ಕೆಲ ತಿಂಗಳುಗಳ ಹಿಂದಷ್ಟೇ ಆಸ್ಟ್ರೇಲಿಯಾದ ಗೋಲ್ಡ್’ಕೋಸ್ಟ್’ನಲ್ಲಿ ನಡೆದ ಕಾಮನ್’ವೆಲ್ತ್ ಗೇಮ್ಸ್’ನಲ್ಲಿ ಕನ್ನಡಿಗ ಗುರುರಾಜ್ ಪೂಜಾರಿ 56 ಕೆ.ಜಿ ವೇಯ್ಟ್’ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ್ದರು.

ಬೆಂಗಳೂರು[ಜು.22]: ಕೆಲ ತಿಂಗಳುಗಳ ಹಿಂದಷ್ಟೇ ಆಸ್ಟ್ರೇಲಿಯಾದ ಗೋಲ್ಡ್’ಕೋಸ್ಟ್’ನಲ್ಲಿ ನಡೆದ ಕಾಮನ್’ವೆಲ್ತ್ ಗೇಮ್ಸ್’ನಲ್ಲಿ ಕನ್ನಡಿಗ ಗುರುರಾಜ್ ಪೂಜಾರಿ 56 ಕೆ.ಜಿ ವೇಯ್ಟ್’ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ್ದರು. ಪ್ರಶಸ್ತಿ ಗೆದ್ದ ಬೆನ್ನಲ್ಲೇ ಹಿಂದಿನ ಸರ್ಕಾರ ಕೇವಲ ಆಶ್ವಾಸನೆ ಕೊಟ್ಟು ಮರೆತಿತ್ತು, ಈಗಿನ ಸರ್ಕಾರಕ್ಕೆ ಗುರುರಾಜ್ ಪೂಜಾರಿಯವರ ಸಾಧನೆಯನ್ನು ಮತ್ತೊಮ್ಮೆ ನೆನಪಿಸಿರುವ ಸುವರ್ಣನ್ಯೂಸ್.ಕಾಂ ಹಾಲಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರ ಗಮನಕ್ಕೆ ತರಲಾಗಿದೆ

Add Asianetnews Kannada as a Preferred SourcegooglePreferred

ಕೂಟದ ಮೊದಲ ದಿನವೇ ಭಾರತಕ್ಕೆ ಪದಕದ ಖಾತೆ ಆರಂಭಿಸಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದ ಗುರುರಾಜ್ ಅವರಿಗೆ ಅಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮಂತ್ರಿ ಪ್ರಮೋದ್ ಮಧ್ವರಾಜ್ 25 ಲಕ್ಷ ನಗದು ಹಾಗೂ ಬಿ ದರ್ಜೆ ಸರ್ಕಾರಿ ನೌಕರಿ ನೀಡುವುದಾಗಿ ಘೋಷಿಸಿದ್ದರು. ಇದಾದ ನಂತರ ಹೊಸ ಸರ್ಕಾರ ರಚನೆಯಾಗಿ ತಿಂಗಳುಗಳೇ ಕಳೆದಿದ್ದರೂ ಗುರುರಾಜ್ ಅವರಿಗೆ ನೀಡಿದ್ದ ಆಶ್ವಾಸನೆ ಕೇವಲ ಮರೀಚಿಕೆಯಾಗಿಯೇ ಉಳಿದಿತ್ತು. 

ಈ ವಿಚಾರವನ್ನು ಮೊಟ್ಟಮೊದಲ ಬಾರಿಗೆ ಗುರುರಾಜ್ ಪೂಜಾರಿ ಎಕ್ಸ್’ಕ್ಲೂಸಿವ್ ಆಗಿ ನಮ್ಮ 'ಸುವರ್ಣನ್ಯೂಸ್.ಕಾಂ ವೆಬ್’ಸೈಟ್’'ನೊಂದಿಗೆ ಹಂಚಿಕೊಂಡಿದ್ದರು.

ಅದಾದ ಬಳಿಕ ಈ ವಿಚಾರವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೂ ತಲುಪಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ’ಹಲೋ ಸಿಎಂ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ನನಗೆ ಈ ವಿಚಾರ ತಿಳಿದಿರಲಿಲ್ಲ. ಬಹುಮಾನ ಹಾಗೂ ಉದ್ಯೋಗದ ಭರವಸೆಯನ್ನು ಅತಿ ಶೀಘ್ರದಲ್ಲಿ ನೆರವೇರಿಸಲಿದ್ದೇನೆ. ಉಡುಪಿಯ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಅವರನ್ನು ಮಂಗಳವಾರ ವಿಧಾನಸೌಧದಲ್ಲಿ ಭೇಟಿಯಾಗಲಿದ್ದೇನೆ ಎಂದು ಮುಖ್ಯಮಂತ್ರಿಯವರು ಹೇಳಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದೇನು ನೀವೇ ನೋಡಿ...

"