‘ಪೋಡಿಯಂನಿಂದ ಫುಟ್ಪಾತ್ವರೆಗೆ': ಫುಟ್ಪಾತ್ನಲ್ಲೇ ಮಲಗಿದ ಒಲಿಂಪಿಕ್ಸ್ ಸಾಧಕರು!
ಬ್ರಿಜ್ಭೂಷಣ್ ವಿರುದ್ಧ ಎಫ್ಐಆರ್ಗೆ ಕುಸ್ತಿಪಟುಗಳ ಪಟ್ಟು
ನ್ಯಾಯ ಸಿಗುವವರೆಗೂ ಹೋರಾಟದ ಎಚ್ಚರಿಕೆ
ಲೈಂಗಿಕ ಕಿರುಕುಳ ಸೇರಿ ಗಂಭೀರ ಎದುರಿಸುತ್ತಿರುವ ಬ್ರಿಜ್ಭೂಷಣ್
ನವದೆಹಲಿ(ಏ.25): ಲೈಂಗಿಕ ಕಿರುಕುಳ ಸೇರಿ ಗಂಭೀರ ಪ್ರಕರಣಗಳಿಗೆ ಸಂಬಂಧಿಸಿದಂತೆ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಮಾಜಿ ಅಧ್ಯಕ್ಷ ಬ್ರಿಜ್ಭೂಷಣ್ ವಿರುದ್ಧ ಕ್ರಮಕೈಗೊಳ್ಳಲು ಒತ್ತಾಯಿಸಿ ದೇಶದ ಅಗ್ರ ಕುಸ್ತಿಪಟುಗಳು ಆಹೋರಾತ್ರಿ ಧರಣಿ ಆರಂಭಿಸಿದ್ದು, ಭಾನುವಾರ ಜಂತರ್ಮಂತರ್ನಲ್ಲಿ ಫುಟ್ಪಾತ್ನಲ್ಲೇ ಮಲಗಿದರು.
ಒಲಿಂಪಿಕ್ಸ್ ಪದಕ ವಿಜೇತರಾದ ಭಜರಂಗ್ ಪೂನಿಯಾ ಹಾಗೂ ಸಾಕ್ಷಿ ಮಲಿಕ್, 3 ಬಾರಿ ಕಾಮನ್ವೆಲ್ತ್ ಚಿನ್ನ ವಿಜೇತೆ ವಿನೇಶ್ ಫೋಗಾಟ್ ಸೇರಿದಂತೆ ಪ್ರಮುಖರು ಭಾನುವಾರ ಧರಣಿ ಆರಂಭಿಸಿದ್ದರು. ಬಳಿಕ ರಾತ್ರಿ ಅಲ್ಲೇ ತಂಗಿದ್ದಾರೆ. ಈ ಬಗ್ಗೆ ಫೋಟೋ ಹಂಚಿಕೊಂಡಿರುವ ವಿನೇಶ್, ‘ಪೋಡಿಯಂನಿಂದ ಫುಟ್ಪಾತ್ವರೆಗೆ. ಮಧ್ಯರಾತ್ರಿ ಆಕಾಶದ ಕೆಳಗೆ ನ್ಯಾಯಕ ನಿರೀಕ್ಷೆಯಲ್ಲಿ’ ಎಂದು ಬರೆದುಕೊಂಡಿದ್ದಾರೆ.
ಬ್ರಿಜ್ಭೂಷಣ್ ವಿರುದ್ಧ ಶೀಘ್ರ ಕ್ರಮಕೈಗೊಳ್ಳಬೇಕು ಹಾಗೂ ಮೇರಿ ಕೋಮ್ ನೇತೃತ್ವದ ಸಮಿತಿಯು ಕ್ರೀಡಾ ಸಚಿವಾಲಯಕ್ಕೆ ನೀಡಿದ್ದ ವರದಿಯನ್ನು ಬಹಿರಂಗಪಡಿಸುವಂತೆ ಪಟ್ಟುಹಿಡಿದಿದ್ದು, ನ್ಯಾಯ ಸಿಗುವವರೆಗೂ ವಿರಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ತಮ್ಮ ಹೋರಾಟವನ್ನು ಬೆಂಬಲಿಸುವಂತೆ ಎಲ್ಲಾ ರಾಜಕೀಯ ಪಕ್ಷಗಳಿಗೂ ಮನವಿ ಮಾಡಿದ್ದಾರೆ.
‘ಸುಪ್ರೀಂಗೆ ಹೋಗ್ತೇವೆ’
ಇನ್ನು, ಬ್ರಿಜ್ ವಿರುದ್ಧ ಎಫ್ಐಆರ್ ದಾಖಲಿಸದಿದ್ದರೆ ಸುಪ್ರೀಂ ಕೋರ್ಚ್ ಮೊರೆ ಹೋಗುವುದಾಗಿ ಕುಸ್ತಿಪಟುಗಳು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಕುಸ್ತಿಪಟುಗಳು ಶುಕ್ರವಾರ ಪೊಲೀಸರಿಗೆ ದೂರು ಸಲ್ಲಿಸಿದ್ದು, ಈವರೆಗೆ ಎಫ್ಐಆರ್ ದಾಖಲಾಗಿಲ್ಲ. ಇದೇ ವೇಳೆ ಡೆಲ್ಲಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ಸಲ್ಲಿಸಲು ತನಿಖಾ ಸಮಿತಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಬ್ರಿಜ್ಭೂಷಣ್ ವಿರುದ್ದ ಕುಸ್ತಿಪಟುಗಳಿಂದ ಮತ್ತೆ ಪ್ರತಿಭಟನೆ..!
