ ಡೆಲ್ಲಿ ಪ್ಲೇಯರ್ಸ್. ಕ್ಯಾಪ್ಟನ್ ವಿರಾಟ್ ಕೊಹ್ಲಿ ಸಹ ಡೆಲ್ಲಿ ಆಟಗಾರನೇ. ಕೊಹ್ಲಿಗೆ ಧವನ್ ಆತ್ಮೀಯ ಸ್ನೇಹಿತ. ಇತ್ತ ಕೊಹ್ಲಿ ಬೆಳೆಸಿದ್ದು ಗೌತಿ. ಒಂಡೇ ಮ್ಯಾಚ್​ನಲ್ಲಿ ತಮಗೆ ಬಂದಿದ್ದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನ ವಿರಾಟ್​ಗೆ ನೀಡಿದ್ದರು ಗಂಭೀರ್. ನನಗಿಂತ ವಿರಾಟ್ ಚೆನ್ನಾಗಿ ಆಡಿದ್ದ ಅನ್ನೋ ಕಾರಣಕ್ಕೆ. ಈಗ ಯಾರನ್ನ ಆಯ್ಕೆ ಮಾಡಿಕೊಳ್ಳೋದು ಅನ್ನೋ ಸಂಕಷ್ಟದಲ್ಲಿದ್ದಾರೆ ಕೊಹ್ಲಿ.

ಗಂಭೀರ್​ನನ್ನ ಆಯ್ಕೆ ಮಾಡಿಸಿದ್ದು ದುಲೀಪ್ ಟ್ರೋಫಿ ಪಂದ್ಯಗಳು. ಕೋಚ್ ಅನಿಲ್ ಕುಂಬ್ಳೆಯೇ ಈ ಪಂದ್ಯಗಳನ್ನ ವೀಕ್ಷಿಸಿದ್ದರು. ದುಲೀಪ್ ಟ್ರೋಫಿಯ ಮೂರು ಪಂದ್ಯಗಳಿಂದ 356 ರನ್ ಬಾರಿಸಿದ್ದರು. 5 ಇನ್ನಿಂಗ್ಸ್​​ನಲ್ಲಿ 4 ಅರ್ಧಶತ ದಾಖಲಿಸಿದ್ದರು. ಅಷ್ಟು ಮಾತ್ರವಲ್ಲ, ಇಂಡಿಯಾ ಬ್ಲ್ಯೂ ತಂಡವನ್ನ ಮುನ್ನಡೆಸಿ, ದುಲೀಪ್ ಟ್ರೋಫಿ ಗೆಲ್ಲಿಸಿಕೊಟ್ಟಿದ್ದರು. ಗೌತಿ ಆಯ್ಕೆಯಾಗಲು ಕುಂಬ್ಳೆ ಕಾರಣ ಎನ್ನಲಾಗ್ತಿದೆ.

ಸದ್ಯ ಟೀಮ್ ಇಂಡಿಯಾದ ಓಪನಿಂಗ್ ಸ್ಥಾನಕ್ಕೆ ಫೈಟ್ ಇದೆ. ಶಿಖರ್ ಧವನ್, ಮುರಳಿ ವಿಜಯ್, ಕೆಎಲ್ ರಾಹುಲ್, ರೋಹಿತ್ ಶರ್ಮಾ ಹೀಗೆ ಮೂರು ಮಾದರಿಯಲ್ಲೂ ಸ್ಥಾನ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಬೇಕು. ಹೀಗಿರುವಾಗ ಗೌತಿ ಈಗ ಟೆಸ್ಟ್​ನಲ್ಲಿ ಸ್ಥಾನ ಪಡೆದು ಉತ್ತಮ ಪ್ರದರ್ಶನ ನೀಡಿದರಷ್ಟೇ ಉಳಿಗಾಲ್ಲ. ಇಲ್ಲವಾದ್ರೆ ಹೋದ ಪುಟ್ಟ ಬಂದ ಪುಟ್ಟ ಅನ್ನೋ ಹಾಗೆ ಆಗ್ತಾರೆ.

ಗಂಭೀರ್​ನನ್ನ ಟೀಮ್ ಇಂಡಿಯಾದಿಂದ ಎರಡು ವರ್ಷ ಕಿಕೌಟ್ ಮಾಡೋದಿಕ್ಕೆ ಕಳಪೆ ಫಾರ್ಮ್​ ಒಂದೇ ಕಾರಣವಲ್ಲ. ಅವರ ಮುಂಗೋಪಿ ತನವೂ ಕಾರಣ. ಸದಾ ಒಂದಲ್ಲ ಒಂದು ವಿಷ್ಯಕ್ಕೆ ಸಹ ಆಟಗಾರರು ಮತ್ತು ಎದುರಾಳಿ ಆಟಗಾರರು ಜೊತೆ ಕಿರಿಕ್ ಮಾಡಿಕೊಳ್ತಾಲೇ ಇರ್ತಾರೆ. ಇದೇ ಅವರನ್ನ ಟೀಮ್​ನಿಂದ ಡ್ರಾಪ್ ಮಾಡಿಸಿದ್ದು ಅನ್ನೋ ಸುದ್ದಿಯೂ ಇದೆ. ನನ್ನ ಸಿಟ್ಟು ನನಗೆ ಮಾರಕವಾಯ್ತು ಅಂತ ಗಂಭೀರ್ ಒಂದು ಬಾರಿ ಹೇಳಿಕೊಂಡಿದ್ದರು. ಮುಂಗೋಪಿತನದಿಂದ ಮನೆಯಲ್ಲೂ ಜಗಳಗಳಾಗಿವೆ ಅಂತಲೂ ಹೇಳಿದ್ದರು. 

ಒಂದು ಕಡೆ ಉತ್ತಮ ಪ್ರದರ್ಶನ ನೀಡ್ಬೇಕು. ಮತ್ತೊಂದು ಕಡೆ ತಮ್ಮ ಮುಂಗೋಪಿ ತನವನ್ನ ಕಮ್ಮಿ ಮಾಡಿಕೊಳ್ಳಬೇಕು. ಆಗ ಮಾತ್ರ ಟೀಮ್ ಇಂಡಿಯಾದಲ್ಲಿ ಗಟ್ಟಿಯಾಗಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯ. ಇಲ್ಲವಾದ್ರೆ ಮತ್ತೆ ಕಿಕೌಟ್ ಆಗೋ ಚಾನ್ಸಸ್ ಇರುತ್ತೆ,