ಬೆಂಗಳೂರಿನಲ್ಲಿ ಅಂಧರ ಕ್ರಿಕೆಟ್ ಅವಾರ್ಡ್ ಸಮಾರಂಭ- ಇಲ್ಲಿದೆ ಪ್ರಶಸ್ತಿ ಗೆದ್ದವರ ಲಿಸ್ಟ್!
ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆ, ಸಮರ್ಥನಂ ಟ್ರಸ್ಟ್ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ಅಂಧ ಕ್ರಿಕೆಟಿಗರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಾಜಿ ಕ್ರಿಕೆಟಿಗ ಸದಾನಂದ್ ವಿಶ್ವನಾಥ್ ಹಾಗೂ ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಜಿಕೆ ಮಹಾಂತೇಶ್ ಸಮಾರಂದಲ್ಲಿ ಪಾಲ್ಗೊಂಡಿದ್ದರು.
ಬೆಂಗಳೂರು(ಜೂ.09): ಈ ವರ್ಷ ದೇಶದಲ್ಲಿ ಅಂಧ ಮಹಿಳೆಯರ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲು ಭಾರತ ಅಂಧರ ಕ್ರಿಕೆಟ್ ಸಂಸ್ಥೆ ಮುಂದಾಗಿದೆ. ಶನಿವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಅಂಧರ ಕ್ರಿಕೆಟ್ ಸಂಸ್ಥೆಯ ಮೊದಲ ಪ್ರಶಸ್ತಿ ಪ್ರದಾನ(CABI) ಸಮಾರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಜಾನ್ ಡೇವಿಡ್ ಹೇಳಿದರು. ಶೀಘ್ರದಲ್ಲೇ ಅಂಧರ ದೇಸಿ ಕ್ರಿಕೆಟ್ ಟೂರ್ನಿಯನ್ನು ನಡೆಸುವುದಾಗಿಯೂ ತಿಳಿಸಿದರು. ಭಾರತ ಅಂಧರ ಕ್ರಿಕೆಟ್ ತಂಡದ ಸಾಧಕರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಇದೇ ವೇಳೆ ಭಾರತ ಪುರುಷರ ತಂಡ ಜುಲೈ 18ರಿಂದ 28ರ ವರೆಗೂ ಜಮೈಕಾ ಪ್ರವಾಸ ಕೈಗೊಳ್ಳಲಿದೆ ಎನ್ನುವ ಮಾಹಿತಿ ನೀಡಿದರು.
ಸುಂದರ ಸಮಾರಂಭದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪ್ರತಿಭಾವಂತ ಅಂಧ ಕ್ರಿಕೆಟಿಗರಿಗೆ ಪ್ರಶಸ್ತಿ ವಿತರಿಸಲಾಯಿತು. ಟೀಂ ಇಂಡಿಯಾ ಮಾಜಿ ವಿಕೆಟ್ ಕೀಪರ್, ಕನ್ನಡಿಗ ಸದಾನಂದ್ ವಿಶ್ವನಾಥ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪ್ರಶಸ್ತಿ ವಿತರಿಸಿದರು. CABI ಸಮಾರಂಭದ ರೂವಾರಿ ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ, ಸಮರ್ಥನಂ ಸಂಸ್ಥೆಯ ಸಂಸ್ಥಾಪಕ ಜಿಕೆ ಮಹಾಂತೇಶ್, ಪ್ರಶಸ್ತಿ ಪಡೆದ ಕ್ರಿಕೆಟಿಗರಿಗೆ ಶುಭಹಾರೈಸಿದರು.
B1 ವಿಭಾಗ- ವರ್ಷದ CABI ಕ್ರಿಕೆಟಿಗ ಪ್ರಶಸ್ತಿ ಪಡೆದ ಉತ್ತರ ಪ್ರದೇಶದ ಜೀಶನ್ ಹೈದರ್
B2 ವಿಭಾಗ- ವರ್ಷದ CABI ಕ್ರಿಕೆಟಿಗ ಪ್ರಶಸ್ತಿ ಪಡೆದ ನಾಯಕ ಅಜಯ್ ಕುಮಾರ್ ರೆಡ್ಡಿ
B3 ವಿಬಾಗ- ವರ್ಷದ CABI ಕ್ರಿಕೆಟಿಗ ಪ್ರಶಸ್ತಿ ಪಡೆದ ಕನ್ನಡಿಗ ಸುನಿಲ್ ಕುಮಾರ್
B1 ವಿಭಾಗ- ವರ್ಷದ CABI ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿ ಪಡೆದ ಕರ್ನಾಟಕದ ವೀರೇಶ್
ದೆಹಲಿಯ ರೋಹಿತ್ B2 ವಿಭಾಗ-ವರ್ಷದ CABI ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿ ಪಡೆದರೆ , B3 ವಿಬಾಗ- ವರ್ಷದ CABI ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿಯನ್ನು ಒಡಿಸ್ಸಾದ ಸಿಮರೈ ಮಾಜ್ಹಿ ಪಡೆದಿದ್ದಾರೆ.
2018-19ರ ಸಾಲಿನ CABI ಉದಯೋನ್ಮುಖ ತಂಡ ಪ್ರಶಸ್ತಿಗೆ ಜಾರ್ಖಂಡ್ ಪಾತ್ರವಾಗಿದೆ.
ಕೇರಳಾ ಅಂಧರ ಕ್ರಿಕೆಟ್ ಸಂಸ್ಥೆ ಅತ್ಯುತ್ತಮ ಅಂಧರ ಕ್ರಿಕೆಟ್ ಸಂಸ್ಥೆ ಅನ್ನೋ ಪ್ರಶಸ್ತಿ ಪಡೆದಿದೆ