ಡಬ್ಲ್ಯುಎಫ್ಐ ಚುನಾವಣೆಗೆ ತಡೆ
ಈ ನಡುವೆ ಮೇ 7ರಂದು ನಡೆಯಬೇಕಿದ್ದ ಡಬ್ಲ್ಯುಎಫ್ಐ ಚುನಾವಣೆಗೆ ಕೇಂದ್ರ ಕ್ರೀಡಾ ಸಚಿವಾಯಲ ತಡೆ ನೀಡಿದೆ. ಅಲ್ಲದೇ ಹೊಸ ಸಮಿತಿಯೊಂದನ್ನು ರಚಿಸಿ, 45 ದಿನಗಳಲ್ಲಿ ಚುನಾವಣೆ ಪ್ರಕ್ರಿಯೆಗಳನ್ನು ಮುಗಿಸುವಂತೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ)ಗೆ ಸೂಚನೆ ನೀಡಿದೆ. ಫೆಡರೇಶನ್ನ ಕಾರ್ಯಚಟುವಟಿಕೆ, ಟೂರ್ನಿಗಳಿಗೆ ಸ್ಪರ್ಧಿಗಳ ಆಯ್ಕೆಯನ್ನು ಕೂಡಾ ಇದೇ ಸಮಿತಿ ಮಾಡಲಿದೆ. ಈ ಬಗ್ಗೆ ಐಒಎ ಅಧ್ಯಕ್ಷೆ ಪಿ.ಟಿ.ಉಷಾ ಪ್ರತಿಕ್ರಿಯಿಸಿದ್ದು, ‘ಚುನಾವಣೆ ಪ್ರಕ್ರಿಯೆ ಬಗ್ಗೆ ಏ.27ಕ್ಕೆ ಸಭೆ ನಡೆಸಲಿದ್ದೇವೆ’ ಎಂದಿದ್ದಾರೆ. ಜನವರಿಯಲ್ಲಿ ಕುಸ್ತಿಪಟುಗಳಿಂದ ಆರೋಪಗಳಿಗೆ ತುತ್ತಾದ ಬಳಿಕ ಡಬ್ಲ್ಯುಎಫ್ಐನ ಎಲ್ಲಾ ಕಾರ್ಯಚಟುವಟಿಕೆಗಳನ್ನು ಕೇಂದ್ರ ಕ್ರೀಡಾ ಸಚಿವಾಲಯ ಸ್ಥಗಿತಗೊಳಿಸಿತ್ತು. ಬಳಿಕ ಚುನಾವಣೆ ಘೋಷಣೆಯಾದರೂ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಸ್ಪರ್ಧಿಸುವುದಿಲ್ಲ ಎಂದು ಬ್ರಿಜ್ಭೂಷಣ್ ಸ್ಪಷ್ಟಪಡಿಸಿದ್ದರು.
ಕ್ರೀಡಾಪಟುಗಳಿಗೆ ಮೂಲಸೌಕರ್ಯ ಒದಗಿಸಿ: ಮೋದಿ
ಇಂಫಾಲ: ದೇಶದಲ್ಲಿರುವ ಎಲ್ಲಾ ಪ್ರತಿಭಾನ್ವಿತ ಕ್ರೀಡಾಪಟುಗಳಿಗೂ ಗುಣಮಟ್ಟದ ಮೂಲಸೌಕರ್ಯ ಒದಗಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕ್ರೀಡಾ ಸಚಿವರಿಗೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ.
ಮಣಿಪುರ ರಾಜಧಾನಿ ಇಂಫಾಲದಲ್ಲಿ ನಡೆದ ಎಲ್ಲಾ ರಾಜ್ಯಗಳ ಕ್ರೀಡಾ ಸಚಿವರ ಸಭೆಯಲ್ಲಿ ವರ್ಚುವಲ್ ಆಗಿ ಮಾತನಾಡಿದ ಅವರು, ‘ಅಥ್ಲೀಟ್ಗಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಅಲ್ಲದೇ ಅಲ್ಪಾವಧಿ, ಮಧ್ಯಮ ಅವಧಿ ಹಾಗೂ ದೀರ್ಘ ಅವಧಿಯ ಗುರಿ ಇಟ್ಟುಕೊಂಡು ಕಾರಾರಯಚರಿಸಬೇಕು ಎಂದು ಸೂಚಿಸಿದ್ದಾರೆ. ಅಲ್ಲದೇ ಜಿಲ್ಲಾ ಮಟ್ಟದಲ್ಲಿ ಮೂಲಸೌಕರ್ಯಗಳು ಅಭಿವೃದ್ಧಿ ಪಡಿಸಿದಂತೆಯೇ ಬ್ಲಾಕ್ ಮಟ್ಟದಲ್ಲೂ ಎಲ್ಲಾ ರೀತಿಯ ಸೌಲಭ್ಯಗಳು ಸಿಗುವಂತೆ ಮಾಡಬೇಕು. ಇದರಿಂದ ಮಾತ್ರವೇ ದೇಶದ ಕ್ರೀಡಾ ಚಟುವಟಿಕೆಗಳು ಇನ್ನಷ್ಟು ಪ್ರಗತಿ ಸಾಧಿಸಲಿದೆ’ ಎಂದಿದ್ದಾರೆ.